ಆಯುರ್ವೇದ ಚಿಕಿತ್ಸೆಗಾಗಿ ಉಡುಪಿಯ ಕಾಪುವಿಗೆ ಬಂದ ರಷ್ಯಾ ನಟಿ
ಉಡುಪಿ, ಡಿಸೆಂಬರ್ 11: ಆಕೆ ವಿಶ್ವ ಮೆಚ್ಚಿದ ಕಾಮಿಡಿಯನ್; ರಷ್ಯಾ ದೇಶದಲ್ಲಿ ಅನ್ನಾ ಅರ್ದೋವ ಹೆಸರು ಕೇಳಿದರೆ ಸಾಕು, ಜನ ನಕ್ಕು ಹಗುರಾಗ್ತಾರೆ.
ಆದರೆ ಸಂತೋಷ ಹಂಚುವ ಆಕೆಯ ಮನಸ್ಸಲ್ಲಿ ಮಾತ್ರ ಅದೇನೋ ಹೇಳಲಾಗದ ನೋವು. ನೋವಿಗೆ ಪರಿಹಾರ ಸಿಕ್ಕಿದ್ದು ಮಾತ್ರ ಭಾರತದ ನೆಲದಲ್ಲಿ. ಉಡುಪಿಯ ಕಾಪುವಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದು ಮತ್ತೆ ಕಾಮಿಡಿ ಪಂಚ್ ನೀಡಲು ಈ ಖ್ಯಾತ ನಟಿ ಸಜ್ಜಾಗುತ್ತಿದ್ದಾರೆ.
ಲವಲವಿಕೆಗೆ ಇನ್ನೊಂದು ಹೆಸರು ಅನ್ನಾ ಅರ್ದೋವ. ರಷ್ಯಾದಲ್ಲಿ ತನ್ನ ಕಾಮಿಡಿ ಪಂಚ್ ಮತ್ತು ಮ್ಯಾನರಿಸಂನಿಂದ ಗಮನ ಸೆಳೆದ ಅಪರೂಪದ ನಟಿ ಇವರು. ಬಾಲನಟಿಯಾಗಿ ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟ ಅನ್ನಾ ಅರ್ದೋವ, ನಂತರ ನಗಿಸಿ ಸಂತೋಷ ಹಂಚುವ ಕಾಯಕದಲ್ಲೇ ಈಗ ಮೂರು ದಶಕ ಕಳೆದಿದ್ದಾರೆ.
ಮರಳಿ ಪಡೆದ ಸಂತೋಷ
ಹೀಗಿದ್ದೂ ಒತ್ತಡದ ಜೀವನ ಅವರಿಗೆ ಜಿಗುಪ್ಸೆ ತಂದಿತ್ತು. ನೆಮ್ಮದಿ, ಶಾಂತಿ ಅರಸಿ ಹೊರಟವರು ತಲುಪಿದ್ದು ನಮ್ಮ ಕನ್ನಡದ ನೆಲಕ್ಕೆ. ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಡಾ. ತನ್ಮಯ ಗೋಸ್ವಾಮಿ ನಡೆಸುವ ಪಂಚ ಕರ್ಮ ಚಿಕಿತ್ಸಾಲಯದಲ್ಲಿ ಕಳೆದು ಹೋದ ಸಂತೋಷವನ್ನು ಮರಳಿ ಪಡೆದಿದ್ದಾರೆ. ಸಹಜ ಬದುಕು ನಡೆಸುವ ಭಾರತೀಯರ ಸರಳತೆಗೆ ಅನ್ನಾ ಅರ್ದೋವ ಮಾರು ಹೋಗಿದ್ದಾರೆ.
ಆಯುರ್ವೇದ ಚಿಕಿತ್ಸೆ
ಒತ್ತಡದ ಜೀವನದಿಂದ ಬಳಲಿದ್ದ ಅನ್ನಾ ಅರ್ದೋವಾಗೆ 12 ದಿನಗಳ ಆಯುರ್ವೇದ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆ ನೀಡಲಾಗಿದೆ. ಸರಳ ಯೋಗಾಭ್ಯಾಸಗಳನ್ನು ಕಲಿಸಲಾಗಿದೆ. ತಾನು ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋಗಳಿಗೆ ಮರಳಲು ಈ ಎರಡು ವಾರ ನನಗೆ ಹೊಸ ಚೇತನ ನೀಡಿದೆ ಅನ್ನೋದು ಅನ್ನಾ ಅಭಿಮತ.
'ಶೋ ಮ್ಯಾನ್' ಅಭಿಮಾನಿ
ವಾಸ್ತೋಹ್ಕಿ, ಥ್ಯಾಂಕ್ ಗಾಡ್ ಐ ಯಾಮ್ ಅಲೈವ್, ಸ್ನೋ ಕ್ವೀನ್ ನಂತಹಾ ಜನಪ್ರಿಯ ಚಿತ್ರಗಳ ನಟಿಗೆ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ದಂತಕಥೆ, 'ಶೋ ಮ್ಯಾನ್' ಎಂದೇ ಗುರುತಿಸಲಾಗುವ ರಾಜ್ ಕಪೂರ್ ಅಂದ್ರೆ ಎಲ್ಲಿಲ್ಲದ ಮೋಹ. ರಷ್ಯಾದ ಎಲ್ಲಾ ಬಾಲಿವುಡ್ ಅಭಿಮಾನಿಗಳಂತೆ ಈಕೆಯೂ ರಾಜ್ ಕಪೂರ್ ಚಿತ್ರಗಳನ್ನು ಐದಾರು ಬಾರಿ ನೋಡಿದ್ದಾರಂತೆ.
ಭಾರತ ಎರಡನೇ ತವರು
ಸಂತೋಷ ಮತ್ತು ದು:ಖ ಇರೋದು ನಮ್ಮೊಳಗೆಯೇ ಹೊರತು ಹೊರಗಲ್ಲ ಅನ್ನೋ ಭಾರತೀಯ ಆಧ್ಯಾತ್ಮದ ಸೆಳೆತ ಆಕೆಯನ್ನು ನಮ್ಮ ದೇಶಕ್ಕೆ ಕರೆತಂದಿದೆ. ಇನ್ನು ಭಾರತ ನನ್ನ ಎರಡನೇ ತವರು ಅನ್ನುತ್ತಾರೆ ಅನ್ನಾ.