ಲೋಕಸಭಾ ಚುನಾವಣೆ: ಕರಾವಳಿ ಬಿಜೆಪಿಯಲ್ಲಿ ಸದ್ಯದಲ್ಲೇ ಬೀಸಲಿದೆ 'ಬಿರುಗಾಳಿ'?
Recommended Video
ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಅತೃಪ್ತರು ಪಕ್ಷಾಂತರ ಮಾಡುವುದು ಹೊಸದೇನಲ್ಲ. ಸಾರ್ವತ್ರಿಕ ಚುನಾವಣೆಗೆ ದಿನ ಸಮೀಪಿಸುತ್ತಿರುವುದರಿಂದ, ಕರಾವಳ ಜಿಲ್ಲೆ ಉಡುಪಿಯಲ್ಲಿ ಪ್ರಮುಖ ಮುಖಂಡರೊಬ್ಬರು, ಬಿಜೆಪಿಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೇಗೆ ಗೊಂದಲವಿದೆಯೋ, ಅದೇ ರೀತಿಯ ಗೊಂದಲ ಬಿಜೆಪಿಯಲ್ಲೂ ಇದೆ. ಹಲವು ಮುಖಂಡರ ಹೆಸರು, ಎರಡೂ ಪಕ್ಷದಿಂದ ಕೇಳಿಬರುತ್ತಿದೆ.
ಛತ್ತೀಸ್ ಗಢ ಮತ ಎಣಿಕೆಗೆ ಚುನಾವಣೆ ಆಯೋಗಕ್ಕೆ ಪಟೇಲ್ 4 ಸಲಹೆ
ಜೆಡಿಎಸ್ ಪಕ್ಷಕ್ಕೆ ಕರಾವಳಿ ಜಿಲ್ಲೆಯಲ್ಲಿ, ಅದರಲ್ಲೂ ಪ್ರಮುಖವಾಗಿ ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಅಷ್ಟೇನೂ ನೆಲೆಯಿಲ್ಲದಿದ್ದರೂ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು, ಮುಂಬರುವ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿಯಿದೆ.
ಈ ಭಾಗದ ಪ್ರಮುಖ ಮುಖಂಡರೊಬ್ಬರು, ಜೆಡಿಎಸ್ ಸೇರಲು ಇಚ್ಚಿಸಿರುವುದರಿಂದ, ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸಿ, ಈ ಭಾಗದಲ್ಲಿ ಬಿಜೆಪಿಯ ನಾಗಾಲೋಟಕ್ಕೆ ತಡೆಯೊಡ್ದಲು, ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನುವ ಸುದ್ದಿಯಿದೆ.
ಪಂಚ ರಾಜ್ಯಗಳ ವಿಧಾನಸಭಾ ಫಲಿತಾಂಶದ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಆದರೆ, ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಹಲವರ ಹೆಸರು ಚಾಲ್ತಿಯಲ್ಲಿರುವುದರಿಂದ ಮತ್ತು ಬಿಜೆಪಿಗೆ ಪೈಪೋಟಿ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎನ್ನುವ ವಾತಾವರಣವಿರುದರಿಂದ, ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ದವಿದೆಯೇ ಎನ್ನುವುದಿಲ್ಲಿ ಪ್ರಶ್ನೆ. ಬಿಜೆಪಿ ಬಿಡಲು ಮುಂದಾಗಿದ್ದಾರೆ ಎನ್ನುವ ಮುಖಂಡರು ಯಾರು?
ಜಯಪ್ರಕಾಶ್ ಹೆಗ್ಡೆ, ಬಿಜೆಪಿ ತೊರೆಯುವ ಸಾಧ್ಯತೆ
ಸರಳ ಸಜ್ಜನಿಕೆ, ಜನಾನುರಾಗಿ ಮುಖಂಡ ಎಂದೇ ಉಡುಪಿ ಜಿಲ್ಲೆಯಲ್ಲಿ ಹೆಸರಾಗಿರುವ ಕೆ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ತೊರೆಯುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ, ಹೆಗ್ಡೆ ಬಿಜೆಪಿ ತೊರೆದದ್ದೇ ಆದಲ್ಲಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ.
ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧಿಸಬಲ್ಲ ಮುಖಂಡ
ಯಾವುದೇ ಪಕ್ಷದ ಗುರುತಿಲ್ಲದೇ ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧಿಸಬಲ್ಲ ಮುಖಂಡರಲ್ಲಿ ಜಯಪ್ರಕಾಶ್ ಹೆಗ್ಡೆ ಕೂಡಾ ಒಬ್ಬರು. ಉಡುಪಿ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರ ವಿಂಗಡಣೆಯ ಮುನ್ನ ಬ್ರಹ್ಮಾವರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಯಪ್ರಕಾಶ್ ಹೆಗ್ಡೆ, ಸಚಿವರಾಗಿಯೂ ಕೆಲಸ ನಿರ್ವಹಿಸಿದವರು.
ಜಯಪ್ರಕಾಶ್ ಹೆಗ್ಡೆ ವಿಧಾನಸಭೆಗೋ ಲೋಕಸಭೆಗೋ? ಇನ್ನೂ ನಡೆ ನಿಗೂಢ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
2012ರಲ್ಲಿ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿದ್ದ ಜಯಪ್ರಕಾಶ್ ಹೆಗ್ಡೆ, ಕಳೆದ ಲೋಕಸಭಾ (2014) ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ದ ಸೋಲು ಅನುಭವಿಸಿದ್ದರು. ಇದಾದ ನಂತರ ಕಾಂಗ್ರೆಸ್ ಪಕ್ಷದಿಂದ ಎಂಎಲ್ಸಿ ಸ್ಥಾನ ಬಯಸಿದ್ದ ಹೆಗ್ದೆ, ಅದು ಸಿಗದೇ ಇದ್ದಾಗ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಕಾಂಗ್ರೆಸ್ ಇವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಉಚ್ಚಾಟಿಸಿತ್ತು.
ಬಿಜೆಪಿಗೆ ಸೇರ್ಪಡೆಗೊಂಡಿದ್ದ ಹೆಗ್ಡೆ
ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ಹೆಗ್ಡೆ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕುಂದಾಪುರ ಅಥವಾ ಬೈಂದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ, ಲೋಕಸಭೆಯ ಟಿಕೆಟ್ ನೀಡುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಆದರೆ, ಮುಂಬರುವ ಚುನಾವಣೆಯಲ್ಲೂ, ಬಿಜೆಪಿ ಟಿಕೆಟ್ ಸಿಗುವುದು ಡೌಟು ಎಂದರಿತಿರುವ ಹೆಗ್ಡೆ, ಜೆಡಿಎಸ್ ಬಾಗಿಲು ಬಡಿದಿದ್ದಾರೆ.
ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಸಂಚಾಲಕರ ಪಟ್ಟಿ
ಕುಮಾರಸ್ವಾಮಿಯವರನ್ನು ಈಗಾಗಲೇ ಭೇಟಿಯಾಗಿರುವ ಹೆಗ್ಡೆ
ಕೆಲವೊಂದು ಮಾಹಿತಿಗಳ ಪ್ರಕಾರ, ಜಯಪ್ರಕಾಶ್ ಹೆಗ್ಡೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಈಗಾಗಲೇ ಭೇಟಿಯಾಗಿದ್ದರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿದರೆ, ಜೆಡಿಎಸ್ ಸೇರಲು ಸಿದ್ದ ಎನ್ನುವ ಮಾತು ನೀಡಿದ್ದಾರೆ ಎನ್ನುವ ಸುದ್ದಿ ಉಡುಪಿ ಭಾಗದಲ್ಲಿ ಹರಿದಾಡುತ್ತಿದೆ.
ಅಹಮದ್ ಪಟೇಲ್ ಅವರನ್ನೂ ಹೆಗ್ಡೆ ಭೇಟಿಯಾಗಿ ಬಂದಿದ್ದಾರೆ?
ವೈಯಕ್ತಿಕ ವರ್ಚಸ್ಸು ಇರುವುದರಿಂದ, ಕುಮಾರಸ್ವಾಮಿ ಕೂಡಾ ಹೆಗ್ಡೆ ಅವರ ಆಫರ್ ಗೆ ಒಲವು ತೋರಿದ್ದಾರೆ. ಹೆಚ್ಡಿಕೆ ಸೂಚನೆಯ ಮೇರೆಗೋ ಏನೋ, ಎಐಸಿಸಿಯ, ಅಹಮದ್ ಪಟೇಲ್ ಅವರನ್ನೂ ಹೆಗ್ಡೆ ಭೇಟಿಯಾಗಿ ಬಂದಿದ್ದಾರೆ. ಸದ್ಯಕ್ಕೆ ಇಷ್ಟು ಸುದ್ದಿ, ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಪಕ್ಷಾಂತರ ಪರ್ವ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.