ನವರಾತ್ರಿ ಎಫೆಕ್ಟ್: ಉಡುಪಿ ಮಲ್ಲಿಗೆ ಬೆಲೆ ಗಗನಕ್ಕೆ
ಉಡುಪಿ, ಅಕ್ಟೋಬರ್ 17: ನವರಾತ್ರಿ ಹಬ್ಬ ಪ್ರಾರಂಭವಾಗುವುದರೊಂದಿಗೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರತೊಡಗಿದೆ. ನೀರುಳ್ಳಿ ಬೆಲೆ ಜಾಸ್ತಿಯಾಗುವುದರ ಜೊತೆಯಲ್ಲೇ ಮಲ್ಲಿಗೆ ದರವೂ ಗಗನಮುಖಿಯಾಗಿದೆ.
ಉಡುಪಿಯ ಪ್ರಸಿದ್ಧ ಶಂಕರಪುರ ಮಲ್ಲಿಗೆ ಜನಸಾಮಾನ್ಯರ ಕೈಗೆ ಎಟುಕುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ನೆಗೆಯುತ್ತಲೇ ಇದ್ದ ಮಲ್ಲಿಗೆ ದರ ಕ್ರಮೇಣ ಇಳಿದಿತ್ತು. ಇದೀಗ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದಿಢೀರ್ ಎಂದು ಬೆಲೆ ಏರಿಕೆ ಕಂಡಿದೆ. ಸದ್ಯ ನವರಾತ್ರಿಯ ಮೊದಲ ದಿನವಾದ ಇಂದು ಶಂಕರಪುರ ಮಲ್ಲಿಗೆ ಅಟ್ಟೆಯೊಂದಕ್ಕೆ 1250 ರೂಪಾಯಿ ದರ ನಿಗದಿಯಾಗಿದೆ. ಆದರೆ ಕೆಲೆವೆಡೆ ಮಾರುಕಟ್ಟೆಯಲ್ಲಿ 1600 ರೂಪಾಯಿಗೆ ಮಲ್ಲಿಗೆ ಮಾರಾಟವಾಗುತ್ತಿದೆ.
ಉಡುಪಿ ಮಲ್ಲಿಗೆಗೆ ಕುದುರಿದ ಬೇಡಿಕೆ: ಕೃಷಿಕರ ಮೊಗದಲ್ಲಿ ಮಂದಹಾಸ
Recommended Video
ಭಟ್ಕಳ ಮಲ್ಲಿಗೆಗೆ 1250 ರೂಪಾಯಿ ದರನಿಗದಿಯಾಗಿದ್ದು, ಮಾರುಕಟ್ಟೆಯಲ್ಲಿ 1400 ರೂಪಾಯಿಗೆ ಮಾರಾಟವಾಗುತ್ತಿದೆ. ನವರಾತ್ರಿ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿಗೆ ಭಾರೀ ಬೇಡಿಕೆ ಕುದುರಿದ್ದರಿಂದ ಈ ಹೆಚ್ಚಳ ಕಂಡುಬಂದಿದೆ. ಮಳೆಯಿಂದಾಗಿ ಈ ಬಾರಿ ಮಲ್ಲಿಗೆ ಬೆಳೆ ಇಳುವರಿಯಲ್ಲಿ ಕುಂಠಿತ ಕಂಡುಬಂದಿದ್ದು, ಹೆಚ್ಚಿನವರು ಮಲ್ಲಿಗೆ ಬದಲಿಗೆ ಜಾಜಿ ಮಲ್ಲಿಗೆ ಹೂವು ಖರೀದಿಸುತ್ತಿದ್ದಾರೆ. ಈ ಕಾರಣದಿಂದ ಜಾಜಿ ಹೂವಿಗೂ ಬೇಡಿಕೆ ಹೆಚ್ಚಿ ಸಾವಿರದ ಗಡಿ ದಾಟಿದೆ.