ಕಾರಂತ ಪ್ರಶಸ್ತಿಗೆ ರೈ ಆಯ್ಕೆ: ಇದಕ್ಕೂ ನನಗೂ ಸಂಬಂಧವಿಲ್ಲ ಎಂದ ಕೋಟ
ಉಡುಪಿ, ಅಕ್ಟೋಬರ್ 9: 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ' ವಿಚಾರ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಎಡಪಂಥೀಯರ ವೇದಿಕೆಯಲ್ಲಿ ಗುರುತಿಸಿಕೊಂಡು ಪ್ರಧಾನಿ ವಿರುದ್ದ ಮಾತನಾಡಿದರು ಅನ್ನೋ ಕಾರಣಕ್ಕಾಗಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಕಾಶ್ ರೈ ವಿರುದ್ಧ ಬಲಪಂಥೀಯರು ಕೆಂಗಣ್ಣು ಬೀರಿದ್ದಾರೆ.
ರೈಗೆ ಕಾರಂತ ಪ್ರಶಸ್ತಿ: ಬಿಜೆಪಿ ಮನವಿ ತಿರಸ್ಕರಿಸಿದ ಆಯೋಜಕರು
ಇನ್ನೊಂದೆಡೆ ಪ್ರಕಾಶ್ ರೈ ಆಯ್ಕೆ ವಿಚಾರದಲ್ಲಿ ಬಿಜೆಪಿ ವಿಧಾವ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅಡ್ಡ ಕತ್ತರಿಯಲ್ಲಿ ಸಿಲುಕಿದ್ದಾರೆ. ಪ್ರಶಸ್ತಿ ಆಯ್ಕೆಯ ಪರ ವಿರೋಧದ ನಡುವೆ ಅಕ್ಟೋಬರ್ 10 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯೋದು ಪಕ್ಕಾ ಅಂತ ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ರೈಗೆ ಕಾರಂತ ಪ್ರಶಸ್ತಿ : ಸಾಮಾಜಿಕ ತಾಣದಲ್ಲಿ ಭುಗಿಲೆದ್ದ ಆಕ್ರೋಶ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತ ಹೆಸರಲ್ಲಿ ಕೊಡಲ್ಪಡುವ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ'ಗೆ ಈ ಬಾರಿ ಸಿನಿಮಾ ನಟ ಪ್ರಕಾಶ್ ರೈರನ್ನು ಆಯ್ಕೆ ಮಾಡಲಾಗಿತ್ತು. ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಳೆದ 12 ವರುಷಗಳಿಂದ ಕಾರಂತ ಜನ್ಮದಿನೋತ್ಸವ ಅಂಗವಾಗಿ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಹಿಂದೂ ಸಂಘಟನೆಗಳಿಂದ ವಿರೋಧ
ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಲಾಗಿತ್ತು. ಆದರೆ ಆಗೆಲ್ಲಾ ಯಾವುದೇ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದಿದ್ದವರನ್ನು ಆಯ್ಕೆ ಸಮಿತಿ ಪ್ರಶಸ್ತಿಗೆ ಪರಿಗಣಿಸಿತ್ತು. ಈ ಬಾರಿಯೂ ನಟ ಪ್ರಕಾಶ್ ರೈ ಆಯ್ಕೆ ಸಮಯದಲ್ಲಿ ಯಾರೂ ವಿರೋಧ ಮಾಡಿರಲಿಲ್ಲ .
ಅದ್ಯಾವಾಗ ಪ್ರಕಾಶ ರೈ ಎಡಪಂಥೀಯ ವೇದಿಕೆಯನ್ನೇರಿ ಪ್ರಧಾನಿ ಅವರ ಬಗ್ಗೆ ಟೀಕಿಸಿ ಮಾತಾಡಿದರೋ ಅಂದಿನಿಂದ ಪ್ರಕಾಶ್ ರೈ ಆಯ್ಕೆಯನ್ನು ಜೈ ಭಾರ್ಗವ ಬಳಗ ಹಾಗೂ ಕೆಲ ಹಿಂದೂ ಪರ ಸಂಘಟನೆಗಳು ಪ್ರಕಾಶ್ ರೈ ಯವರ ಆಯ್ಕೆಯನ್ನು ವಿರೋಧಿಸಿಲು ಆರಂಭಿಸಿದವು.
ರೈ ಆಯ್ಕೆ ಹಿಂದೆ ಬಿಜೆಪಿ ಕೋಟ ಶ್ರೀನಿವಾಸ ಪೂಜಾರಿ?
ಆದರೆ ಸಂಘಟಕರು ಮಾತ್ರ ಪ್ರಕಾಶ್ ರೈ ವೈಯಕ್ತಿಕ ಹೇಳಿಕೆಗೂ, ಪ್ರಶಸ್ತಿ ವಿಚಾರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಅಲ್ಲದೇ ಕಾರ್ಯಕ್ರಮವು ನಡೆಯುದರಲ್ಲಿ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 10 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸುವುದಾಗಿ ಜೈ ಭಾರ್ಗವ ಬಳಗ ಹೇಳಿಕೆ ನೀಡಿದೆ. ಈ ನಡುವೆ ಪ್ರಕಾಶ್ ರೈ ಆಯ್ಕೆ ಹಿಂದೆ ಬಿಜೆಪಿಯ ಅತ್ಯಂತ ನಿಷ್ಠಾವಂತ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯೂ ಪಾಲು ಇದೆ ಅನ್ನೋದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡತೊಡಗಿವೆ.
ಮುಜುಗರಕ್ಕೀಡಾದ ಬಿಜೆಪಿ
ಅಲ್ಲದೇ ಬಿಜೆಪಿ ಬೆಂಬಲಿತ ಕೋಟತಟ್ಟು ಗ್ರಾಮ ಪಂಚಾಯತ್ ಆಯ್ಕೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿರುವುದರಿಂದ ಬಿಜೆಪಿ ಪಕ್ಷವು ಮುಜುಗರಕ್ಕೀಡಾಗಿದೆ. ಆದರೆ ಈ ಎಲ್ಲಾ ವಿಚಾರವನ್ನು ಮಾತ್ರ ಕೋಟ ಶ್ರೀನಿವಾಸ ಪೂಜಾರಿ ಅಲ್ಲಗಳೆದಿದ್ದಾರೆ.
"ಪ್ರಕಾಶ್ ರೈಗೆ ಪ್ರಶಸ್ತಿ ನೀಡುತ್ತಿರುವುದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ಪ್ರಕಾಶ್ ರೈಯವರನ್ನು ನಾನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೇನೆ ಎನ್ನುವುದು ಸುಳ್ಳು. ನಾನು ಆಯ್ಕೆ ಸಮಿತಿಯಲ್ಲೇ ಇಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಪ್ರಧಾನಿ ವಿರುದ್ಧ ಮಾತನಾಡಿದ್ದು ನೋವು ತಂದಿದೆ'
ಪ್ರಕಾಶ್ ರೈ ಪ್ರಧಾನಿ ವಿರುದ್ಧ ಮಾತಾಡಿರುವುದು ನೋವು ತಂದಿದೆ. ಆದರೆ ಪ್ರಶಸ್ತಿ ಆಯ್ಕೆ ವಿಚಾರ ಕೋಟತಟ್ಟು ಗ್ರಾಮ ಪಂಚಾಯತ್ ಗೆ ಬಿಟ್ಟದ್ದು. ಇನ್ನು ಅಕ್ಟೋಬರ್ 10 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನನ್ನ ಭಾಗವಹಿಸುವಿಕೆ ಕುರಿತು ರಾಜ್ಯದ ನಾಯಕರ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದಾರೆ.
ಒಂದೊಡೆ ಪ್ರಧಾನಿ ಅವರನ್ನು ಟೀಕಿಸಿದ್ದಕ್ಕಾಗಿ ಪ್ರಕಾಶ್ ರೈ ಯವರಿಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆಗಳು ಅಪಸ್ವರ ಎತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಆಡಳಿತವಿರುವ ಕೋಟತಟ್ಟು ಗ್ರಾಮ ಪಂಚಾಯತ್ ನ ಪದಾಧಿಕಾರಿಗಳು ಪ್ರಕಾಶ್ ರೈ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ. ಇದರಿಂದಾಗಿ ಸದ್ಯ ಪ್ರಕಾಶ್ ರೈ ಗೆ ಪ್ರಶಸ್ತಿ ಪ್ರದಾನ ವಿಚಾರ ಬಿಜೆಪಿ ಪಕ್ಷಕ್ಕೆ ಗಂಟಲಿನಲ್ಲಿ ಸಿಕ್ಕ ಮುಳ್ಳಿನಂತಾಗಿದೆ .