ರೈಗೆ ಕಾರಂತ ಪ್ರಶಸ್ತಿ: ಬಿಜೆಪಿ ಮನವಿ ತಿರಸ್ಕರಿಸಿದ ಆಯೋಜಕರು
ಉಡುಪಿ, ಅಕ್ಟೋಬರ್ 6: ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರ ಪ್ರಶಸ್ತಿ ವಿಚಾರದಲ್ಲಿ ವಿವಾದ ಜಟಿಲಗೊಳ್ಳುತ್ತಿದೆ. ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಖ್ಯಾತ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿರುವುದಕ್ಕೆ ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಮುಖಂಡರೂ ವಿರೋಧ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪ್ರಶಸ್ತಿ ಆಯ್ಕೆ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದೆ . ಡಾ ಶಿವರಾಮ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಕಳೆದ 13 ವರ್ಷಗಳಿಂದ ನೀಡುತ್ತಾ ಬರಲಾಗಿದೆ.
ರೈಗೆ ಕಾರಂತ ಪ್ರಶಸ್ತಿ : ಸಾಮಾಜಿಕ ತಾಣದಲ್ಲಿ ಭುಗಿಲೆದ್ದ ಆಕ್ರೋಶ
ಕೋಟತಟ್ಟು ಗ್ರಾಮ ಪಂಚಾಯತ್ , ಕೋಟಾದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಾರಥ್ಯದಲ್ಲಿ ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಸಹಯೋಗದೊಂದಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿಗೆ ಪ್ರಕಾಶ್ ರೈ ಅರ್ಹರು
ಈಗ ಪ್ರಶಸ್ತಿಯ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ವಿವಾದಕ್ಕೆ ತೆರೆ ಎಳೆಯಲು ಹಾಗೂ ಪ್ರಶಸ್ತಿಯ ಆಯ್ಕೆಯನ್ನು ಸಮರ್ಥಿಸಿ ಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ . ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೋಟತಟ್ಟು ಗ್ರಾಪಂ ಅಧ್ಯಕ್ಷ ಪ್ರಮೋದ್ ಹಂದೆ ಈ ಪ್ರಶಸ್ತಿಗೆ ಪ್ರಕಾಶ್ ರೈ ಅರ್ಹರಾಗಿದ್ದಾರೆ ಎಂದು ಸಮರ್ಥನೆ ನೀಡಿದರು.
ವಿರೋಧಕ್ಕೆ ವಿಷಾದ
ನಟ ಪ್ರಕಾಶ ರೈ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ಪ್ರಶಸ್ತಿಗೆ ವ್ಯಕ್ತಿಯನ್ನು ಆರಿಸಲು ಐದು ಮಂದಿಯ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ನಿಗದಿಯಂತೆ ಪ್ರಶಸ್ತಿ ಪ್ರಧಾನ
ಕಳೆದ 12 ವರ್ಷಗಳಿಂದ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಾ ಬರಲಾಗಿದ್ದು ಈ ಬಾರಿ
ಅಕ್ಟೋಬರ್ 10 ರಂದು ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಂದೆ ಖಡಾಖಂಡಿತವಾಗಿ ಹೇಳಿದರು.
ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ
ವೈಯುಕ್ತಿಕ ಹೇಳಿಕೆಗೂ, ಪ್ರಶಸ್ತಿಗೂ ಸಂಬಂಧವಿಲ್ಲ . ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಡಾ. ಶಿವರಾಮ್ ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ರಾಜಕೀಯ ಬೇಡ ಎಂದು ಅವರು ವಿನಂತಿಸಿದರು.
ಆಯೋಜಕರ ಸಮರ್ಥನೆಯಿಂದ ಪ್ರಶಸ್ತಿ ನೀಡದಂತೆ ಮನವಿ ಮಾಡಿದ್ದ ಬಿಜೆಪಿಗರು ಮುಖಭಂಗ ಅನುಭವಿಸಿದ್ದಾರೆ.