ಹೈಕೋರ್ಟ್ ನಲ್ಲಿ ಉಡುಪಿ ಮಠದ ಉತ್ತರಾಧಿಕಾರಿ ವಿವಾದ: ಸದುದ್ದೇಶವೋ, ದುರುದ್ದೇಶವೋ - ಸರಣಿ 3
ಹೈಕೋರ್ಟ್ ಮೆಟ್ಟಲೇರಿರುವ ಉಡುಪಿ ಶಿರೂರು ಮಠದ ಉತ್ತರಾಧಿಕಾರಿ ಆಯ್ಕೆಯ ವಿಚಾರವನ್ನು ಎರಡು ಆಯಾಮದಲ್ಲಿ ನೋಡಬಹುದಾಗಿದೆ. ಅಷ್ಟಮಠಗಳ ಇತಿಹಾಸದಲ್ಲಿ ಅಪ್ರಾಪ್ತರಿಗೆ ಪೀಠಾಧಿಪತಿ ಮಾಡಿದ ಸಾಕಷ್ಟು ಉದಾಹರಣೆಗಳನ್ನು ಕಳೆದ ಲೇಖನದಲ್ಲಿ ಸ್ವಾಮೀಜಿಗಳ ಹೆಸರು ಮತ್ತು ಯಾವ ಮಠಕ್ಕೆ ಪೀಠಾಧಿಪತಿಗಳಾಗಿದ್ದಾರೆಂದು ಹೇಳಲಾಗಿದೆ.
ಈ ವಿಚಾರದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಚಾರವೇನಂದರೆ, ಹರಿಪಾದ ಸೇರಿರುವ ಶಿರೂರು ಮಠದ ಯತಿಗಳಾದ ಲಕ್ಷ್ಮೀವರ ತೀರ್ಥರು ತಮ್ಮ ಎಂಟನೇ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿರುವುದು. ಪೀಠದಲ್ಲಿದ್ದ ಅವರ ಸಹೋದರ ಪೀಠತ್ಯಾಗ ಮಾಡಿದ ಕಾರಣಕ್ಕಾಗಿ ಆ ವಯಸ್ಸಲ್ಲೇ ಅವರಿಗೆ ಸನ್ಯಾಸ ದೀಕ್ಷೆ ನೀಡಲಾಗಿತ್ತು. ಸೋದೆ ಮಠದ ಹಿಂದಿನ ಶ್ರೀಗಳೇ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ್ದರು.
ಉಡುಪಿ ಮಠದ ಉತ್ತರಾಧಿಕಾರಿ ವಿವಾದ: ಅಪ್ರಾಪ್ತರಿಗೆ ಸನ್ಯಾಸ ದೀಕ್ಷೆಯ ಇತಿಹಾಸ - ಸರಣಿ 2
ಹಾಗಾಗಿ, ಅವರ ಪೂರ್ವಾಶ್ರಮದ ಸಹೋದರರಾದ ಲಾತವ್ಯ ಆಚಾರ್ಯರು ಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಿರುವ ಹಿಂದೆ ಬೇರೆ ಏನಾದರೂ, ಉದ್ದೇಶವಿದೆಯೋ ಎನ್ನುವುದು ಸದ್ಯಕ್ಕೆ ಹರಿಭಕ್ತರಲ್ಲಿ ಕಾಡುವ ಪ್ರಶ್ನೆ ಮತ್ತು ಆ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಉತ್ತರ ಸಿಕ್ಕರೂ ಸಿಗಬಹುದು.
ಕೋರ್ಟ್ ಮೆಟ್ಟಲೇರಿರುವುದಿರಕ್ಕೆ ಹಲವು ಕಾರಣಗಳನ್ನು ಅರ್ಜಿದಾರರು ಕೋರ್ಟ್ ನಲ್ಲಿ ನೀಡಿದ್ದಾರೆ. ಅಪ್ರಾಪ್ತ ವಯಸ್ಕ, ಬಲವಂತದ ಪೀಠಾರೋಹಣ, ಮಠದ ಆಸ್ತಿಪಾಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ, ಬಾಲಕ ಶಿರೂರು ಮಠದ ಶಿಷ್ಯನಾಗಿರಲಿಲ್ಲ.. ಹೀಗೆ..
ಉಡುಪಿ ಮಠದ ಉತ್ತರಾಧಿಕಾರಿ ವಿವಾದ: ಮಾಧ್ವಪೀಠದ ಇತಿಹಾಸ ಏನು ಹೇಳುತ್ತೆ- ಸರಣಿ 1
ಶಿರೂರು ಮಠದ ಯತಿವರ್ಯರಾದ ಲಕ್ಷ್ಮೀವರ ತೀರ್ಥರು ಹರಿಪಾದ ಸೇರಿದ ಸಂದರ್ಭ
ಲಕ್ಷ್ಮೀವರ ತೀರ್ಥರು ಹರಿಪಾದ ಸೇರಿದ ನಂತರ ಮಠದ ಆಸ್ತಿಪಾಸ್ತಿ ದುರ್ಬಳಕೆ, ಆಸ್ತಿ ಲಪಟಾಯಿಸಿರುವುದು, ಮದ್ಯಮಾನಿನಿ ಮುಂತಾದ ವಿಚಾರಗಳು ರಾಜ್ಯಾದ್ಯಂತ ಸುದ್ದಿಯಾಗಿದ್ದವು. ಖುದ್ದು ಪೇಜಾವರ ಹಿರಿಯ ಶ್ರೀಗಳೇ ಈ ವಿಚಾರವನ್ನು ಹೇಳಿದ್ದರು. ಆದರೆ, ಇವೆಲ್ಲವೂ, ಶಿರೂರು ಮಠವು ಸೋದೆ ಮಠದ ಸುಪರ್ದಿಗೆ ಬರುವ ಮುನ್ನ ಆಗಿರುವಂತಹ ಘಟನೆಗಳಾಗಿದ್ದವು.
ನೂತನ ಉತ್ತರಾಧಿಕಾರಿಯವರ ತಂದೆ ಸೋದೆ ಮಠದ ಆಸ್ಥಾನ ವಿದ್ವಾಂಸರು
ಇನ್ನು ಲಾತವ್ಯ ಆಚಾರ್ಯ ಆರೋಪಿಸಿರುವಂತೆ ಬಲವಂತದ ಸನ್ಯಾಸತ್ವದ ಬಗ್ಗೆ ಅಷ್ಟಮಠದ ಇತಿಹಾಸದಲ್ಲಿ ಇಂತಹ ಆರೋಪ ಬಂದ ಉದಾಹರಣೆಗಳೇ ಇಲ್ಲ ಎನ್ನಬಹುದು. ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕಾದ ಅಂಶವೇನಂದರೆ, ನೂತನ ಉತ್ತರಾಧಿಕಾರಿಯವರ ಪೂರ್ವಾಶ್ರಮದ ತಂದೆಯವರು ಸೋದೆ ಮಠದ ಆಸ್ಥಾನ ವಿದ್ವಾಂಸರಾಗಿರುವವರು. ಜೊತೆಗೆ, ಮಠದ ಜೊತೆ ಸಂಪರ್ಕದಲ್ಲಿ ಇರುವ ಕುಟುಂಬದ ವಟುಗಳನ್ನೇ ಸನ್ಯಾಸತ್ವಕ್ಕೆ ಆಯ್ಕೆ ಮಾಡುವುದು ಅಷ್ಟಮಠದ ಸಂಪ್ರದಾಯ.
ತಮ್ಮ ಆಪ್ತರನ್ನು ಪೀಠಾಧಿಪತಿ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲ ಎನ್ನುವ ಉದ್ದೇಶವಿದೆ
ಪಿಐಎಲ್ ಸಲ್ಲಿಸಿದವರಿಗೆ ಮಠದ ಆಸ್ತಿಯ ಮೇಲೆ ಕಣ್ಣಿದೆ, ತಮ್ಮ ಆಪ್ತರನ್ನು ಪೀಠಾಧಿಪತಿ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲ ಎನ್ನುವ ಉದ್ದೇಶವಿದೆ ಎನ್ನುವುದು ಸೋದೆ ಮಠದ ನಿಲುವು. ಕೋರ್ಟ್ ಮಾಹಿತಿ ಕೇಳಿದರೆ ಸೂಕ್ತ ಉತ್ತರ ಕೊಡಲು ಸೋದೆ ಮಠ ಸಿದ್ದವಾಗಿದೆ. ಇತ್ತ, ಲಾತವ್ಯ ಆಚಾರ್ಯ ಕೂಡಾ ಕೋರ್ಟ್ ನಲ್ಲಿ ಬಲವಾದ ವಾದ ಮಂಡಿಸಲು ಮುಂದಾಗಿದ್ದಾರೆ.
Recommended Video
ಸರಕಾರ ಕಣ್ಣುಮುಚ್ಚಿ ಕೂರಬಾರದು ಎನ್ನುವ ಹೈಕೋರ್ಟ್ ಅಭಿಪ್ರಾಯ
ಆದರೆ, ಅಪ್ರಾಪ್ತರನ್ನು ಸನ್ಯಾಸ ಸ್ವೀಕರಿಸುವಂತೆ ಮಾಡಿದರೆ, ಸರಕಾರ ಕಣ್ಣುಮುಚ್ಚಿ ಕೂರಬಾರದು ಎನ್ನುವ ಹೈಕೋರ್ಟ್ ಅಭಿಪ್ರಾಯ ನೀಡಿರುವುದರಿಂದ, ನ್ಯಾಯಾಲಯದಲ್ಲಿ ಸೋದೆ ಮಠ ಮತ್ತು ಅರ್ಜಿದಾರರ ವಾದ ಮುಂದುವರಿಯಲಿದೆ. ಮಠದ ಭಕ್ತರ ಕಣ್ಣು ಈಗ ಹೈಕೋರ್ಟ್ ನಲ್ಲಿ ನಡೆಯುವ ವಿಚಾರಣೆಯ ಮೇಲಿದೆ, ಜೂನ್ ಎರಡಕ್ಕೆ ಮುಂದಿನ ಹಂತದ ವಿಚಾರ ನಡೆಯಲಿದೆ. ಇದಿಷ್ಟು ಈ ವಿವಾದ ಮತ್ತು ಇದರ ಹಿಂದಿನ ಚುಟುಕು ಮಾಹಿತಿ.