ಉಡುಪಿಯಲ್ಲಿ ನಟೋರಿಯಸ್ ನಕ್ಸಲರ ವಿಚಾರಣೆ; ಬಿಗಿ ಭದ್ರತೆ
ಉಡುಪಿ, ಮೇ 04; ನಟೋರಿಯಸ್ ಹಿನ್ನಲೆ ಹೊಂದಿ, ನಕ್ಸಲ್ ಚಟುವಟಿಕೆಗಳಲ್ಲಿ ಭಾಗವಹಿಸಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ನಕ್ಸಲರನ್ನು ಉಡುಪಿ ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದಾರೆ. ಶೃಂಗೇರಿ ಮೂಲದ ಬಿ. ಜಿ. ಕೃಷ್ಣಮೂರ್ತಿ, ಚಿಕ್ಕಮಗಳೂರು ಮೂಲದ ಸಾವಿತ್ರಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ಉಡುಪಿ ಜಿಲ್ಲೆಯಲ್ಲಿ ನಡೆದ 12ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು 20 ದಿನಗಳ ಕಾಲ ವಿಚಾರಣೆ ನಡೆಸಲಾಗುತ್ತದೆ.
ಬಿ. ಜಿ. ಕೃಷ್ಣಮೂರ್ತಿ 2005ರಿಂದ ನಕ್ಸಲ್ ನಾಯಕತ್ವ ವಹಿಸಿದ್ದು, 2021 ನಂಬರ್ 9 ರಂದು ಬಂಧನವಾಗಿತ್ತು. ಕೃಷ್ಣಮೂರ್ತಿ ಕೇರಳ-ಕರ್ನಾಟಕ ಗಡಿಭಾಗದ ವಯನಾಡಿನಲ್ಲಿ ಬಂಧನಕ್ಕೊಳಗಾಗಿದ್ದರು, ಇವರ ಮೇಲೆ 53 ಪ್ರಕರಣಗಳು, ಸಾವಿತ್ರಿ ಮೇಲೆ 23 ಪ್ರಕರಣಗಳು ದಾಖಲಾಗಿವೆ.
ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣು!
ಕೇರಳದ ವಯನಾಡಿನ ಕೊಯಿಕ್ಕೋಡ್ನ ಕಬಿನಿ ದಳದ ಮುಖ್ಯಸ್ಥೆಯಾಗಿ ಸಾವಿತ್ರಿ ಗುರುತಿಸಿಕೊಂಡಿದ್ದಳು. ಸದ್ಯ ಕೃಷ್ಣಮೂರ್ತಿ, ಸಾವಿತ್ರಿ ಇರುವ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ವಿಚಾರಣೆ ನಡೆಯಲಿದೆ.
ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಇಳಿಮುಖ
ನಕ್ಸಲರನ್ನು ಇರಿಸುವ ಠಾಣೆಗಳಿಗೆ 120ಕ್ಕೂ ಅಧಿಕ ಪೊಲೀಸರ ಭಧ್ರತೆ ಒದಗಿಸಲಾಗಿದೆ. ನಕ್ಸಲರು ಇರುವ ಠಾಣೆಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲು ಸಾರ್ವಜನಿಕರಿಂದ ದೂರು ಸ್ವೀಕಾರಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಐಜಿ ಮೇಲುಸ್ತುವಾರಿಯಲ್ಲಿ ಇಬ್ಬರು ಉನ್ನತ ಅಧಿಕಾರಿಗಳು ನಕ್ಸಲರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಿಂದೆ ನಕ್ಸಲ್ ಕೃತ್ಯಗಳು ನಡೆದ ಕುದುರೆಮುಖ ತಪ್ಪಲಿನ ಈದು, ಹೆಬ್ರಿ, ಅಜೆಕಾರು, ಕುತ್ಲೂರು ಸೇರಿದಂತೆ ಹಲವು ಭಾಗಗಳಿಗೆ ಈ ನಕ್ಸಲರನ್ನು ಪೊಲೀಸರು ಕರೆದೊಯ್ಯಲಿದ್ದಾರೆ.
ಕೇರಳ ಎಟಿಎಸ್ ತಂಡ ಕಾರ್ಯಾಚರಣೆ: ನಕ್ಸಲ್ ಲೀಡರ್ ಬಿಜಿಕೆ, ಸಾವಿತ್ರಿ ಕೇರಳದಲ್ಲಿ ಬಂಧನ
ಬಂಧಿತ ನಕ್ಸಲರ ಪೈಕಿ ಶೃಂಗೇರಿ ಮೂಲದ ಬಿ. ಜಿ. ಕೃಷ್ಣಮೂರ್ತಿ ಶಿವಮೊಗ್ಗ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದ. ಬಳಿಕ ಎಲ್ ಎಲ್ಬಿ ಶಿಕ್ಷಣ ಪಡೆದಿದ್ದರು. ವಿದ್ಯಾರ್ಥಿ ದೆಸೆಯಲಿ ಎಡಪಂಥೀಯ ಚಿಂತನೆಗಳಿಗೆ ಪ್ರೇರೇಪಿತನಾಗಿ 2000 ನೇ ಇಸವಿಯಲ್ಲಿ ನಡೆದಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ.
2003ರಿಂದ 2005ರವರೆಗೆ ಭೂಗತನಾಗಿ ಕಾರ್ಯ ನಿರ್ವಹಿಸಿದ್ದ ಕೃಷ್ಣಮೂರ್ತಿ 2003ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ ಕೌಂಟರ್ ಆದ ಬಳಿಕ ನಕ್ಸಲ್ ನಾಯಕತ್ವವನ್ನು ವಹಿಸಿಕೊಂಡಿದ್ದ. 2018ರಲ್ಲಿ ತಂದೆ ಸಾವನ್ನಪ್ಪಿದ್ದರೂ ನಕ್ಸಲ್ ಚಟುವಟಿಕೆಯಿಂದ ವಿಮುಖನಾಗದೇ ಕೊನೆಯ ಬಾರಿ ತಂದೆಯ ಮುಖವನ್ನೂ ನೋಡಲು ಮನೆಗೆ ಆಗಮಿಸಿರಲಿಲ್ಲ.
2021ರ ನವೆಂಬರ್ 9ರಂದು ಮೈಸೂರು ಬಳಿ ಕರ್ನಾಟಕ-ಕೇರಳ ಗಡಿಭಾಗದ ವಯನಾಡು ಎಂಬಲ್ಲಿ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಕಾರ್ ನಲ್ಲಿ ಸಂಚಾರ ಮಾಡುತ್ತಿದ್ದಾಗ, ವಯನಾಡು ಅರಣ್ಯ ರಸ್ತೆಯಲ್ಲಿ ಕಾರು ಕೆಟ್ಟಿತ್ತು. ಕೃಷ್ಣಮೂರ್ತಿ ಸಂಚಾರದ ಮಾಹಿತಿ ಅರಿತಿದ್ದ ಕೇರಳ ಎಟಿಎಸ್ ಅಧಿಕಾರಿಗಳು ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಡ್ರಾಪ್ ಕೊಡುವ ಸೋಗಿನಲ್ಲಿ ಕರೆದುಕೊಂಡು ಹೋಗಿ ಬಂಧನ ಮಾಡಿದ್ದರು.
49ರ ಹರೆಯದ ಕೃಷ್ಣಮೂರ್ತಿ ಮೇಲೆ 53 ಪ್ರಕರಣಗಳಿವೆ. 37ರ ಹರೆಯದ ಸಾವಿತ್ರಿ ಚಿಕ್ಕ ಮಗಳೂರು ಜಿಲ್ಲೆಯ ಕಳಸದ ನಿವಾಸಿಯಾಗಿದ್ದು ಈಕೆಯ ಮೇಲೆ 23 ಪ್ರಕರಣ ಗಳಿವೆ. ಈಕೆ ಹೆಬ್ರಿಯ ಕೂಡ್ಲು ನಡ್ಪಾಲುಗ್ರಾಮದ ವಿಕ್ರಂ ಗೌಡ ಆಲಿಯಾಸ್ ಅಭಿಮಾನ್ ಶ್ರೀಕಾಂತ್ನ ಪತ್ನಿ.
ಕುದುರೆಮುಖ ತಪ್ಪಲಿನ ಭಾಗದಲ್ಲಿ ನಕ್ಸಲರು ನೆತ್ತರ ಹೊಳೆಯೇ ಹರಿಸಿದ್ದರು. 2008ರ ಮೇ 15 ರಂದು ಚುನಾವಣೆಯ ದಿನ ಹೆಬ್ರಿಯ ಸೀತಾ ನದಿ ಬಳಿಯ ನಡ್ಪಾಲು ಎಂಬಲ್ಲಿ ನಕ್ಸಲರು ಶಿಕ್ಷಕ ಭೋಜ ಶೆಟ್ಟಿ ಮತ್ತು ಅವರ ಚಿಕ್ಕಮ್ಮನ ಮಗ ಸುರೇಶ್ ಶೆಟ್ಟಿ ಎಂಬುವವರನ್ನು ಹತ್ಯೆ ಮಾಡಿದ್ದರು.
2008ರ ಡಿಸೆಂಬರ್ ನಲ್ಲಿ ಮತ್ತೆ ನೆತ್ತರು ಹರಿಸಿದ ನಕ್ಸಲರು ಕೃಷಿಕ ಕೇಶವ ಎಂಬುವವರ ಹತ್ಯೆ ಮಾಡಿದ್ದರು. 2011ರ ಡಿಸೆಂಬರ್3 ರಂದು ಪೊಲೀಸರಿಗೆ ಮಾಹಿತಿ ನೀಡಿದ ಕೋಪದಲ್ಲಿ ತಿಂಗಳಮಕ್ಕಿ ಮಲೆಕುಡಿಯ ಸದಾಶಿವ ಗೌಡ ಹತ್ಯೆ, ಈದುವಿನ ಕುಟ್ಟಿ ಶೆಟ್ಟಿ ಎಂಬುವವರಿಗೆ ಕೊಲೆ ಬೆದರಿಕೆ, ಪೊಲೀಸರ ಮೇಲೆ ದಾಳಿ, ಪೊಲೀಸ್ ಜೀಪು ಸ್ಫೋಟ ಮುಂತಾದ ಕುಕೃತ್ಯ ಮಾಡಿದ್ದರು. ಈ ಎಲ್ಲಾ ಪ್ರಕರಣಗಳ ಕುರಿತು ವಿಚಾರಣೆ ನಡೆಯಲಿದೆ.
Recommended Video