ಉಡುಪಿ: ವೇಶ್ಯಾವಾಟಿಕೆ ದಂಧೆ, ರೌಡಿಶೀಟರ್ ಬಂಧನ
ಉಡುಪಿ, ಆಗಸ್ಟ್ 31 : ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ವೊಂದರ ಮೇಲೆ ಪೊಲೀಸರು ಬುಧವಾರ ರಾತ್ರಿ ದಾಳಿ ಮಾಡಿ ಓರ್ವ ರೌಡಿಶೀಟರ್ ನನ್ನು ಬಂಧಿಸಿದ್ದಾರೆ.
ಬಜರಂಗದಳ ಕಾರ್ಯಕರ್ತರು ನೀಡಿರುವ ಮಾಹಿತಿಯನ್ವಯ ನಗರ ಠಾಣಾ ಪೊಲೀಸರು ಕಾರ್ಕಳದ ಕಿಂಗ್ಸ್ ಕೋರ್ಟ್ ಬೋರ್ಡಿಂಗ್ ಎಂಡ್ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದ ರೌಡಿಶೀಟರ್ ಆರೀಫ್ ಹಾಗೂ ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಗ್ಲೆಗುಡ್ಡೆ- ತಾಲೂಕು ಜಂಕ್ಷನ್ ಬಳಿ ಕೆಲ ವರ್ಷಗಳ ಹಿಂದೆ ಹಾಡಹಗಲೇ ದುಷ್ಕರ್ಮಿಗಳ ತಲವಾರಿಗೆ ಬಲಿಯಾದ ರೌಡಿಶೀಟರ್ ಮಾರ್ಕೆಟ್ ರಸ್ತೆ ಶಂಕರನ ಸಹಚರನಾಗಿರುವ ಆರೀಫ್ ನ ವಿರುದ್ಧ ನಗರ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು.
ತಾಲೂಕು ವ್ಯಾಪ್ತಿಯ ಬಹುತೇಕ ಲಾಡ್ಜ್ ಗಳಲ್ಲಿ ಎಗ್ಗಿಲ್ಲದೆ ವೇಶ್ಯಾವಾಟಿಕೆ ದಂಧೆ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಕೆಲ ಸಂಘಟನೆಗಳು ನೀಡುವ ಮಾಹಿತಿಯನ್ವ ಪೊಲೀಸರು ಕಾರ್ಯಾಚರಣೆ ನಡೆಸುತ್ತಾರೆ.
ಆದರೆ, ಉಳಿದ ಸಮಯದಲ್ಲಿ ಪೊಲೀಸರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ. ದಿನದ ಬಾಡಿಗೆ ಸಿಗದ ಸಂದರ್ಭಗಳಲ್ಲಿ ಹಣಕ್ಕಾಗಿ ಕೆಲ ಲಾಡ್ಜ್ ಮಾಲೀಕರು ಇಂತಹ ದಂಧೆಗಳಿಗೆ ಅವಕಾಶ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.