ಗಾಂಧಿಜೀ ಅವರನ್ನು ಅವಮಾನಿಸಿದ್ದಕ್ಕೆ ನಳಿನ್ ಕುಮಾರ್ ಕಟೀಲ್ ಗೆ ಪ್ರಮೋಷನ್; ರಮಾನಾಥ್ ರೈ ವ್ಯಂಗ್ಯ
ಉಡುಪಿ, ಆಗಸ್ಟ್ 22: "ಮಹಾತ್ಮ ಗಾಂಧಿ ಅವರನ್ನು ಅವಹೇಳನ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಶಾ ಈಗ ಪ್ರಮೋಷನ್ ಕೊಟ್ಟಿದ್ದಾರೆ" ಎಂದು ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದರು. "ನಳಿನ್ ಕುಮಾರ್ ಕಟೀಲ್ ಬಹಳ ಬುದ್ಧಿವಂತರಿರಬಹುದು. ಆದರೆ ಮಹಾತ್ಮ ಗಾಂಧಿ ಅವರನ್ನು ಅವಹೇಳನ ಮಾಡಿದ್ದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ, ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಿ ಭಡ್ತಿ ನೀಡಿದ್ದಾರೆ. ಮಹಾತ್ಮ ಗಾಂಧಿಗೆ ಅವಮಾನ ಮಾಡಿರುವುದಕ್ಕೆ ನಳಿನ್ಗೆ ನೀಡಿರುವ ಪ್ರಮೋಷನ್ ಇದಾಗಿದೆ" ಎಂದು ವ್ಯಂಗ್ಯವಾಡಿದರು.
"ಬಹುಮತ ಇಲ್ಲದೆ ಮುಖ್ಯಮಂತ್ರಿಯಾದವರು ಯಡಿಯೂರಪ್ಪ ಮಾತ್ರ"- ರಮಾನಾಥ್ ರೈ ಟೀಕೆ
"ಭಾರತೀಯ ಜೂಟ್ ಪಾರ್ಟಿಗೆ ಮಾತ್ರ ಇಂತಹ ಶಕ್ತಿ ಇರುವುದು. ಕಳೆದ ಚುನಾವಣೆಯಲ್ಲಿ ಜನ ನಳೀನ್ ಕುಮಾರ್ ಕಟೀಲ್ ಮುಖ ನೋಡಿ ಓಟು ಕೊಟ್ಟಿಲ್ಲ. ಮೇಲಿನವರ ಮುಖ ನೋಡಿ ಮತ ಹಾಕಿದ್ದಾರೆ. ಈಗ ದಕ್ಷಿಣ ಕನ್ನಡ ಜಿಲ್ಲೆಯ ಜನ ಮೇಲೆ ನೋಡುತ್ತಲೇ ನಿಂತಿದ್ದಾರೆ. ಇನ್ನು ಕೂಡ ಕೆಳಗೆ ನೋಡಿಲ್ಲ. ಈಗ ಆಕಾಶ ನೋಡುವ ಪರಿಸ್ಥಿತಿ ಜನರದ್ದು. ನಳಿನ್ ಕುಮಾರ್ ಕಟೀಲ್ ಯಾವುದೇ ಸಾಧನೆ ಮಾಡಿದ ಚರಿತ್ರೆ ಇತಿಹಾಸದಲ್ಲಿ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಬುದ್ಧಿವಂತರ ಜಿಲ್ಲೆಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯೋಗ್ಯರಾದ ಇಬ್ಬರಿಗೆ ಸಚಿವ ಸ್ಥಾನ ನೀಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ಯಾರೂ ಬುದ್ಧಿವಂತರಿಲ್ಲ ಎಂಬುದಾಗಿ ಬಿಜೆಪಿ ತೀರ್ಮಾನಿಸಿದಂತಿದೆ. ಇಲ್ಲಿನ ದಲಿತ ಹಿರಿಯ ಶಾಸಕರಿಗೂ ಅವಕಾಶ ನೀಡಿಲ್ಲ. ಬಿಜೆಪಿ ದಕ್ಷಿಣ ಕನ್ನಡ ಹಾಗು ಉಡುಪಿ ಎರಡು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ" ಎಂದು ಕಿಡಿಕಾರಿದರು.