ಕೊರಗ ಕಾಲೋನಿಯ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ: ಲಾಠಿ ಬೀಸಿದ ಪೊಲೀಸರು
ಉಡುಪಿ, ಡಿಸೆಂಬರ್ 29: ಕೊರಗ ಕಾಲೋನಿಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ ಮಾಡಿದ ಕಾರಣಕ್ಕಾಗಿ ಪೊಲೀಸರು ಲಾಠಿ ಚಾರ್ಚ್ ಮಾಡಿದ ಘಟನೆ ಈಗ ತೀವ್ರ ಸ್ವರೂಪವನ್ನು ಪಡೆದಿದೆ.
ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಲಾಠಿ ಚಾರ್ಚ್ ಮಾಡಿದ ಪೊಲೀಸರನ್ನು ಕೋಟ ಠಾಣೆಯಿಂದಲೇ ಅಮಾನತು ಮಾಡಲಾಗಿದೆ. ಘಟನೆ ಬಗ್ಗೆ ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮದುವೆ ಮೊದಲು ನಡೆಯುವ ಮೆಹಂದಿ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಇದೆ. ಅದರಂತೆ ಕೊರಗ ಕಾಲೋನಿಯ ಒಂದು ಮನೆಯಲ್ಲೂ ಡಿಜೆ ಸದ್ದಿನೊಂದಿಗೆ ಸೋಮವಾರ ರಾತ್ರಿ ಮೆಹಂದಿ ಸಂಭ್ರಮ ಮೇಳೈಸಿತ್ತು. ಆದರೆ ಈ ಸಂಭ್ರಮ ನಡೆದಿದ್ದು ಕೇವಲ 11 ಗಂಟೆವರೆಗೆ ಮಾತ್ರ. ಆನಂತರ ಆದದ್ದು ಗಲಾಟೆ, ಬೊಬ್ಬೆ, ಆಕ್ರೋಶ, ಹಲ್ಲೆ...
Koo Appಶೋಷಿತರು ಒಳ್ಳೆ ಬಟ್ಟೆ ಹಾಕಿದರೆ ಸಹಿಸರು, ಶೋಷಿತರು ದುಡಿದು ತಿಂದರೂ ಸಹಿಸರು, ಶೋಷಿತರು ದೇವಾಲಯಕ್ಕೆ ಬಂದರೂ ಸಹಿಸರು, ಶೋಷಿತರ ಏಳಿಗೆಯನ್ನು ಸಹಿಸರು, ಶೋಷಿತರು ಸಂಭ್ರಮಿಸಿದರೂ ಸಹಿಸರು. ಅಶಕ್ತ ಕೊರಗ ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆದಿದ್ದರೂ, ಅಲ್ಲಿ ’ಭಯಂಕರ’ ಹಿಂದೂ ರಕ್ಷಕರಿದ್ದರೂ ಇವರ ನೆರವಿಗೆ ಈವರೆಗೂ ನಿಂತಿಲ್ಲವೇಕೆ? 3/3- ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ) 29 Dec 2021
Koo Appಮೈಕ್ ಬಳಸಿದ ಒಂದೇ ಕಾರಣಕ್ಕೆ ಪೊಲೀಸರು ಕೊರಗ ಕುಟುಂಬವೊಂದರ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ವೃದ್ಧರು, ಮಕ್ಕಳು, ಮಹಿಳೆಯರು, ಮದುಮಗ ಎಂಬುದನ್ನ ನೋಡದೆ ಮನಸೋ ಇಚ್ಚೆ ಥಳಿಸಿದ್ದು ಅಕ್ಷಮ್ಯ ಕೃತ್ಯ. ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ಈ ಘಟನೆ ನಡೆದಿರುವುದು ಈ ದಲಿತ ವಿರೋಧಿ ಬಿಜೆಪಿ ಸರ್ಕಾರದ ದಬ್ಬಾಳಿಕೆ ಧೋರಣೆಗೆ ಹಿಡಿದ ಕೈಗನ್ನಡಿ. 1/3- ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ) 29 Dec 2021
Recommended Video
ಕೊರಗ ಸಮುದಾಯಕ್ಕೆ ಸೇರಿದ ಮೆಹಂದಿ ಕಾರ್ಯಕ್ರಮ
ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕೊರಗ ಸಮುದಾಯಕ್ಕೆ ಸೇರಿದ ರಾಜೇಶ್ ಎಂಬುವವರ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಮೆಹಂದಿಗೆ ಬಂದವರು, ಡಿಜೆ ಹಾಕಿ ಕುಣಿಯುತ್ತಿದ್ದರು. ಈ ವೇಳೆ ಡಿಜೆ ಸದ್ದು ಜೋರಾಗಿ ಪ್ಲೇ ಮಾಡಿದನ್ನೇ ನೆಪವಾಗಿ ಇಟ್ಟುಕೊಂಡು, ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ ಕೋಟ ಪೊಲೀಸರು ಮದುಮಗ ರಾಜೇಶ್ ಸೇರಿದಂತೆ ಎಲ್ಲರಿಗೂ ಹಲ್ಲೆ ನಡೆಸಿದ್ದಾರೆ.
ಮಹಿಳೆಯರು ಬೊಬ್ಬೆ ಹಾಕಿದರೂ ಹಲ್ಲೆ ನಡೆಸಿದ ಪೊಲೀಸರ ನಡೆಯನ್ನು ಕೊರಗ ಸಮುದಾಯದವರು ಖಂಡಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹುಟ್ಟೂರಿನಲ್ಲೇ ಈ ರೀತಿ ಆದರೆ ನಮಗೆ ರಕ್ಷಣೆ ಎಲ್ಲಿದೆ? ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ದಲಿತ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಎಸ್ಐ ಸಂತೋಷ್ ನಡೆಗೆ ಆಕ್ರೋಶ
ಇನ್ನು ಘಟನೆ ನಡೆದ ಸ್ಥಳದಲ್ಲಿ ಕೊರಗ ಸಮುದಾಯದವರು ಸೇರಿದಂತೆ ನೂರಾರು ಮಂದಿ ಸೇರಿ, ಕೋಟ ಎಸ್ಐ ಸಂತೋಷ್ ನಡೆಯನ್ನು ಖಂಡಿಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಭೇಟಿ ಸೂಕ್ತ ತನಿಖೆ ಕ್ರಮ ಕೈಗೊಳುವ ಭರವಸೆ ನೀಡಿದ್ದಾರೆ. ಇನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ವರದಿ ಬಂದು ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿದೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಉಡುಪಿ ಎಸ್ಪಿ ವಿಷ್ಣುವರ್ಧನ್, ಡಿಜೆ ಸದ್ದು ಜೋರಾಗಿ ಹಾಕಿದ ಹಿನ್ನಲೆಯಲ್ಲಿ ಸ್ಥಳೀಯರು ದೂರು ನೀಡಿದ್ದರು. ಈ ವೇಳೆ ಪೊಲೀಸರು ಸ್ಥಳಕ್ಕೆ ಹೋಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಸ್ಥಳದಿಂದ ತೆರಳಿದ ಬಳಿಕ ಮತ್ತೆ ಜೋರಾಗಿ ಡಿಜೆ ಹಾಕಿದ್ದಾರೆ. ಸ್ಥಳೀಯರು 112ಗೆ ಕರೆಮಾಡಿ ದೂರು ನೀಡಿದ್ದಾರೆ. ಲಾಠಿ ಚಾರ್ಚ್ ಆದ ಬಗ್ಗೆ ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡುತ್ತೇವೆ.
ಪೊಲೀಸರ ತಪ್ಪುಗಳಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ
ವಿಚಾರಣೆ ಮುಗಿಯುವ ತನಕ ಕೋಟಾ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಐವರು ಸಿಬ್ಬಂದಿಗೆ ಕೋಟಾ ಠಾಣೆಗೆ ಕರ್ತವ್ಯಕ್ಕೆ ತೆರಳದಂತೇ ಸೂಚಿಸಲಾಗಿದೆ. ವಿಚಾರಣೆ ಮುಗಿಯುವ ವರೆಗೆ ಎಸ್ಪಿ ಠಾಣೆಯಲ್ಲಿ ಇರುವಂತೆ ಆದೇಶ ಮಾಡಲಾಗಿದೆ. ಪೊಲೀಸರ ತಪ್ಪುಗಳಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಉಡುಪಿ ಎಸ್ಪಿ ಭರವಸೆ ನೀಡಿದ್ದಾರೆ.
ಘಟನೆಯಲ್ಲಿ ಮದುಮಗ ರಾಜೇಶ್, ಸ್ಥಳೀಯರಾದ ಗಣೇಶ್ ಕೊರಗ, ಲಕ್ಷ್ಮೀ, ಸುಂದರಿ, ಮದುಮಗನ ತಾಯಿ ಗಿರಿಜಾ, ಪ್ರವೀಣ್ ಶೇಖರ್ ಎಂಬುವವರಿಗೆ ಗಾಯಗಳಾಗಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೊರಗ ಸಮುದಾಯದವರ ಮೇಲೆ ಪೊಲೀಸರ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಘಟನೆ ಸಂಬಂಧ ಐಜಿ, ಎಸ್ಪಿಯವರನ್ನು ಸಂಪರ್ಕಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಅಂತಾ ಹೇಳಿದ್ದಾರೆ.
ಶಿಸ್ತುಕ್ರಮ ಜರುಗಿಸುವಂತೆ ಸಚಿವ ಪೂಜಾರಿ ಸೂಚನೆ
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಕೋಟ ಗ್ರಾಮದಲ್ಲಿ ಕೊರಗ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮದುವೆ ಸಮಾರಂಭಕ್ಕೆ ನುಗ್ಗಿದ ಪೊಲೀಸರು ಮದುಮಗನ ಸಹಿತ ಕೊರಗ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು.
ಘಟನೆ ಕುರಿತು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಹಾಗೂ ಪಶ್ಚಿಮ ವಲಯ ಐಜಿಪಿಯೊಂದಿಗೆ ಸಚಿವರು ಚರ್ಚಿಸಿದರು. ಘಟನೆಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಜರುಗಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಘಟನಾ ಸ್ಥಳಕ್ಕೆ ಬುಧವಾರ (ಡಿ.29) ಸಚಿವರು ಭೇಟಿ ನೀಡಲಿದ್ದಾರೆ.