ಶೀರೂರು ಶ್ರೀ ಅಗಲಿಕೆಯಿಂದ ಒಬ್ಬಂಟಿಯಾದ ರೂಬಿ
ಉಡುಪಿ, ಜುಲೈ. 20: ಶೀರೂರು ಶ್ರೀಗಳು ಇದೀಗ ಇಹಲೋಕ ತ್ಯಜಿಸಿದ್ದಾರೆ. ಗುರುವಾರ ಸಂಜೆ ವೇಳೆ ಅಂತಿಮ ಕ್ರಿಯೆ ಮುಗಿದು ಶವ ಸಂಸ್ಕಾರ ನಡೆಯಿತು. ಅನೇಕ ಮಂದಿ ಈ ಕಾರ್ಯದಲ್ಲಿ ಕೈಜೋಡಿಸಿದರು. ಸ್ವಾಮೀಜಿ ಕೇವಲ ಮನುಷ್ಯರಲ್ಲಿ ತಮ್ಮ ಮಾನವೀಯತೆ ಮೆರೆಯದೆ, ಪ್ರಾಣಿ ಜೀವಿಗಳಲ್ಲೂ ತಮ್ಮ ಪ್ರೀತಿ ಕಾಳಜಿ ತೋರಿಸಿದ್ದಾರೆ.
ಹೌದು, ಯಾರೂ ನಂಬಲ್ಲ. ಉಳಿದವರೇನೋ ಮುಗಿತಲ್ಲ, ಇನ್ನೇನೂ ಇಲ್ಲ ಎಂದು ಸುಮ್ಮನಿದ್ದಾರೆ. ಆದರೆ ಇಲ್ಲೊಂದು ಜೀವ ಸ್ವಾಮೀಜಿಗಳ ಅಗಲಿಕೆಯಿಂದ ರೋಧಿಸುತ್ತಿದೆ. ದಿನನಿತ್ಯ ಸ್ವಾಮೀಜಿ ಜೊತೆ ಓಡಾಡುತ್ತಿದ್ದ ಈ ಜೀವಿ ಇದೀಗ ಒಬ್ಬಂಟಿಯಾಗಿದೆ.
ತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದ ಶೀರೂರು ಶ್ರೀ
ಯಾರೆಂದು ಕೇಳ್ತೀರಾ? ಇದರ ಹೆಸರು ರೂಬಿ. ಕಳೆದ ಎರಡು ವರ್ಷಗಳ ಹಿಂದೆ ಸ್ವಾಮೀಜಿ 10 ಸಾವಿರ ರೂ.ಕೊಟ್ಟು ಈ ನಾಯಿಯನ್ನು ಖರೀದಿಸಿದ್ದರು. ದಿನವಿಡೀ ಸ್ವಾಮೀಜಿಗಳ ಜೊತೆ ಓಡಾಡುವ ಈ ರೂಬಿ ಇದೀಗ ಒಬ್ಬಂಟಿಯಾಗಿದೆ.
ಯಾರ ಹಂಗಿಲ್ಲದೆ ತಮ್ಮ ಒಡೆಯನಿಗಾಗಿ ರೋಧಿಸುತ್ತಿದೆ. ಶ್ರೀಗಳ ಈ ಸಾಕು ನಾಯಿ ಸ್ವಾಮೀಜಿಗಳ ಸಮಾಧಿ ಸುತ್ತಮುತ್ತ ಒದ್ದಾಡುತ್ತಿದೆ. ಯಾರನ್ನೂ ತನ್ನ ಬಳಿ ಸುಳಿಯುವುದಕ್ಕೆ ಬಿಡದ ರೂಬಿ ಶ್ರೀಗಳ ಅಗಲಿಕೆಯನ್ನು ಮರೆಯಲು ಕಷ್ಟಪಡುತ್ತಿದ್ದು, ಒಬ್ಬಂಟಿಯಾಗಿದೆ.