ಉಡುಪಿಯಲ್ಲಿ ಅಕ್ರಮ ಜಾನುವಾರು ಸಾಗಾಟ; ಪೊಲೀಸರೂ ಶಾಮೀಲು
ಉಡುಪಿ, ಜುಲೈ 18: ಅಕ್ರಮ ಜಾನುವಾರು ಸಾಗಾಟವನ್ನು ತಡೆಯಲೆಂದೇ ಉಡುಪಿಯಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೇ ಕಾರಣಕ್ಕೆ ಈಚೆಗೆ ಅಕ್ರಮ ಸಾಗಾಟ ನಡೆಸಿದ ಹಳೇ ಆರೋಪಿಗಳ ಪರೇಡನ್ನೂ ನಡೆಸುವ ಮೂಲಕ ಪೊಲೀಸರು ಕಟ್ಟೆಚ್ಚರಿಕೆಯನ್ನೂ ಕೊಟ್ಟರು. ಆದರೆ ಅಕ್ರಮವನ್ನು ತಡೆಯಬೇಕಾದ ಪೊಲೀಸರೇ ಈ ಪ್ರಕರಣದಲ್ಲಿ ಕೈಜೋಡಿಸಿರುವುದು ತಿಳಿದುಬಂದಿದೆ.
ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಶಾಮೀಲಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಉಡುಪಿಯಲ್ಲಿ ಅಕ್ರಮ ಗೋಸಾಗಾಟಗಾರರಿಗೆ ಪೊಲೀಸರ ಖಡಕ್ ಎಚ್ಚರಿಕೆ
ಹಣ ಪಡೆದು ಅಕ್ರಮ ಜಾನುವಾರು ಸಾಗಾಟ ಮತ್ತು ಕಳುವಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಪೊಲೀಸರನ್ನು ಉಡುಪಿ ಕೋಟ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವಿನೋದ್ (37) ಹಾಗೂ ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ಸಂತೋಷ್ (37) ಎಂದು ಗುರುತಿಸಲಾಗಿದೆ.
ಇನ್ನೂ ನಾಲ್ವರು ಪೊಲೀಸರು ಈ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ಇದ್ದು, ಈ ಕುರಿತು ತನಿಖೆ ನಡೆಯುತ್ತಿದೆ.
ಕುಂದಾಪುರ ಕಡೆಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದು, ಕೋಟ ಪೊಲೀಸರು ಜುಲೈ12ರಂದು ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ ಗೇಟ್ ಬಳಿ ಶಿವಾನಂದ, ಮಾರುತಿ ನಾರಾಯಣ ನಾಯ್ಕ, ಸೈನುದ್ದೀನ್, ಗಣೇಶನ್, ಹಮೀದ್ ಸಿ.ಎಚ್, ಸಮೀರ್ ಎಂಬುವರನ್ನು ಬಂಧಿಸಿದ್ದರು. ವಾಹನದಲ್ಲಿದ್ದ 13 ಕೋಣ, ಆರು ಎಮ್ಮೆ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಕ್ರಮ ಗೋ ಸಾಗಾಟಗಾರರಿಗೆ ಮಂಗಳೂರು ಪೊಲೀಸರ ವಾರ್ನಿಂಗ್
ವಿಚಾರಣೆ ವೇಳೆ ಬಂಧಿತರು, ಪೊಲೀಸ್ ಸಿಬ್ಬಂದಿ ಹಣ ಪಡೆದು ಅಕ್ರಮ ಜಾನುವಾರು ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದ ವಿಷಯದ ಬಗ್ಗೆ ಬಹಿರಂಗಪಡಿಸಿದ್ದರು. ಈ ಮಾಹಿತಿ ಆಧಾರದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.