ಬ್ರಾಹ್ಮೀ ದುರ್ಗಾಪರಮೇಶ್ವರಿ ಕ್ಷೇತ್ರ ಕಮಲಶಿಲೆಯಲ್ಲಿ ಶರನ್ನವರಾತ್ರಿ ಉತ್ಸವ
ಉಡುಪಿ, ಸೆಪ್ಟೆಂಬರ್ 26: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ನೆಲೆಸಿರುವ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ನವರಾತ್ರಿ ಉತ್ಸವವು ಶ್ರೀವಿಕಾರಿ ನಾಮಸಂವತ್ಸರದ ಅಶ್ವಯುಜ ಶುದ್ಧ ಪ್ರತಿಪದಿ ಭಾನುವಾರ, ಸೆಪ್ಟೆಂಬರ್ 29ರಿಂದ ಪ್ರಾರಂಭಗೊಂಡು ಅಶ್ವಯುಜ ಶುದ್ಧ ದಶಮಿ ಅಕ್ಟೋಬರ್ 8ರವರೆಗೆ ನಡೆಯಲಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲಾಗಿದೆ.
ಪ್ರತಿದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಸುತ್ತುಬಲಿ ನಡೆಯುತ್ತದೆ. ಅಕ್ಟೋಬರ್ 5ರಂದು ರಾತ್ರಿ ಶಾರದಾ ದೇವಿಯ ಪ್ರತಿಷ್ಠಾಪನಾ ಕಾರ್ಯ ಜರುಗಲಿದ್ದು, ವಿಶೇಷ ಪೂಜಾ ಕೈಂಕರ್ಯಗಳಿವೆ. ಅ 7ರಂದು ಮಧ್ಯಾಹ್ನ ಚಂಡಿಕಾ ಹವನ ಮತ್ತು ರಾತ್ರಿ ರಜತ ಮಹೋತ್ಸವ ಲಾಲ್ಕಿ ಉತ್ಸವ ನಡೆಯುತ್ತದೆ. ಅ 8ಕ್ಕೆ ಕದಿರು ಮುಹೂರ್ತ, ಕಣಜ ತುಂಬಿಸುವುದು, ದಶಮಿ ಪೂಜೆ, ವಿಜಯೋತ್ಸವ ಮತ್ತು ಸಂಜೆ ದಶಮಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿಯ ಕೃಷ್ಣನ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?
ದೂರದವರಿಗೆ ವಸತಿ ಮತ್ತು ಊಟದ ವ್ಯವಸ್ಥೆ: ಪ್ರತಿದಿನವೂ ಭಜನಾ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ದೂರದಿಂದ ಬರುವವರಿಗೆ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಇದೆ. ಉಡುಪಿ ಜಿಲ್ಲೆಯಲ್ಲೇ ಊಟದ ವಿಚಾರದಲ್ಲಿ ಪ್ರಸಿದ್ಧಿ ಎನ್ನಿಸಿರುವ ಶ್ರೀಕ್ಷೇತ್ರ ಕಮಲಶಿಲೆ ಬಂದಿರುವ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಉಚಿತ ಅನ್ನಸಂತರ್ಪಣೆ ಸೇವೆಯನ್ನು ನೀಡಲಾಗುತ್ತದೆ.
ನಾಡ ಅಧಿದೇವತೆ ಚಾಮುಂಡಿಗೆ ವೈಭವದ ವರ್ಧಂತಿ ಸಂಭ್ರಮ
ದೇವಸ್ಥಾನಕ್ಕೆ ಆಗಮಿಸಲು ವಿಶೇಷ ವಾಹನ ವ್ಯವಸ್ಥೆ: ಕುಂದಾಪುರದಿಂದ ಶಿವಮೊಗ್ಗ ಮಾರ್ಗ ಮಧ್ಯೆಯ ಸಿದ್ಧಾಪುರದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ದೇವಸ್ಥಾನಕ್ಕೆ ನವರಾತ್ರಿ ವೇಳೆಯಲ್ಲಿ ಆಗಮಿಸುವುದಕ್ಕೆ ವಿಶೇಷ ವಾಹನ ಸೌಲಭ್ಯವೂ ಲಭ್ಯ. ರಾತ್ರಿ ವೇಳೆಯ ಉತ್ಸವದ ನಂತರ ತಮ್ಮ ತಮ್ಮ ಊರುಗಳಿಗೆ ತಲುಪುದಕ್ಕೆ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಸಿದ್ಧಾಪುರ ಮತ್ತು ಹಳ್ಳಿಹೊಳೆ ಕಡೆ ಹೋಗುವವರಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಹಬ್ಬದಂತೆ ನೆರವೇರುವ ಶ್ರೀ ಕ್ಷೇತ್ರ ಕಮಲಶಿಲೆಯ ಶರನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅನುವಂಶಿಕ ಆಡಳಿತ ಮುಕ್ತೇಸರರಾಗಿರುವ ಸಚ್ಚಿದಾನಂದ ಚಾತ್ರರು ಮತ್ತು ಅನುವಂಶಿಕ ಟ್ರಸ್ಟಿಗಳಾಗಿರುವ ಬರೆಗುಂಡಿ ಶ್ರೀನಿವಾಸ ಚಾತ್ರರು, ಆಜ್ರಿ ಚಂದ್ರಶೇಖರು ಶೆಟ್ಟರು ಕೋರಿದ್ದಾರೆ.