"ಭೂಮಿ ಕೊಟ್ಟರೆ ಭಾರತ ಮತ್ತೊಂದು ಮೆಕ್ಕಾ ಆಗುತ್ತದೆ"; ನಿಶ್ಚಲಾನಂದ ಸ್ವಾಮಿ
ಉಡುಪಿ, ನವೆಂಬರ್ 28: "ಅಯೋಧ್ಯೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಒಂದಿಂಚೂ ಭೂಮಿ ನೀಡಬಾರದು" ಎಂದು ಹೇಳುವ ಮೂಲಕ ಅಯೋಧ್ಯೆ ತೀರ್ಪಿನ ಬಗ್ಗೆ ನಿಶ್ಚಲಾನಂದ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.
ನಿನ್ನೆ ಜಿಲ್ಲೆಯಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುರಿ ಶಂಕರಾಚಾರ್ಯ ಪೀಠ ನಿಶ್ಚಲಾನಂದ ಸ್ವಾಮೀಜಿ ಮೊದಲ ಬಾರಿಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಉಡುಪಿ ಪೇಜಾವರ ಮಠದಲ್ಲಿ ಇಬ್ಬರು ಯತಿಗಳ ಮುಖಾಮುಖಿ ಆಗಿದ್ದು, ನಿಶ್ಚಲಾನಂದ ಸ್ವಾಮೀಜಿಯವರು ಅಯೋಧ್ಯೆ ತೀರ್ಪಿನ ಕುರಿತು ಸಾಕಷ್ಟು ಅಸಮಾಧಾನವನ್ನು ಹೊರಹಾಕಿದರು.
"ಹಿಂದೂ- ಮುಸ್ಲಿಂ ಬಾಂಧವ್ಯ ಗಟ್ಟಿಗೊಳ್ಳಲು ಅವಕಾಶವಿತ್ತ ತೀರ್ಪು" ಪೇಜಾವರ ಶ್ರೀ
"ಅಯೋಧ್ಯೆಯಲ್ಲಿ ಭೂಮಿ ನೀಡಿ ಸುಪ್ರೀಂ ಕೋರ್ಟ್ ಆಗ್ರಹ ಮಾಡಿದೆ. ಸುಪ್ರೀಂ ಕೋರ್ಟ್ ನ ತೀರ್ಪನ್ನು ನಾನು ಒಪ್ಪುವುದಿಲ್ಲ. ಅಯೋಧ್ಯೆಯಲ್ಲಿ ಒಂದಿಂಚು ಭೂಮಿಯನ್ನೂ ಮುಸ್ಲಿಮರಿಗೆ ನೀಡಲು ನನ್ನ ಸಹಮತ ಇಲ್ಲ. ಹಾಗೇನಾದರೂ ಮಾಡಿದರೆ ಅಯೋಧ್ಯೆ ಮತ್ತೊಂದು ಮೆಕ್ಕಾ ಆಗುತ್ತದೆ" ಎಂದರು.
"ಸುಪ್ರೀಂ ಕೋರ್ಟ್ ಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟ್ ನಲ್ಲಿ ಬಿಜೆಪಿಗೆ ಬಹುಮತ ಇದೆ. ಬಿಜೆಪಿಗೆ ಮನಸ್ಸಿದ್ದರೆ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದು ಮಾಡಲಿ. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ನೋಡಿಕೊಳ್ಳಲಿ. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ, ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳಬಾರದು" ಎಂದು ಪೇಜಾವರ ಶ್ರೀಗಳ ಬಳಿ ಚರ್ಚಿಸಿದರು.
"ಆಡಳಿತ ಲೋಲುಪತೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಇಲ್ಲ. ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದಲ್ಲಿ ರಾಜಕಾರಣಿಗಳ ಅಧಿಕಾರದ ಆಸೆ ನೋಡಿಲ್ಲವೇ? ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪೋದಿಲ್ಲ. ವಿಭಜಿತ ಭಾರತದಲ್ಲಿ ರಾಮ ಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿ" ಎಂದರು.
ಅಯೋಧ್ಯೆಯಲ್ಲಿ ಮಸೀದಿಯೂ ನಿರ್ಮಾಣವಾಗಲಿ; ಬಾಬಾ ರಾಮ್ ದೇವ್
ಸಮಾಲೋಚನೆ ಸಂದರ್ಭದಲ್ಲಿ ಪೇಜಾವರಶ್ರೀ ಸಮಾನತೆ, ಸಂವಿಧಾನ, ಸಹಬಾಳ್ವೆ ಮತ್ತು ಏಕತೆಯ ಬಗ್ಗೆ ಮಾತನಾಡಿದರೂ ಪುರಿಶ್ರೀ ತಮ್ಮ ವಾದಕ್ಕೇ ಅಂಟಿಕೊಂಡಿದ್ದರು.