ನಿಸರ್ಗ ಚಂಡಮಾರುತ ಎಫೆಕ್ಟ್; ಉಡುಪಿಯಲ್ಲಿ ಶುರುವಾದ ಮಳೆ
ಉಡುಪಿ, ಜೂನ್ 03: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಸರ್ಗ ಚಂಡಮಾರುತದಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯ ಎಚ್ಚರಿಕೆಯನ್ನು ಈ ಮುನ್ನವೇ ಹವಾಮಾನ ಇಲಾಖೆ ನೀಡಿದ್ದು, ಉಡುಪಿಯಲ್ಲಿ ಈಗಾಗಲೇ ತುಂತುರು ಮಳೆ ಆರಂಭವಾಗಿದೆ.
ಕಳೆದ ರಾತ್ರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಜೊತೆಗೆ ಭಾರೀ ಗಾಳಿ ಮಳೆಯ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ. ಕಳೆದ ಎರಡು ದಿನಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗಲಿದೆ ಎಂದೂ ತಿಳಿದುಬಂದಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮುಂಜಾನೆ ತುಂತುರು ಮಳೆ ಆರಂಭವಾಗಿ, ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ.
ಕೊಡಗಿನಲ್ಲಿ ಮುಂಗಾರು ಶುರುವಾಯ್ತು, ಸಜ್ಜಾದ ಜಿಲ್ಲಾಡಳಿತ
ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡ ಮಾರುತ ಅಬ್ಬರಿಸುತ್ತಿದ್ದು, ಭಾರೀ ಗಾಳಿ ಬೀಸುತ್ತಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಉಡುಪಿ ಜಿಲ್ಲಾಡಳಿತವು ಕಟ್ಟೆಚ್ಚರ ರವಾನಿಸಿದೆ. ಮಲ್ಪೆ ಬಂದರಿನಲ್ಲಿ ಸುಮಾರು ಎರಡು ಸಾವಿರ ಬೋಟುಗಳು ಲಂಗರು ಹಾಕಿವೆ. ಮಳೆಯಿಂದ ಉದ್ಯಾವರ ಹೊಳೆ ತುಂಬಿ ಹರಿಯುತ್ತಿದ್ದು, ಪಶ್ಚಿಮ ಘಟ್ಟದವರೆಗೆ ಕಾರ್ಮೋಡ ಆವರಿಸಿದೆ. ಜಿಲ್ಲೆಯಲ್ಲಿ ಭಾರೀ ಮಳೆಯ ನಿರೀಕ್ಷೆ ಇದೆ.