ಶೀರೂರು ಶ್ರೀಗಳ ಸಾವಿನ ಹಿಂದೆ ಮಹಿಳೆಯ ನೆರಳು?: ತನಿಖೆ ಚುರುಕು
ಉಡುಪಿ, ಜುಲೈ 21: ಶೀರೂರು ಮಠದ ಯತಿಗಳಾದ ಲಕ್ಷ್ಮೀವರ ತೀರ್ಥ ಶ್ರೀಗಳ ಅಸಹಜ ಸಾವಿನ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದ್ದು, ಈ ಸಂಬಂಧ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀಗಳಿಗಾಗಿ ಫಲಾಹಾರ ತರುತ್ತಿದ್ದ ಬ್ರಹ್ಮಾವರದ ಮಹಿಳೆಯೊಬ್ಬರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಮಹಿಳೆಯು ಪ್ರತಿದಿನ ಸ್ವಾಮೀಜಿಗಳಿಗಾಗಿ ಫಲಾಹಾರಗಳನ್ನು ತರುತ್ತಿದ್ದರು ಎಂದು ಮಠದ ಮೂಲಗಳು ಪೊಲೀಸರಿಗೆ ತಿಳಿಸಿವೆ.
ಕಾರು ದೂರ ನಿಲ್ಲಿಸಿ ಶೀರೂರು ಶ್ರೀಗಳಿಗೆ ಊಟ ತರುತ್ತಿದ್ದ ಮಹಿಳೆ ಯಾರು?
ನಿನ್ನೆಯಿಂದಲೂ ಆ ಮಹಿಳೆಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದು, ಏನೆಲ್ಲಾ ಮಾಹಿತಿ ಕಲೆ ಹಾಕಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಚಾರಣೆ ಇನ್ನೂ ಮುಂದುವರೆದಿದೆ.
ಶ್ರೀಗಳ ಜತೆ ನಂಟು ಎಂತಹದ್ದು?
ಮಹಿಳೆಗೆ ಶ್ರೀಗಳ ಜೊತೆಗಿರುವ ನಂಟು ಎಂತಹದ್ದು ಹಾಗೂ ಎಷ್ಟು ಸಮಯದಿಂದ ಮಹಿಳೆ ಮಠಕ್ಕೆ ಬರುತ್ತಿದ್ದಾರೆ. ಅಥವಾ ಬೇರೆನಾದರು ಉದ್ದೇಶ ಇತ್ತಾ? ಇದಲ್ಲೆ ಗುಟ್ಟಾಗಿ ಉಳಿದಿವೆ. ಮೂಲಗಳ ಪ್ರಕಾರ ಪ್ರತಿದಿನ ಮಠಕ್ಕೆ ಕಾರಿನಲ್ಲಿ ಬರುತ್ತಿದ್ದ ಆ ಮಹಿಳೆ ಕಾರನ್ನು ದೂರ ನಿಲ್ಲಿಸಿ ಸ್ವಾಮಿಗಳಿಗೆ ಫಲಾಹಾರ ಕೊಟ್ಟು ಕೆಲ ಕಾಲ ಇದ್ದು ಹೋಗುತ್ತಿದ್ದರು ಎನ್ನಲಾಗಿದೆ.
ಶೀರೂರು ಶ್ರೀಗಳ ಸಾವಿನ ತನಿಖೆಗೆ ಏಳು ವಿಶೇಷ ತಂಡ ರಚನೆ
ಅಡುಗೆ ಭಟ್ಟರನ್ನೂ ವಿಚಾರಣೆ
ಮಹಿಳೆಯನ್ನು ಮಾತ್ರವಲ್ಲದೆ ಮಠದಲ್ಲಿ ಅಡುಗೆ ಮಾಡುವ ಭಟ್ಟರನ್ನು ಹಾಗೂ ಶ್ರೀಗಳ ಒಡನಾಡಿಗಳನ್ನು, ವಿಚಾರಣೆಗೆ ಒಳಪಡಿಸಿದ್ದಾರೆ. ಶ್ರೀಗಳ ಸಹೋದರರನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೆ ಮಠದಲ್ಲಿದ್ದ ಶ್ರೀಗಳಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಠದಲ್ಲಿದ್ದರು ಇಬ್ಬರು ಮಹಿಳೆಯರು!
ನಿನ್ನೆ ಪೇಜಾವರ ಹಿರಿಯ ಶ್ರೀಗಳು ಕೂಡ ಮದ್ಯ, ಮಾನಿನಿಯ ಸಹವಾಸದ ಪ್ರಸ್ತಾಪ ಮಾಡಿದ್ದರು. ಶೀರೂರು ಶ್ರೀಗಳು ಸನ್ಯಾಸತ್ವ ಪಾಲುಸುತ್ತಿಲ್ಲ ಹಾಗೂ ಶ್ರೀಗಳ ಮಠದಲ್ಲಿಯೇ ಇಬ್ಬರು ಮಹಿಳೆಯರಿದ್ದರು. ಅವರಿಬ್ಬರ ಜಗಳದಿಂದ ಈ ರೀತಿ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
ಪೇಜಾವರರ ಅನುಮಾನ ನಿಜ
ಪೊಲೀಸರು ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿರುವುದು ಪೇಜಾವರರ ಮಾತಿಗೆ ಪುಷ್ಠಿ ನೀಡುತ್ತಿದ್ದು, ಶ್ರೀಗಳ ಸಾವಿನ ಕುತೂಹಲ ಇನ್ನಷ್ಟು ಹೆಚ್ಚಿಕೊಂಡಿದೆ. ಮಹಿಳೆಯ ದ್ವೇಷದಿಂದಲೇ ಶ್ರೀಗಳು ಸಾವಿಗೆ ಈಡಾದರೇ ಎಂಬ ಅನುಮಾನ ಈಗ ಭಕ್ತರಲ್ಲಿ ಕಾಡುತ್ತಿದೆ.