ಸಂಬಳ ಕೇಳಿದ ಸಿಬ್ಬಂದಿ ವಜಾ ಮಾಡಿದ ಉಡುಪಿ ಬಿ. ಆರ್. ಎಸ್ ಆಸ್ಪತ್ರೆ
ಉಡುಪಿ, ಆಗಸ್ಟ್ 26; ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ 16 ನೌಕರರನ್ನು ಕೆಲಸದಿಂದ ವಜಾ ಮಾಡಿದ ಉಡುಪಿಯ ಬಿ. ಆರ್. ಎಸ್ ಆಸ್ಪತ್ರೆ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರ ತನ್ನ ಸುರ್ಪದಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ಕಳೆದ ಆರು ತಿಂಗಳಿನಿಂದ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಉಚಿತ ಆಸ್ಪತ್ರೆಯಲ್ಲಿ ವೇತನವನ್ನು ನೀಡದೆ ತಡೆ ಹಿಡಿಯಲಾಗಿದೆ. ಈ ವಿಚಾರವಾಗಿ ಪ್ರತಿಭಟನೆ ನಡೆಸಿದ ಪ್ರಮುಖ 16 ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಉಡುಪಿ; ಬಿ. ಆರ್. ಶೆಟ್ಟಿ ಆಸ್ಪತ್ರೆ ಸರ್ಕಾರದ ಸುರ್ಪದಿಗೆ
ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಕಾರಣ ಕೊಟ್ಟು ನೌಕರರನ್ನು ವಜಾಗೊಳಿಸಲಾಗಿದೆ. ಈ ಕುರಿತು ಮಂಗಳವಾರ ಆಸ್ಪತ್ರೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಇದನ್ನು ಖಂಡಿಸಿ ಬುಧವಾರ ನೌಕರರು ಆಹೋರಾತ್ರಿ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಉದ್ಯೋಗಿಗಳಿಗೆ ಮುಂದಿನ ವರ್ಷ ವೇತನ ಹೆಚ್ಚಳ ಸಾಧ್ಯತೆ: ಕಾರಣವೇನು?
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಐವರು ವೈದ್ಯರು ಸೇರಿದಂತೆ 180 ಮಂದಿಗೆ ಮೇ, ಜೂನ್, ಜುಲೈ ತಿಂಗಳ ಸಂಬಳವನ್ನು ನೀಡಿಲ್ಲ. ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್ನಿಂದ 50 ಲಕ್ಷ ಬಿಡುಗಡೆ ಮಾಡಿ ಸಿಬ್ಬಂದಿಗೆ ವೇತನ ನೀಡುವಂತೆ ಸೂಚಿಸಲಾಗಿತ್ತು. ಆದರೆ ಶೇ 60ರಷ್ಟು ಮಾತ್ರ ವೇತನ ನೀಡಿ ಉಳಿದಿದ್ದನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
ವರ್ಕ್ ಫ್ರಂ ಹೋಂ ಮಾಡುವ ಉದ್ಯೋಗಿಗಳ ವೇತನ ಕಡಿತಕ್ಕೆ ಗೂಗಲ್ ಚಿಂತನೆ
ಮಂಗಳವಾರ ಆಸ್ಪತ್ರೆ ಆಡಳಿತ ಮಂಡಳಿ ಯಾವುದೇ ನೋಟಿಸ್ ನೀಡದೆ 2 ಡ್ಯೂಟಿ ಡಾಕ್ಟರ್, 2 ಸ್ವಾಗತಕಾರರು, ನಿರ್ವಹಣೆ ವಿಭಾಗದ 3, ಹೌಸ್ ಕೀಪಿಂಗ್ 2, ಭದ್ರತಾ ವಿಭಾಗದ ಇಬ್ಬರು ಸಿಬ್ಬಂದಿ ಸೇರಿ 16 ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಈ ತೀರ್ಮಾನ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್ನಿಂದ 50 ಲಕ್ಷ ಬಿಡುಗಡೆಗೊಂಡಾಗ ಮೇ ಮತ್ತು ಜೂನ್ ತಿಂಗಳ ವೇತನ ನೀಡುತ್ತೇವೆ. ಆಗಸ್ಟ್ನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದ್ದು, ಸೆಪ್ಟೆಂಬರ್ ಬಳಿಕ ಆಸ್ಪತ್ರೆ ಆಡಳಿತ ಸರ್ಕಾರದ ಸುಪರ್ದಿಗೆ ಹೋಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಶೇ 60ರಷ್ಟು ವೇತನವನ್ನು ಮಾತ್ರ ನೀಡಲಾಗಿದೆ.
ಹಲವು ತಿಂಗಳಿನಿಂದ ಪ್ರತಿಭಟನೆ; ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಉಚಿತ ಆಸ್ಪತ್ರೆಯಲ್ಲಿ ಕೆಲವು ತಿಂಗಳುಗಳಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಸಿಬ್ಬಂದಿಗೆ ವೇತನ ನೀಡುತ್ತಿಲ್ಲ ಎಂಬ ಆರೋಪಗಳಿವೆ. ವೈದ್ಯರು, ಸಿಬ್ಬಂದಿಗಳು ಈ ಕುರಿತು ಹಲವಾರು ಬಾರಿ ಆಕ್ರೋಶ ಹೊರಹಾಕಿದ್ದರು.
ಆಸ್ಪತ್ರೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಸರ್ಕಾರವನ್ನು ಆಗ್ರಹಿಸಿದ್ದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಜೊತೆ ಈ ಕುರಿತು ಮಾಹಿತಿ ಪಡೆದಿದ್ದರು.
ಆಗಸ್ಟ್ 11ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಗದ ವ್ಯವಹಾರಗಳು ಅಂತಿಮಗೊಂಡ ಬಳಿಕ ಆಸ್ಪತ್ರೆಯನ್ನು ಸುಪರ್ದಿಗೆ ತೆಗೆದುಕೊಳ್ಳಲು ಒಪ್ಪಿಗೆ ಕೊಡಲಾಗಿದೆ.
ದುಬೈನಲ್ಲಿ ನೆಲೆಸಿದ್ದ ಉಡುಪಿ ಮೂಲದ ಬಿ. ಆರ್. ಶೆಟ್ಟಿ ತಂದೆ-ತಾಯಿಯ ಹೆಸರಿನಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಉಚಿತ ಆಸ್ಪತ್ರೆಯನ್ನು ಉಡುಪಿಯಲ್ಲಿ ನಿರ್ಮಿಸಿದ್ದರು. ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಆದರೆ ಉದ್ಯಮದಲ್ಲಿ ನಷ್ಟ ಉಂಟಾದ ಬಳಿಕ ಬಿ. ಆರ್. ಶೆಟ್ಟಿ ಆಸ್ಪತ್ರೆಯನ್ನು ಸರ್ಕಾರವೇ ಮುನ್ನಡೆಸಬೇಕು ಎಂದು ಮನವಿಯನ್ನು ಮಾಡಿದ್ದರು.
Recommended Video
ಎನ್ಎಂಸಿ ಹೆಲ್ತ್ ಎನ್ನುವ ಬೃಹತ್ ಖಾಸಗಿ ಆರೋಗ್ಯ ಸಂಸ್ಥೆಯನ್ನು ಯುಎಇಯಲ್ಲಿ ಕಟ್ಟಿದ ಬಿ. ಆರ್. ಶೆಟ್ಟಿ ತಮ್ಮ ತವರು ನೆಲದಲ್ಲಿಯೂ ತಂದೆ-ತಾಯಿ ಹೆಸರಿನಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿದರು. ಆದರೆ ಈಗ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.