ಉಡುಪಿಯಲ್ಲಿ ರಂಜಾನ್ ಆಚರಣೆ: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ
ಉಡುಪಿ. ಜೂನ್.15: ಕರಾವಳಿಯಲ್ಲಿ ಇಂದು ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ನಮಾಜ್ ನಿರ್ವಹಿಸಿದರು.
ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಯೂ ಸಂಪನ್ನಗೊಂಡಿತು. ಉಡುಪಿಯ ಇಂದ್ರಾಳಿ, ನಗರ , ಕೊಡವೂರು , ಅಂಬಾಗಿಲು ಮತ್ತಿತರೆಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜನಜಂಗುಳಿ ಇತ್ತು.
ಕರಾವಳಿಯಲ್ಲಿ ಇಂದಿನಿಂದ ಈದ್ ಉಲ್ ಫಿತರ್ ಆಚರಣೆ
ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ತೆರಳುತ್ತಿರುವ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮತ್ತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕಳೆದ ತಿಂಗಳ ಹದಿನೇಳನೇ ತಾರೀಕಿನಿಂದ ಮುಸ್ಲಿಂ ಬಾಂಧವರು ಉಪವಾಸದಲ್ಲಿದ್ದರು.
ಒಂದು ತಿಂಗಳ ಉಪವಾಸ ಮುಗಿದ ಬಳಿಕ ಮರುದಿನ ಹಬ್ಬ ಆಚರಿಸುವುದು ವಾಡಿಕೆ. ಅದರಂತೆ ಇಂದು ಬೆಳಗ್ಗೆಯೇ ಮಸೀದಿಗಳಿಗೆ ತೆರಳಿದ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ನಡೆಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಬಂಧು ಮಿತ್ರರ ಮನೆಗಳಿಗೆ ತೆರಳುತ್ತಾರೆ. ಅಲ್ಲಿ ಬಂಧು ಮಿತ್ರರಿಗೆ ವಿಶೇಷ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ. ಕೇರಳದಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಇಂದು ಹಬ್ಬ ಆಚರಿಸಲಾಗುತ್ತಿದೆ.
ಬೆಂಗಳೂರು ಸಹಿತ ರಾಜ್ಯದ ಇತರೆಡೆಗಳಲ್ಲಿ ಹಬ್ಬ ನಾಳೆ ನಡೆಯಲಿದೆ. ಈದುಲ್ ಫಿತರ್ ಎಂದೂ ಕರೆಯಲ್ಪಡುವ ಈ ಹಬ್ಬದಲ್ಲಿ ಮುಸ್ಲಿಮರು ತಮ್ಮ ಬಂಧುಗಳಿಗೆ ಪರಸ್ಪರ ದಾನಗಳನ್ನೂ ನೀಡುತ್ತಾರೆ. ಪ್ರತೀ ಕುಟುಂಬದ ಸದಸ್ಯ ತಮ್ಮ ಆಪ್ತೇಷ್ಟರಿಗೆ ನಿಗದಿತ ಪ್ರಮಾಣದ ಅಕ್ಕಿಯನ್ನು ಕಡ್ಡಾಯವಾಗಿ ದಾನ ಮಾಡುವುದು ಈ ಹಬ್ಬದ ವಿಶೇಷಗಳಲ್ಲೊಂದು.
ಪುಟ್ಟ ಮಕ್ಕಳಿಗೆ ಮತ್ತು ವಯಸ್ಕರಿಗೆ ತಮ್ಮ ಶಕ್ತ್ಯಾನುಸಾರ ಹಣ ನೀಡುವ ಕ್ರಮವೂ ಈ ಹಬ್ಬದಲ್ಲಿ ರೂಢಿಯಲ್ಲಿದೆ.