ಭಾಸ್ಕರ್ ಕೊಲೆ : ಸುಪ್ರೀಂನಲ್ಲೂ ರಾಜೇಶ್ವರಿ ಶೆಟ್ಟಿಗೆ ಗಿಟ್ಟಲಿಲ್ಲ ಜಾಮೀನು
ಉಡುಪಿ, ಅ.11 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. 2016ರ ಆಗಸ್ಟ್ 6ರಂದು ಭಾಸ್ಕರ್ ಶೆಟ್ಟಿ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು.
ರಾಜೇಶ್ವರಿ ಜಾಮೀನು ಅರ್ಜಿ ತಿರಸ್ಕೃತ
ರಾಜೇಶ್ವರಿ ಶೆಟ್ಟಿ ಪರ ವಕೀಲರಾದ ಬಸವ ಪ್ರಭು ಪಾಟೀಲ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಎಸ್.ಎ.ಬೊಬ್ಡೆ ಮತ್ತು ಎಲ್.ನಾಗೇಶ್ವರ ಅವರ ಪೀಠ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದ ತನಿಖೆ ಇನ್ನು ನಡೆಯುತ್ತಿರುವುದರಿಂದ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಆದ್ದರಿಂದ, ಅರ್ಜಿ ವಾಪಸ್ ಪಡೆಯಲಾಗಿದೆ.
ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ
ಕರ್ನಾಟಕ ಪೊಲೀಸರ ಪರವಾಗಿ ವಾದ ಮಂಡನೆ ಮಾಡಿದ ವಕೀಲ ಜೋಸೆಫ್ ಅರಿಸ್ಟಾಟಲ್, 'ಕೊಲೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಹತ್ಯೆ ಮಾಡಲು ನೆರವಾಗಿರುವ ಆರೋಪ ಎದುರಿಸುತ್ತಿರುವ ನಿರಂಜನ್ ಭಟ್ ವಿರುದ್ಧ ತನಿಖಾಧಿಕಾರಿಗಳು ಶೀಘ್ರದಲ್ಲೇ ಪೂರಕ ಆರೋಪ ಪಟ್ಟಿ ಸಲ್ಲಿಸಲಿದ್ದಾರೆ' ಎಂದರು.
ಕೊಲೆ ಬೆದರಿಕೆ ದೂರು ದಾಖಲಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ತಾಯಿ
'ರಾಜೇಶ್ವರಿ ಶೆಟ್ಟಿ ಅವರು ಕಳೆದ ವರ್ಷದ ಆಗಸ್ಟ್ ನಿಂದ ಪೊಲೀಸರ ವಶದಲ್ಲಿದ್ದಾರೆ. ಪೊಲೀಸರು ಅವರ ವಿರುದ್ಧದ ತನಿಖೆ ಮುಗಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು. ಜಾಮೀನು ನೀಡಿದರೆ ಅರ್ಜಿದಾರರು, ಉಡುಪಿಯಿಂದ ದೂರ ಬೆಂಗಳೂರು ಅಥವ ಮುಂಬೈನಲ್ಲಿ ನೆಲೆಸಲು ಸಿದ್ಧರಿದ್ದಾರೆ' ಎಂದು ವಕೀಲ ಬಸವ ಪ್ರಭು ಪಾಟೀಲ್ ವಾದ ಮಂಡನೆ ಮಾಡಿದ್ದರು.
ಇದು ಅಪರೂಪದ ಪ್ರಕರಣ
ವಕೀಲ ಜೋಸೆಫ್ ಅರಿಸ್ಟಾಟಲ್, 'ಇದು ಅಪರೂಪದ ಪ್ರಕರಣ, ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಪ್ರಕರಣವಾಗಿದೆ. ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಪುತ್ರ ಸಹ ಜೈಲಿನಲ್ಲಿದ್ದಾನೆ. ಪ್ರಕರಣದಲ್ಲಿ ಅವರ ಹೆಚ್ಚಿನ ಸಂಬಂಧಿಗಳು ಸಾಕ್ಷಿಗಳಾಗಿದ್ದಾರೆ. ಸಾಕ್ಷ್ಯಗಳನ್ನು ತಿರುಚುವ ಆತಂಕವಿದೆ. ಆದ್ದರಿಂದ, ಜಾಮೀನು ನೀಡಬಾರದು' ಎಂದು ವಾದ ಮಂಡಿಸಿದರು.[ಚಿತ್ರ : ಕೊಲೆಯಾದ ಭಾಸ್ಕರ್ ಶೆಟ್ಟಿ]
ಕರ್ನಾಟಕ ಹೈಕೋರ್ಟ್ ಜಾಮೀನು ಕೊಟ್ಟಿರಲಿಲ್ಲ
ರಾಜೇಶ್ವರಿ ಶೆಟ್ಟಿ ಅವರ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಅವರು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ ತಿಂಗಳಿನಲ್ಲಿ ಹೈಕೋರ್ಟ್ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದ್ದರಿಂದ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಚಾರ್ಜ್ ಶೀಟ್ ಸಲ್ಲಿಸಿ ಸಿಐಡಿ
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿದೆ. ಪ್ರಕರಣದ ಒಂದು ಸುತ್ತಿನ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಎಂಟುನೂರು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಆದರೆ, ಕೆಲವು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ ನಡೆಸುತ್ತಿದೆ.
ಹತ್ಯೆಯಾಗಿ ಒಂದು ವರ್ಷ ಕಳೆಯಿತು
ಉದ್ಯಮಿ ಭಾಸ್ಕರ್ ಶೆಟ್ಟಿ 2016ರ ಜುಲೈ 28ರಂದು ನಾಪತ್ತೆಯಾಗಿದ್ದರು. ಆಗಸ್ಟ್ 6ರಂದು ಅವರು ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಕುಟುಂಬ ಸದಸ್ಯರೇ ಭಾಗಿಯಾಗಿದ್ದಾರೆ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ.
ಪತ್ನಿ, ಪುತ್ರರು ಆರೋಪಿಗಳು
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಪ್ರಮುಖ ಆರೋಪಿಗಳು. ಈ ಪ್ರಕರಣದಲ್ಲಿ ಜ್ಯೋತಿಷಿ ನಿರಂಜನ್ ಭಟ್ ಮೂರನೇ ಆರೋಪಿಯಾಗಿದ್ದಾರೆ. ಭಾಸ್ಕರ್ ಶೆಟ್ಟಿ ಅವರನ್ನು ಹತ್ಯೆ ಮಾಡಿ ಹೋಮಕುಂಡದಲ್ಲಿ ಹಾಕಿ ಸುಟ್ಟು ಮೂಳೆಗಳನ್ನು ನದಿಗೆ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ.