ಉಡುಪಿಯಲ್ಲಿ ಗರ್ಭಿಣಿ ಸಹಿತ ಗುಳೆ ಹೊರಟ 10 ಜನರ ರಕ್ಷಣೆ
ಉಡುಪಿ, ಏಪ್ರಿಲ್ 12: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಿರುವ ಸಂದರ್ಭದಲ್ಲಿ ಜನರ ಓಡಾಟ ಇನ್ನೂ ನಿಂತಿಲ್ಲ. ಹಾಗಿದ್ದರೂ ಗರ್ಭಿಣಿ ಮತ್ತು ಮೂವರು ಮಹಿಳೆಯರ ಸಹಿತ 10 ಜನ ಕಾರ್ಮಿಕರು ತಮ್ಮ ಹುಟ್ಟೂರಾದ ಧಾರವಾಡಕ್ಕೆ ಹೊರಟ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲದಿಂದ ಕಾಲ್ನಡಿಗೆಯಲ್ಲಿ ಹೊರಟು ಅತಂತ್ರರಾದವರನ್ನು ಬ್ರಹ್ಮಾವರದಲ್ಲಿ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿದ್ದಾರೆ. ಬ್ರಹ್ಮಾವರದ ಅಸಹಾಯಕ ಮಹಿಳೆಯೋರ್ವರಿಗೆ ಅಕ್ಕಿ, ದಿನಸಿ ಸಾಮಾಗ್ರಿ ನೀಡಿ ಹಿಂತಿರುಗಿ ಬರುವ ವೇಳೆ ರಾತ್ರಿ ಹೊತ್ತು ಅಸಹಾಯಕರಾದ ಮಹಿಳೆಯರು ಹಾಗೂ ಕಾರ್ಮಿಕರ ಗುಂಪೊಂದು ಕಾಲ್ನಡಿಗೆಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ ವಿಶು ಶೆಟ್ಟಿ ಅವರನ್ನು ವಿಚಾರಿಸಿದ್ದಾರೆ.
ಕಾರ್ಮಿಕ ಕುಟುಂಬ ಲಾಕ್ ಡೌನ್ ನ ನಾಲ್ಕು ದಿನದ ಮೊದಲು ಉಡುಪಿಗೆ ಬಂದಿತ್ತು. ಬಂದ ಸಮಯವೇ ಲಾಕ್ ಡೌನ್ ಆಗಿದ್ದರಿಂದ ಅವರ ಬಳಿ ಹಣ ಖಾಲಿಯಾಗಿತ್ತು. ಹಲವು ದಿನಗಳಿಂದ ಮಧ್ಯಾಹ್ನದ ಊಟ, ಮಾಡಿ ಮಲಗುತ್ತಿದ್ದ ಅವರು ಲಾಕ್ ಡೌನ್ ಮುಂದುವರಿದ ಹಿನ್ನಲೆಯಲ್ಲಿ ಅಸಹಾಯಕರಾಗಿ ಊರು ಸೇರುವ ನಿರ್ಧಾರ ಮಾಡಿ ಬ್ರಹ್ಮಾವರ ತನಕ ಕಾಲ್ನಡಿಗೆಯಲ್ಲಿ ಬಂದಿದ್ದರು.
5 ತಿಂಗಳ ಗರ್ಭಿಣಿ ಮಹಿಳೆ ಹಾಗೂ 3 ವರ್ಷದ ಒಂದು ಮಗುವೂ ಜೊತೆಗೆ ಇದೆ. ಆಹಾರವಿಲ್ಲದೇ ನೊಂದ ಕಾರ್ಮಿಕರು ವಿಶು ಶೆಟ್ಟಿಯವರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾರ್ಮಿಕ ಕುಟುಂಬಕ್ಕೆ 15 ದಿನಗಳ ಆಹಾರದ ಜವಾಬ್ದಾರಿಯನ್ನು ತಾನು ನಿರ್ವಹಿಸುವ ಭರವಸೆ ನೀಡಿ, ಕರೆತಂದು ಊಟ ಮತ್ತು ವಸತಿ ಕಲ್ಪಿಸಿದ್ದಾರೆ.
ಇಂದು ಬೆಳಿಗ್ಗೆ 15 ದಿನಗಳಿಗೆ ಬೇಕಾಗುವ 40 ಕೆಜಿ ಅಕ್ಕಿ, 8 ಕೆಜಿ ಜೋಳ ಹಿಟ್ಟು, ತೊಗರಿ ಬೇಳೆ, 15 ಕೆಜಿ ತರಕಾರಿ, ಎಣ್ಣೆ, ಮೆಣಸು, ಸಕ್ಕರೆ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ಕಾರ್ಮಿಕರು ವಾಸಿಸುವ ಸ್ಥಳಕ್ಕೆ ತೆರಳಿ ವಿಶು ಶೆಟ್ಟಿಯವರು ನೀಡಿ ಮಾನವೀಯತೆ ಮೆರೆದಿದ್ದಾರೆ.