ಉಡುಪಿ: ಮಾರುಕಟ್ಟೆಯಲ್ಲಿ ಮತ್ತೆ ಕೆಮಿಕಲ್ ಮೀನು ಮಾರಾಟ!
ಉಡುಪಿ, ಜುಲೈ.16: ಕುಂದಾಪುರ ಸಮೀಪದ ಮುದೂರಿನಲ್ಲಿ ಮಾರಾಟಕ್ಕೆ ತಂದ ಮೀನಿನಲ್ಲಿ ಕೆಂಪು ಬಣ್ಣದ ದ್ರಾವಣ ಸೋರಲಾರಂಭಿಸಿದ್ದು, ರಾಸಾಯನಿಕ ಬೆರೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕುಂದಾಪುರ ಸಂಗಮ್ ಬಳಿಯ ರಖಂ ಮೀನು ಮಾರಾಟ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಚಿಲ್ಲರೆ ಮೀನು ಮಾರಾಟಗಾರರಾದ ಮೂವರು ಮಹಿಳೆಯರು ಮೀನು ತಂದಿದ್ದರು.
ಅವರು ಮುದೂರು ಮಾರ್ಕೆಟ್ ತಲುಪುತ್ತಿದ್ದಂತೆ ಮೀನಿನ ಹೊಟ್ಟೆಯಿಂದ ಕೆಂಪು ಬಣ್ಣದ ದ್ರಾವಣ ಸುರಿಯಲಾರಂಭಿಸಿತ್ತು. ಇದನ್ನು ಗಮನಿಸಿದ ಗ್ರಾಹಕರು ಮೀನು ಖರೀದಿಗೆ ಹಿಂದೇಟು ಹಾಕಿದ್ದಾರೆ. ಇದರಿಂದ ಸುಮಾರು 50 ಕೆ.ಜಿ ಮೀನು ವ್ಯರ್ಥವಾಗಿದೆ.
ಮೀನಿಗೆ ರಾಸಾಯನಿಕ ಬಳಕೆ: ಪತ್ತೆಗೆ ಅಧಿಕಾರಿಗಳು ತಯಾರು
ರಖಂ ಮೀನು ಮಾರಾಟ ಕೇಂದ್ರಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ತನಿಖೆಯಿಂದ ಸ್ಪಷ್ಟ ಮಾಹಿತಿ ಬೆಳಕಿಗೆ ಬರಲಿದೆ.
ಈ ಹಿಂದೆ ಮಂಗಳೂರಿನಲ್ಲಿ ಮೀನಿಗೆ ವಿಷಕಾರಿ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಡಿದ್ದರಿಂದ ಮೀನು ಮಾರಾಟಗಾರರು ಆತಂಕಕ್ಕೀಡಾಗಿದ್ದರು.
ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮಾರಾಟ ಮಾಡುತ್ತಾರೆ ಎಂದು ಆಕ್ಷೇಪಣೆ ಮಾಡುವ ಸಂಭಾಷಣೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಓರ್ವ ಗ್ರಾಹಕ ಮೀನು ಮಾರಾಟಗಾರರ ಬಳಿ ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿರುವ ಬಗ್ಗೆ ವಾಗ್ವಾದ ನಡೆಸುವ ವೀಡಿಯೊ ಅದಾಗಿದ್ದು,ಇದನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಡಲಾಗಿತ್ತು.