ಸಿದ್ದರಾಮಯ್ಯಗೆ ಕಂದಾಯ ಸಚಿವ ಅಶೋಕ್ ಓಪನ್ ಚಾಲೆಂಜ್
ಉಡುಪಿ, ಜನವರಿ 8: "ಭಾರತ್ ಬಂದ್ ಕರೆಯುವ ಅವಶ್ಯಕತೆ ಇರಲಿಲ್ಲ. 50- 60 ವರ್ಷದ ಹಿಂದಿನ ಬೇಡಿಕೆಗಳಿಗೆ ಅರ್ಥ ಇಲ್ಲ. ಬಂದ್ ಕರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತೆ" ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಉಡುಪಿಯಲ್ಲಿ ಬಂದ್ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, "ಕಮ್ಯೂನಿಸ್ಟ್ ಪ್ರೇರಿತ ಬಂದ್ ಹೇರಿಕೆ ಸರಿಯಲ್ಲ, ಬಂದ್ ನಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ. ಕರ್ನಾಟಕ ಜನ ಬಂದನ್ನು ತಿರಸ್ಕಾರ ಮಾಡಿದ್ದಾರೆ. ನಾನಿದನ್ನು ಸ್ವಾಗತ ಮಾಡುತ್ತೇನೆ" ಎಂದರು.
ಸರ್ಕಾರಿ ಆಸ್ತಿ ಹಾನಿ, ಉ.ಪ್ರದೇಶ ಮಾದರಿ ದಂಡಕ್ಕೆ ಚಿಂತನೆ: ಆರ್.ಅಶೋಕ್
ಈ ವೇಳೆ ನೆರೆ ಪರಿಹಾರದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಕೊಟ್ಟ ಅಶೋಕ್, "ಐದೈದು ವರ್ಷ ಟ್ಯಾಲಿ ಮಾಡೋಣ. ಮೋದಿ ಮತ್ತು ಮನಮೋಹನ್ ಸಿಂಗ್ ಅನುದಾನ ಟ್ಯಾಲಿ ಮಾಡೋಣ. ಮನಮೋಹನ್ ಸಿಂಗ್ 10 ವರ್ಷದಲ್ಲಿ ಕರ್ನಾಟಕಕ್ಕೆ ಕೊಟ್ಟದ್ದೆಷ್ಟು? ನಾನು ಚರ್ಚೆ ಮಾಡೋದಕ್ಕೆ ಸಿದ್ಧನಿದ್ದೇನೆ. ಸಿದ್ದರಾಮಯ್ಯ ಡೀಟೈಲ್ ತಗೊಂಡು ಬರಲಿ. ಅಭಿವೃದ್ಧಿ, ಬರ, ನೆರೆ, ರಸ್ತೆಯ ಅನುದಾನ ಲೆಕ್ಕ ಕೊಡಿ. ದಾಖಲೆ ತಂದು ಮಾತನಾಡಿ" ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯನವರ ಈ ಗಂಭೀರ ಪ್ರಶ್ನೆಗೆ ಬಿಜೆಪಿಯಿಂದ ಉತ್ತರ ಸಿಕ್ಕಿತೇ?
"ಸಿದ್ದರಾಮಯ್ಯನವರ ಜ್ಯೋತಿಷ್ಯಾಲಯ ಜನ ಮುಚ್ಚಿದ್ದಾರೆ. ಉಪಚುನಾವಣೆಯಲ್ಲಿ 12 ಎಂಎಲ್ ಎ ಗೆದ್ದಾಗ ಜ್ಯೋತಿಷ್ಯಾಲಯ ಮುಚ್ಚಿದೆ. ನಿಜ ಸಂಗತಿ, ಅಂಕಿ ಅಂಶ ಇಟ್ಕೊಂಡು ಸಿದ್ದರಾಮಯ್ಯ ಮಾತನಾಡಲಿ. ಸುಮ್ನೆ ಹಾದಿ ಬೀದಿಯಲ್ಲಿ ಮಾತಾಡಿ ಏನೂ ಸಾಧಿಸಲಾಗದು" ಎಂದು ತಿರುಗೇಟು ನೀಡಿದ್ದಾರೆ.