ಜಿಂದಾಲ್ ಕಂಪನಿಗೆ ಭೂಮಿ; ಜೂನ್ 14ಕ್ಕೆ ಬಿಜೆಪಿಯಿಂದ ಹೋರಾಟ
ಉಡುಪಿ, ಜೂನ್ 11: ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಜೂ.14ರಿಂದ ರಾಜ್ಯದ ಬಿಜೆಪಿ ಶಾಸಕರು ಹೋರಾಟ ಆರಂಭಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಜೂನಿಯರ್, ಸಚಿವ ಸ್ಥಾನ ಅಪೇಕ್ಷಿಸಲಿಲ್ಲ- ಶೋಭಾ ಕರಂದ್ಲಾಜೆ
ರಾಜ್ಯ ಸರ್ಕಾರ ರಾಜೀನಾಮೆ ಕೊಟ್ಟು ಮನೆಗೆ ಹೋಗ್ಬೇಕು. ಕೆಲಸ ಮಾಡುವ ಶಕ್ತಿ ಇಲ್ಲ ಅಂದರೆ ಮನೆಗೆ ಹೋಗ್ಲಿ. ಅಲ್ಲಿಯವರೆಗೆ ಬಿಜೆಪಿ ವಿಶ್ರಮಿಸುವುದಿಲ್ಲ. ಹೋರಾಟ ಮುಂದುವರೆಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮೂಲಕ ರಾಜ್ಯ ಸರ್ಕಾರದ ಶವ ಪೆಟ್ಟಿಗೆಗೆ ಕೊನೆಯ ಮುಳ್ಳು ಹೊಡೆದಂತಾಗಲಿದೆ. ಈ ಸರ್ಕಾರದಲ್ಲಿ ಯಾವುದೂ ನೆಟ್ಟಗಿಲ್ಲ. ರಾಮಲಿಂಗ ರೆಡ್ಡಿ, ಬೇಗ್, ಸೋಮಶೇಖರ್ ವಿರೋಧ ಮಾಡುತ್ತಿದ್ದಾರೆ. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಆಗ್ತಿಲ್ಲ. ಹೀಗೆಂದು ಕಾಂಗ್ರೆಸ್ ಶಾಸಕರೇ ಹೇಳ್ತಾರೆ. ಸಚಿವ ಸಂಪುಟ ವಿಸ್ತರಣೆ ನಂತರ ಸಮಸ್ಯೆ ಇನ್ನೂ ಹೆಚ್ಚಾಗುತ್ತೆ. ಅದಕ್ಕಾಗಿ ನಾವು ಕಾದು ನೋಡ್ತಾ ಇದೀವಿ ಎಂದರು.
ಸಿದ್ದರಾಮಯ್ಯ ಹಿಂದಿ ಹೇರಿಕೆ ಮಾತಿಗೆ ಶೋಭಾ ತಿರುಗೇಟು
ಜಿಂದಾಲ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯದ ಜನತೆಗೆ ಸರ್ಕಾರದಿಂದ ಮೋಸವಾಗಿದೆ. ರಾಜ್ಯ ಸರ್ಕಾರ ಜಿಂದಾಲ್ ಕಂಪೆನಿಗೆ ಅನುಕೂಲ ಮಾಡಿಕೊಡುತ್ತಿದೆ. ಜೊತೆಗೆ ಜಿಂದಾಲ್ ಕಂಪೆನಿಗೆ 3666 ಎಕರೆಗೆ ಶುದ್ಧ ಕ್ರಯಪತ್ರ ನೀಡಲು ಸರ್ಕಾರ ಮುಂದಾಗಿದೆ. ರೈತರಿಗೆ ಮೋಸ ಮಾಡಿದೆ ಎಂದರು. ಈ ಬಗ್ಗೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಹೇಳಿದರು.
ಅತಿವೃಷ್ಟಿ, ಅನಾವೃಷ್ಟಿ ನಿರ್ವಹಣೆಗೆ ಕೇಂದ್ರ ಸರ್ಕಾರ 7182 ಕೋಟಿ ನೀಡಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಈ ಅನುದಾನ ನೀಡಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡ್ತಾ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆ. ಅದು ಬದುಕಿದೆ ಅನಿಸ್ತಾ ಇಲ್ಲ. ಯುಪಿಎ ಸರ್ಕಾರ 10 ವರ್ಷಗಳಲ್ಲಿ ಕೇವಲ ನಾಲ್ಕು ಸಾವಿರ ಕೋಟಿ ನೀಡಿತ್ತು. ದೊಡ್ಡ ಪ್ರಮಾಣದ ಅನುದಾನ ನೀಡಿಯೂ ರಾಜ್ಯದ ಸ್ಪಂದನ ಶೂನ್ಯ ಎಂದು ಅವರು ಕಿಡಿಕಾರಿದರು.