Breaking: ಪ್ರವೀಣ ಕೊಲೆ: ಸರ್ಕಾರದ ಮೇಲಿನ ವಿಶ್ವಾಸ ಕ್ಷೀಣಿಸುತ್ತಿದೆ- ಪೇಜಾವರ ಶ್ರೀ
ಉಡುಪಿ ಜುಲೈ 27: ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಗೈದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮನುಷ್ಯ ಮನುಷ್ಯನನ್ನು ಕೊಲೆ ಮಾಡುವುದು ಹೇಯ ಕೃತ್ಯವಾಗಿದ್ದು, ಇಂದಿನ ಈ ಘಟನೆಯಿಂದ ಇಡಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರ ಕೊಲೆ ಮಾಡಿದ ದುಷ್ಕರ್ಮಿಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೆಕಿದೆ ಎಂದರು.
ರಾಜ್ಯದಲ್ಲಿ ಈ ರೀತಿಯ ದುಷ್ಕೃತ್ಯಗಳು ನಿರಂತರವಾಗಿ ಮುಂದುವರಿದ ಪರಿಣಾಮ ಜನಾಕ್ರೋಶ ಹೆಚ್ಚಾಗಿದೆ. ಸರ್ಕಾರಗಳ ಮೇಲೆ ವಿಶ್ವಾಸ, ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ವಿಷಾಧಿಸಿದರು.
ಕೆಲವು ತಿಂಗಳುಗಳ ಹಿಂದೆಯೇ ಹಿಂದು ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ನೋವಿನಿಂದ ಹೊರಬರುವ ಮುನ್ನವೇ ಮತ್ತೊಬ್ಬ ಯುವ ಮುಖಂಡನ ಹತ್ಯೆಯಾಗಿದೆ. ಹೀಗಾಗಿಯೇ ಹಿಂದೂಗಳ ತಾಳ್ಮೆ, ಸಹನೆಯ ಕಟ್ಟೆ ಒಡೆಯುವಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂತ ಸಮಯದಲ್ಲಿ ಅದು ಸಹಜವು ಆಗಿದೆ. ಹಾಗೆಂದ ಮಾತ್ರಕ್ಕೆ ಯಾರೂ ಧೈರ್ಯ ಕಳೆದುಕೊಳ್ಳಬಾರದು. ಶಾಂತಿಯಿಂದ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಈ ಸಾವು ಅತೀವ ನೋವು ತರಿಸಿದೆ. ಮೃತ ಪ್ರವೀಣ ನೆಟ್ಟಾರು ಅವನ ಆತ್ಮಕ್ಕೆ ಸದ್ಗತಿ ದೊರೆಯಲಿ. ಕುಟುಂಬದವರಿಗೆ ಪ್ರವೀಣ್ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿ ಕರುಣಿಸಲಿ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಾಕಾರಿಣಿ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು ಸಾಕಷ್ಟು ಸಾಮಾಜಿಕ ಕೆಲಗಳಲ್ಲಿ ಸಕ್ರಿಯನಾಗಿದ್ದ. ಈತ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿದ್ದ. ಮಂಗಳವಾರ ಸಂಜೆ ಕೋಳಿ ಅಂಗಡಿ ಬಾಗಿಲು ಹಾಕುತ್ತಿದ್ದ ವೇಳೆ ಬಂದ ಅಪರಿಚಿತ ದುಷ್ಕರ್ಮಿಗಳು ಪ್ರವೀಣ್ ನನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ತನಿಖೆ ನಡೆಯುತ್ತಿದೆ.