'2000 ಕೋಟಿ ಅನುದಾನ ತಂದಿರುವ ಪ್ರಮೋದ್ ಗೆ ಬೇರೆ ಪಕ್ಷ ಯಾಕೆ?'
ಉಡುಪಿ, ಮಾರ್ಚ್ 25: ಬಿಜೆಪಿಯನ್ನು ಉದ್ಧಾರ ಮಾಡಲು ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ಬರುವುದು ಬೇಡ. ಅವರಿಗೆ ಲಾಭ ಆಗುವುದಾದರೆ ಬಿಜೆಪಿಗೆ ಬರಲಿ. ಬರ್ತೀನಿ- ಬರೋದಿಲ್ಲ ಅಂತ ಗೊಂದಲದ ಹೇಳಿಕೆ ನೀಡುವುದು ಯಾಕೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಪ್ರಶ್ನೆ ಮಾಡಿದ್ದಾರೆ.
"ಬಿಜೆಪಿ ಗೇಟ್ ಮುಚ್ಚಿದೆ, ಮಾಜಿ ಶಾಸಕರೊಬ್ಬರಿಗೆ ನಾನು ಬಿಜೆಪಿಗೆ ಸೇರೋದು ಇಷ್ಟವಿಲ್ಲ" ಎಂದು ಹೇಳಿಕೆ ನೀಡಿದ್ದ ಪ್ರಮೋದ್ ಮಧ್ವರಾಜ್ ಗೆ ಭಟ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಬಳಿ ನಾನು ಬಿಜೆಪಿಗೆ ಹೋಗ್ತೇನೆ ಅಂತಾರೆ. ಮಾಧ್ಯಮದ ಹೇಳಿಕೆಯಲ್ಲಿ ಗೊಂದಲ ಸೃಷ್ಟಿಸುತ್ತಾರೆ. ನಾನಂತೂ ಅವರ ಬಿಜೆಪಿ ಸೇರ್ಪಡೆಗೆ ಅಡ್ಡಗಾಲು ಇಟ್ಟಿಲ್ಲ ಎಂದಿದ್ದಾರೆ.
'ಬಿಜೆಪಿ ಗೇಟ್ ಮುಚ್ಚುವುದಿಲ್ಲ, ಆದರೆ ಮಧ್ವರಾಜ್ ಬರುವುದು ಬೇಡ'
ಉಡುಪಿಯಲ್ಲಿ ಮೂವರು ಮಾಜಿ ಶಾಸಕರಿದ್ದಾರೆ. ನಾನು, ಯು.ಆರ್. ಸಭಾಪತಿ, ಮನೋರಮಾ ಮಧ್ವರಾಜ್. ಪ್ರಮೋದ್ ಗೆ ಯಾರು ಅಡ್ಡಗಾಲು ಹಾಕಿದ್ದಾರೋ ಗೊತ್ತಿಲ್ಲ. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಯಾರು ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಆಫೀಸಿಗೆ ಗೇಟೇ ಇಲ್ಲ. ಬಿಜೆಪಿಯಲ್ಲಿ ಗೇಟ್ ಹಾಕುವ ವ್ಯವಸ್ಥೆಯೂ ಇಲ್ಲ. ಆದರೆ ಉಡುಪಿ ಕ್ಷೇತ್ರಕ್ಕೆ 2000 ಕೋಟಿ ರುಪಾಯಿ ಅನುದಾನ ತಂದಿದ್ದೇನೆ ಅಂತ ಬೀಗುತ್ತಿರುವ ಸಚಿವರಿಗೆ ಬೇರೆ ಪಕ್ಷದ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.