ಪೇಜಾವರ ಶ್ರೀ ಸಮಾರಾಧನೋತ್ಸವ; ಪರಿಶಿಷ್ಟ ಜನರ ಕಾಲೋನಿಯಲ್ಲಿ ಅನ್ನದಾನ
ಉಡುಪಿ, ಜನವರಿ 9: ಗುರುವಾರ ಪೇಜಾವರ ಶ್ರೀ ವಿಶ್ವೇಶತೀರ್ಥಶ್ರೀಪಾದರ ಮಹಾ ಸಮಾರಾಧನೋತ್ಸವದ ಪ್ರಯುಕ್ತ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಉಡುಪಿ ಶ್ರೀಕೃಷ್ಣ ಮಠ ಶ್ರೀ ಪೇಜಾವರ ಮಠ ಸೇರಿದಂತೆ ದೇಶಾದ್ಯಂತ ಇರುವ ಪೇಜಾವರ ಮಠದ ಶಾಖೆಗಳು, ಅತಿಥಿಗೃಹ, ಶಾಲೆ ಕಾಲೇಜು, ಅನಾಥಾಶ್ರಮ, ಸೇವಾಧಾಮ ವಿದ್ಯಾರ್ಥಿನಿ ನಿಲಯಗಳೂ ಸೇರಿದಂತೆ 85ಕ್ಕೂ ಅಧಿಕ ಕಡೆಗಳಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ವೈಭವದಿಂದ ನೆರವೇರಿದವು.
ಜ.11 ರಂದು ಬೆಂಗಳೂರಿನಲ್ಲಿ ಪೇಜಾವರ ಶ್ರೀ ಗುರು ನಮನ
ಉಡುಪಿ ಪೇಜಾವರ ಮಠದಲ್ಲಿಯೂ ಬೆಳಿಗ್ಗೆ ಪವಮಾನ ಹೋಮ, ಭಜನೆ, ಪಾರಾಯಣ, ಪಾದುಕಾ ಪೂಜಾ ಮಹಾಪೂಜೆ ಸಾವಿರಕ್ಕೂ ಅಧಿಕ ಜನರ ಅನ್ನಾರಾಧನೆಗಳು ನಡೆದವು. ಶ್ರೀಗಳ ಆಸನದಲ್ಲಿ ಭಾವಚಿತ್ರ, ಪಾದುಕೆಗಳನ್ನಿಟ್ಟು ರಜತ ಮಂಟಪ ಸಹಿತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪದ್ಮನಾಭ ಭಟ್ ಕಿದಿಯೂರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ವ್ಯವಸ್ಥಾಪಕರಾದ ವಾಸುದೇವ ಅಡಿಗ, ಇಂದು ಶೇಖರ, ಕೊಟ್ಟಾರಿಗಳಾದ ಸಂತೋಷ್ ಆಚಾರ್ಯ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಬೇರುಬಿಟ್ಡಿರುವ ಅಸೃಶ್ಯತೆಯ ನಿವಾರಣೆಗಾಗಿ ಪೇಜಾವರ ಶ್ರೀಗಳ ಕ್ರಾಂತಿಕಾರಿ ಕರ್ತವ್ಯವನ್ನು ಸ್ಮರಿಸುವ ಸಲುವಾಗಿ ಉಡುಪಿಯ ಕರಂಬಳ್ಳಿಯಲ್ಲಿ ಪರಿಶಿಷ್ಡ ಜಾತಿ ಜನರ ಕಾಲೊನಿಯಲ್ಲಿ ಶ್ರೀಗಳ ಸಂಸ್ಮರಣೆ ಸಹಿತ ಸಾಮೂಹಿಕ ಅನ್ನದಾನ ನೆರವೇರಿತು. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸೂಚನೆಯಂತೆ ವಾಸುದೇವ ಭಟ್ ಪೆರಂಪಳ್ಳಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಸುಮಾರು 200 ಮಂದಿ ಭೋಜನ ಸ್ವೀಕರಿಸಿದರು.