ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಡಾ.ರವೀಂದ್ರನಾಥ್ ಶಾನುಭಾಗ್
ಉಡುಪಿ, ಅಕ್ಟೋಬರ್ 31 : ಸಮಾಜ ಸೇವಕ, ಮಾನವ ಹಕ್ಕು ಹೋರಾಟಗಾರ ಡಾ.ರವೀಂದ್ರನಾಥ್ ಶಾನುಭಾಗ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಸೋಮವಾರ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿತ್ತು.
2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಮಂಗಳವಾರ ಉಡುಪಿಯಲ್ಲಿ ಮಾತನಾಡಿದ ಡಾ.ರವೀಂದ್ರನಾಥ್ ಶಾನುಭಾಗ್ ಅವರು, 'ರಾಜ್ಯದಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ನಾನು ಯಾವುದಕ್ಕಾಗಿ ಹೋರಾಟ ನಡೆಸುತ್ತಿದ್ದೇನೋ ಅದಕ್ಕೆ ನ್ಯಾಯ ಸಿಗದೆ 6 ಜನರು ಈಗಾಗಲೇ ಮೃತಪಟ್ಟಿದ್ದಾರೆ' ಎಂದು ಹೇಳಿದರು.
'ಹಿರಿಯ ನಾಗರಿಕರು ಆದೇಶ ಪತ್ರ ಹಿಡಿದುಕೊಂಡು ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅಧಿಕಾರಿಗಳಿಗೆ ಹಾಗೂ
ಮಂತ್ರಿಗಳಿಗೆ ನಮ್ಮ ಕಾಳಜಿ ಅರ್ಥವಾಗುತ್ತಿಲ್ಲ. ಯಾವ ಪುರುಷಾರ್ಥಕ್ಕೆ ಈ ಪ್ರಶಸ್ತಿ ಸ್ವೀಕರಿಸಬೇಕು?' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
'ಐಎಎಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯಾಗಿದ್ದ ಡಾ.ಕೆ.ಜಿ ಜಗದೀಶ್ ಹಾಗು ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ವಿಶಾಲ್ ಸಂತ್ರಸ್ಥರಿಗೆ ಅವಮಾನ ಮಾಡಿದ್ದಾರೆ' ಎಂದು ದೂರಿದರು. ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
'ನನಗೆ ಹಣ, ಪ್ರಶಸ್ತಿ ಪತ್ರ ಬೇಡ. ನನಗೆ ಸ್ವರ್ಗ ಕೊಟ್ಟರೂ ಬೇಡ. ನೊಂದು ಕಣ್ಣೀರು ಸುರಿಸುತ್ತಿರುವವರಿಗೆ ನ್ಯಾಯ ಕೊಡಿ ಸಾಕು. ಇದು ನನ್ನ ಉದ್ಧಟತನದ ನಿರ್ಧಾರವಲ್ಲ. ಪ್ರಶಸ್ತಿ ಸ್ವೀಕರಿಸುವ ಎಲ್ಲರ ಮೇಲೆ ನನಗೆ ಗೌರವವಿದೆ' ಎಂದು ಡಾ.ರವೀಂದ್ರನಾಥ್ ಶಾನುಭಾಗ್ ಸ್ಪಷ್ಟಪಡಿಸಿದರು.
ಡಾ.ರವೀಂದ್ರನಾಥ ಶಾನುಭಾಗ್ ಅವರ ಹೋರಾಟದ ಕುರಿತು : ಹಿರಿಯ ನಾಗರಿಕರಿಗೆ ತಮ್ಮ ಕುಟುಂಬ ಸದಸ್ಯರಿಂದ ಆದ ಅನ್ಯಾಯ ಹಾಗೂ ರಾಜ್ಯ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳು ಸಿಗದೇ ಅನ್ಯಾಯಕ್ಕೊಳಗಾದ ಹಲವಾರು ಪ್ರಕರಣಗಳ ಬಗ್ಗೆ ಮಾನವ ಹಕ್ಕು ಪ್ರತಿಷ್ಠಾನದ ಡಾ.ರವೀಂದ್ರನಾಥ ಶಾನುಭಾಗ್ ಹೋರಾಟ ನಡೆಸುತ್ತಿದ್ದಾರೆ.
ನ್ಯಾಯಾಲಯದ ಆದೇಶವಾದರೂ ಸರ್ಕಾರಿ ಅಧಿಕಾರಿಗಳು ಹಾಗು ಪೊಲೀಸ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಕೊರಗು ಅವರದ್ದು. ಹಿರಿಯ ನಾಗರಿಕರ 400ಕ್ಕೂ ಅಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ, ನ್ಯಾಯ ಸಿಗುವ ಮೊದಲೇ ಅನೇಕ ಹಿರಿಯ ಜೀವಿಗಳು ಈಗಾಗಲೇ ಕಣ್ಣುಮುಚ್ಚಿವೆ.
ಅನ್ಯಾಯಕ್ಕೊಳಗಾದ ಹಿರಿಯ ನಾಗರಿಕರ ಕುರಿತು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಗಮನಕ್ಕೆ ಡಾ.ಶಾನುಭಾಗ್ ತಂದಿದ್ದರು. ಆದರೆ, ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳು ಮುಂದಾಗಿಲ್ಲ ಎಂಬುದ ಅವರ ಅಸಮಾಧಾನಕ್ಕೆ ಕಾರಣ.
ರವೀಂದ್ರನಾಥ್ ಶಾನುಭಾಗ್ ಕುರಿತು : 1980ರಲ್ಲಿ ಶಾನುಭಾಗ್ ಅವರು ಬಳಕೆದಾರರ ವೇದಿಕೆ ಆರಂಭಿಸಿದರು. ಸಮಾಜದ ಅನ್ಯಾಯದ ವಿರುದ್ಧ ಹೋರಾಡಿ ಗಟ್ಟಿಯಾದರು. ನಂತರ 1992ರಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನ ಆರಂಭಿಸಿದರು. ನೊಂದು- ಕಣ್ಣೀರಿಟ್ಟು ಬರುವವರಿಗೆ ನ್ಯಾಯ ಒದಗಿಸಿ ಕೊಡುವ ಕಾರ್ಯವನ್ನು ಇವತ್ತಿನವರೆಗೆ ಮುಂದುವರೆಸಿದ್ದಾರೆ.
ಈವರೆಗೆ ಇವರ ಬಳಿ ಬಂದ ಕೇಸುಗಳು ಮೂವತ್ತು ಸಾವಿರದಷ್ಟು. 1980ರಿಂದ ಬೇರೆ ಬೇರೆ ಪತ್ರಿಕೆಗಳಲ್ಲಿ 3600 ಕಾಲಂಗಳನ್ನು ಬರೆದಿದ್ದಾರೆ. ಎಂಡೋಸಲ್ಫಾನ್ ವಿರುದ್ಧ ಸಮರ ಸಾರಿದ ಡಾ. ಶಾನುಭಾಗ್ ಅಂತಾರಾಷ್ಟ್ರೀಯ ಮಟ್ಟದ ಮ್ಯಾಗಸೀನ್ಗಳಲ್ಲಿ 17 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಹೀಗಾಗಿ 2011ರಲ್ಲಿ ಎಂಡೋಸಲ್ಫಾನ್ ದೇಶದಲ್ಲೇ ಬ್ಯಾನ್ ಆಯ್ತು. ಇಷ್ಟೆಲ್ಲಾ ಹೋರಾಟ-ಅನ್ಯಾಯದ ವಿರುದ್ಧ ದ್ವನಿ ಎತ್ತಿದ ಶಾನುಭಾಗ್ ಅವರನ್ನು ಸಾವಿರಾರು ಪ್ರಶಸ್ತಿ- ಸಮ್ಮಾನಗಳು ಹುಡುಕಿಕೊಂಡು ಬಂದವು. ಆದರೆ, ಈವರೆಗೆ ಒಂದೇ ಒಂದು ಪ್ರಶಸ್ತಿ ಸ್ವೀಕಾರ ಮಾಡಿಲ್ಲ. ಯಾರಿಂದಲೂ ಒಂದು ರೂಪಾಯಿ ಮುಟ್ಟಿಲ್ಲ. ಫಾರಿನ್ ಫಂಡ್ ಸ್ವೀಕರಿಸಿಲ್ಲ. ತಾನೇ ಬರೆದ ಪುಸ್ತಕ ಮಾರಿ ಬಂದ ಹಣದಿಂದ,ಸಂಬಳದ ಹಣದಿಂದ ಕೋರ್ಟು- ಕೇಸು, ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಎಂಸಿ ಮಣಿಪಾಲ್ನಲ್ಲಿ ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಮೂವತ್ತು ವರ್ಷ ಕೆಲಸ ಮಾಡಿದ್ದಾರೆ. ಸದ್ಯ, ಟ್ಯಾಪ್ ಮಿ ಸಂಸ್ಥೆಯಲ್ಲಿ ಗೌರವ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ವೈಕುಂಟ ಬಾಳಿಗ ಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಮಾಹಿತಿ ಕೊಡುತ್ತಾರೆ.