250ವರ್ಷಗಳ ನಂತರ ಉಭಯ ಶ್ರೀಗಳ 'ಐತಿಹಾಸಿಕ ಸಮಾಗಮ'ಕ್ಕೆ ಉಡುಪಿ ಸಜ್ಜು
ಉಡುಪಿ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು ಮತ್ತು ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರ 'ಸಮಾಗಮ' ಉಡುಪಿ ಅನಂತೇಶ್ವರನ ಸನ್ನಿಧಾನದಲ್ಲಿ ಮೇ 29ರಂದು ನಡೆಯಲಿದೆ.
ಸುಮಾರು ಎರಡುವರೆ ಶತಮಾನಗಳ ನಂತರ ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರ, ಶ್ರೀಕೃಷ್ಣನ ನೆಲೆವೀಡು ಉಡುಪಿ, ಯತಿಗಳಿಬ್ಬರ ಐತಿಹಾಸಿಕ ಸಮಾಗಮಕ್ಕೆ ಸಾಕ್ಷಿಯಾಗಲಿದೆ.
ದ್ವೈತ ಸಿದ್ದಾಂತದ ಪ್ರಮುಖ ಗುರುಪೀಠ, ಉಡುಪಿ ಅಷ್ಠಮಠಗಳಲ್ಲೊಂದಾದ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು ಮತ್ತು ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರ 'ಸಮಾಗಮ' ಉಡುಪಿ ಅನಂತೇಶ್ವರನ ಸನ್ನಿಧಾನದಲ್ಲಿ ನಡೆಯಲಿದೆ.
ಆಚಾರ್ಯ ಮಧ್ವರು ಅದೃಶ್ಯರಾದ ಉಡುಪಿ, ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ, ಸೋಮವಾರ ಮೇ 29ರಂದು 9ಗಂಟೆಗೆ, ಪರ್ಯಾಯ ಹಿರಿಯ ಪೇಜಾವರ ಶ್ರೀಗಳು ಮತ್ತು ಅಷ್ಠಮಠಗಳ ಇತರ ಯತಿಗಳ ಸಮ್ಮುಖದಲ್ಲಿ ಸೋದೆ ಮತ್ತು ಸುಬ್ರಮಣ್ಯ ಶ್ರೀಗಳ ಸಮಾಗಮ ನಡೆಯಲಿದೆ.ಇದಾದ ನಂತರ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಉಡುಪಿಯ ಕಾರ್ಯಕ್ರಮದ ನಂತರ, ಮೇ 30ರಂದು ಸಂಜೆ 4ಗಂಟೆಗೆ ಸುಬ್ರಮಣ್ಯ ಪೀಠಾಧಿಪತಿಗಳ ಸೋದೆ ಪುರಪ್ರವೇಶ, ಮೇ 31ರಂದು ಸಂಜೆ 5ಗಂಟೆಗೆ ಸೋದೆ ಶ್ರೀಗಳ ಸುಬ್ರಮಣ್ಯ ಕ್ಷೇತ್ರ ಪುರಪ್ರವೇಶ ನಡೆಯಲಿದೆ.
ಸುಮಾರು 230-250 ವರ್ಷಗಳ ಹಿಂದೆ ಈ ಎರಡು ಮಠಗಳ ಯತಿಗಳ ನಡುವೆ ಶುರುವಾದ ಭಿನ್ನಾಭಿಪ್ರಾಯ ಇದುವರೆಗೂ ಮುಂದುವರಿಯುತ್ತಲೇ ಬಂದು, ಪರಸ್ಪರ ಮುಖಾವಲೋಕನ ಮಾಡಿಕೊಳ್ಳದ ಮಟ್ಟಿಗೆ ಸಾಗಿತ್ತು. ಎರಡು ಮಠಗಳ ನಡುವಿನ ಮನಸ್ತಾಪಕ್ಕೆ ಕಾರಣವೇನು? ಮುಂದೆ ಓದಿ (ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಮುದ್ರಿತವಾದಂತೆ)
ಮಧ್ವಾಚಾರ್ಯರ ಸೋದರರಿಂದ ಆರಂಭವಾದ ಮಠ
ತ್ರೈಲೋಕಗುರು ಮಧ್ವಾಚಾರ್ಯರ ಸೋದರ ಶ್ರೀವಿಷ್ಣುತೀರ್ಥಾಚಾರ್ಯರಿಂದ ಆರಂಭಗೊಂಡಿದ್ದು ಸೋದೆ ಮಠ ಮತ್ತು ಸುಬ್ರಮಣ್ಯ ಮಠ ಎನ್ನುವ ಪರಂಪರೆ. ಹದಿನೆಂಟನೇ ಶತಮಾನದಲ್ಲಿ ಉಂಡಾರು ಎನ್ನುವ ಗ್ರಾಮದಲ್ಲಿನ ಒಂದೇ ತಾಯಿಯ ಮಕ್ಕಳ ಸಹೋದರರು 13ವರ್ಷದ ಅಂತರದಲ್ಲಿ ಸೋದೆ ಮತ್ತು ಸುಬ್ರಮಣ್ಯ ಮಠದ ಪೀಠಾಧಿಪತಿಗಳಾಗುತ್ತಾರೆ.
ಸೋದೆ ಮತ್ತು ಸುಬ್ರಮಣ್ಯ ಮಠದ ಯತಿಗಳು
ಸೋದೆ ಮಠದಲ್ಲಿ ಶ್ರೀವಿಶ್ವನಿಧಿತೀರ್ಥರು 1740-1753ರ ಅವಧಿಯಲ್ಲಿ ಮತ್ತು ಅವರ ಪೂರ್ವಾಶ್ರಮದ ಸಹೋದರ ಶ್ರೀವಿಶ್ವಾಧೀಶತೀರ್ಥರು 1753-1803ರ ಅವಧಿಯಲ್ಲಿ ಸುಬ್ರಮಣ್ಯ ಮಠದ ಪೀಠಾಧಿಪತಿಗಳಾಗುತ್ತಾರೆ.
ಭಿಕ್ಷೆಯ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ
ಈ ಅವಧಿಯಲ್ಲಿ ಭಿಕ್ಷೆಯ ವಿಚಾರದಲ್ಲಿ ಉಂಟಾದ ಮನಸ್ತಾಪ ಉಭಯ ಶ್ರೀಗಳ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಹಾಕಿತ್ತು. ಮಠದ ಮುಂದಿನ ಪರಂಪರೆಯ ಯತಿಗಳಿಗೆ ಪರಸ್ಪರ ಮುಖಾವಲೋಕನವೂ ಇಲ್ಲದಾಯಿತು.
ಕುಮಾರಧಾರ ನದಿ ದಾಟುವಂತಿಲ್ಲ
ಸುಬ್ರಮಣ್ಯ ಶ್ರೀಗಳು ಸೋದೆ ಕ್ಷೇತ್ರಕ್ಕೆ ಬರಬಹುದಾಗಿದ್ದರೂ, ಸೋದೆ ಮಠಾಧೀಶರು ಕುಮಾರಧಾರಾ ನದಿಯನ್ನು ದಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಹೋಗುವಂತಿರಲಿಲ್ಲ. ಈ ಮನಸ್ತಾಪ, ಇದುವರೆಗೂ ಮುಂದುವರಿದುಕೊಂಡು ಬಂದು, ಈಗ ಹರಿವಾಯುಗುರುರಾಜರ ಪ್ರೇರಣೆಯಂತೆ ಸೋದೆ ಮತ್ತು ಸುಬ್ರಮಣ್ಯ ಮಠಗಳ ಸಂಬಂಧ ಮತ್ತೆ ಕೂಡುವ ಕಾಲ ಬಂದಿದೆ ಎಂದು ಸೋದೆ ಮಠದ ಪ್ರಕಟಣೆ ತಿಳಿಸಿದೆ.
ಭಕ್ತರಿಗೆ ಸಂತಸ
ಸಾರ್ವಜನಿಕರೂ ನಾಚಿಸುವಂತೆ ಸರ್ವಸಂಗ ಪರಿತ್ಯಾಗಿಗಳಾದ ಯತಿಗಳ, ಶತಮಾನಗಳಿಂದ ಮುಂದುವರಿಯುತ್ತಲೇ ಬಂದ ಈ ಮನಸ್ತಾಪಕ್ಕೆ ಅಂತೂ ಪೂರ್ಣವಿರಾಮ ಬೀಳುತ್ತಿರುವುದು ಎರಡೂ ಮಠದ ಭಕ್ತರಿಗೆ ಸಂತಸ ತಂದಿದೆ.