ಜಿಂದಾಲ್ ಕಂಪನಿಗೆ ಭೂಮಿ; ಪ್ರತಿಭಟನೆಗೆ ಸಿದ್ಧ ಎಂದ ಬಿಜೆಪಿ
ಉಡುಪಿ, ಜೂನ್ 07: ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಅಕ್ರಮವಾಗಿ ಜಮೀನು ಕೊಡಲು ಮುಂದಾಗಿದೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರಕ್ಕೆ ಎಟಿಎಂ ಇದ್ದಂತೆ'
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಲು ಸಮ್ಮಿಶ್ರ ಸರಕಾರ ಹೊರಟಿದೆ. ಸರಕಾರ ಎಕರೆಗೆ 1.20 ಲಕ್ಷಕ್ಕೆ ಕೊಡಲು ಮುಂದಾಗಿದೆ. ಆದರೆ ಆ ಜಮೀನು ಎಕರೆಗೆ ಎರಡು ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಿದರು.
ಜಿಂದಾಲ್ ಸಂಸ್ಥೆಯಿಂದ ಸರಕಾರಕ್ಕೆ 1500 ಕೋಟಿ ರೂಪಾಯಿ ಬಾಕಿಯಿದೆ. ಯೋಜನೆ ವಿರೋಧಿಸಿ ಹಿರಿಯ ಕಾಂಗ್ರೆಸಿಗ ಎಚ್.ಕೆ. ಪಾಟೀಲ್ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಬಿಜೆಪಿ ಈ ಅನ್ಯಾಯವನ್ನು ಖಂಡಿಸುತ್ತದೆ ಎಂದು ಹೇಳಿದ ಅವರು ರಾಜ್ಯ ಸರಕಾರದ ಈ ನಡೆಯ ವಿರುದ್ಧ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಜೂನ್ 13 ರಿಂದ 15 ರವರೆಗೆ ಬೆಂಗಳೂರಲ್ಲಿ ನಿರಂತರ ಪ್ರತಿಭಟನೆ ಮಾಡುತ್ತೇವೆ. ರಾಜ್ಯ ಸರಕಾರದ ಹಲವು ಲೋಪದೋಷದ ವಿರುದ್ಧ ಈ ಪ್ರತಿಭಟನೆ ಎಂದು ಅವರು ಹೇಳಿದರು.