ಪೇಜಾವರ ವಿಶ್ವೇಶತೀರ್ಥರಿಗೆ ಮರಣೋತ್ತರ ಪದ್ಮವಿಭೂಷಣ ಗೌರವ: ಪ್ರಶಸ್ತಿ ಸ್ವೀಕರಿಸಲಿರುವ ಕಿರಿಯ ಶ್ರೀಗಳು
ಉಡುಪಿ, ಅಕ್ಟೋಬರ್ 23: ನವೆಂಬರ್ 8ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ರಾಜ್ಯದಿಂದ ಈ ಪ್ರಶಸ್ತಿಗಳಿಗೆ ಆಯ್ಕೆಯಾದ ಮಹನೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ತಲುಪಿಸಿದ್ದು, ನಾಡು ಕಂಡ ಶ್ರೇಷ್ಠ ಸಂತ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರಿಗೂ ಪದ್ಮವಿಭೂಷಣ ಪ್ರಶಸ್ತಿ (ಮರಣೋತ್ತರ) ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಪೇಜಾವರ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಹರೇಕಳ ಹಾಜಬ್ಬಗೆ ನ.8ರಂದು ಪದ್ಮಶ್ರೀ ಗೌರವ; ದೆಹಲಿ ವಿಮಾನ ಹತ್ತಲಿದ್ದಾರೆ ಬರಿಗಾಲ ಫಕೀರ
ಈಗಾಗಲೇ ಶ್ರೀಗಳಿಗೆ ಕೇಂದ್ರ ಸರ್ಕಾರದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಧೀಕೃತ ಆಹ್ವಾನ ಬಂದಿದ್ದು, ಪ್ರಶಸ್ತಿ ಸ್ವೀಕರಿಸುವಂತೆ ಸರ್ಕಾರ ಮನವಿ ಮಾಡಿದೆ. ಪೇಜಾವರ ಹಿರಿಯ ಶ್ರೀಗಳ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಲ್ಲಿಸಿದ್ದ ಅಪೂರ್ವ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2020ರಲ್ಲಿ ಕೇಂದ್ರ ಸರ್ಕಾರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು.
ಈ ಕಾರ್ಯಕ್ರಮ 2020ರ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಆದರೆ ಇದೀಗ ಕಾರ್ಯಕ್ರಮಕ್ಕೆ ಸುಯೋಗ ಬಂದಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಹಿನ್ನಲೆಯಲ್ಲಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಉಡುಪಿಯಲ್ಲಿ ನಿಗದಿಯಾದ ಕಾರ್ಯಕ್ರಮ ಮುಗಿಸಿ ದೆಹಲಿ ಪ್ರಯಾಣ ಮಾಡಲಿದ್ದಾರೆ. ನವೆಂಬರ್ 7ರಂದು ಉಡುಪಿಯ ಶ್ರೀಕೃಷ್ಣ ಮಠದಿಂದ ನೀಲಾವರದ ಗೋಶಾಲೆವರೆಗೆ ನಡೆಯುವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಲಿದ್ದಾರೆ. ಬಳಿಕ ಅದೇ ದಿನ ರಾತ್ರಿ ಉಡುಪಿಯಿಂದ ಬೆಂಗಳೂರಿಗೆ ತೆರಳಿ, ನವೆಂಬರ್ 8ರ ಮುಂಜಾನೆ ನವದೆಹಲಿಗೆ ವಿಮಾನ ಹತ್ತಲಿದ್ದಾರೆ.
ನವೆಂಬರ್ 8ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಅದೇ ದಿನ ಬೆಂಗಳೂರಿಗೆ ಆಗಮಿಸಲಿರುವ ಶ್ರೀಗಳು, ನಂತರ ನವೆಂಬರ್ 13ರಂದು ದೆಹಲಿಯಲ್ಲಿ ನಡೆಯುವ ಆಯೋಧ್ಯೆ ಶ್ರೀರಾಮ ಜನ್ಮತೀರ್ಥಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಒಟ್ಟಿನಲ್ಲಿ ದೇಶ ಕಂಡ ಧಾರ್ಮಿಕ ಸಂತ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹರಿಪಾದ ಸೇರಿ ಎರಡು ವರ್ಷಗಳು ಸನಿಹವಾಗುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಸರ್ಕಾರ ಗೌರವಿಸಲಿದೆ. 88 ವರ್ಷಗಳ ಕಾಲ ಬದುಕಿದ ಪೇಜಾವರ ಶ್ರೀಗಳು 2019ರ ಡಿಸೆಂಬರ್ 29ರಂದು ವಯೋಸಹಜ ಕಾಯಿಲೆಯಿಂದ ತನ್ನಿಚ್ಚೆಯಂತೆ ಉಡುಪಿಯ ಪೇಜಾವರ ಮಠದಲ್ಲಿ ವಿಧಿವಶರಾಗಿದ್ದರು.
ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರವಾಗಬೇಕೆಂದು ಶ್ರೀಗಳು ಕನಸನ್ನು ಹೊಂದಿದ್ದರು. ದೇಶದಲ್ಲಿ ಸಮಾನತೆ, ಜಾತಿ ಪದ್ಧತಿ ಹೋಗಲಾಡಿಸುವಿಕೆಗಾಗಿ ಅವಿರತ ಶ್ರಮಪಟ್ಟಿದ್ದರು. ಹಿಂದೂ ಧರ್ಮದ ಶ್ರೇಷ್ಠ ಸಂತನಾಗಿ ಗುರುತಿಸಿಕೊಂಡಿದ್ದರು. ಧರ್ಮದ ವಿಚಾರದಲ್ಲಿ ಸದಾ ದುಡಿಯುತ್ತಿದ್ದ ಪೇಜಾವರ ಶ್ರೀಗಳು, ಇಳಿವಯಸ್ಸಿನಲ್ಲೂ ಪಾದರಸದಂತೆ ಸಕ್ರಿಯರಾಗಿದ್ದರು.
ಆಹಾರ ಪದ್ಧತಿ, ಜೀವನ ಕ್ರಮ, ಪೂಜೆ ಮತ್ತು ಪರಮಜ್ಞಾನಿಗಳಾಗಿದ್ದರೂ ಅದನ್ನೆಲ್ಲೂ ತೋರಿಸದೇ ಎಲೆಮರೆ ಕಾಯಿಯಂತೆ ಸ್ವಾಮೀಜಿ ಬದುಕಿದ್ದರು.