ಆದಿತ್ಯ ರಾವ್ ಉಡುಪಿ ಮನೆಯಲ್ಲಿ ಪೊಲೀಸರ ಪರಿಶೀಲನೆ; ಅಕ್ಕಪಕ್ಕದವರು ಹೇಳುವುದೇನು?
ಉಡುಪಿ, ಜನವರಿ 22: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಬಂಧನ ಹಿನ್ನೆಲೆಯಲ್ಲಿ ಉಡುಪಿಯ ಮಣಿಪಾಲದಲ್ಲಿರುವ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮಣಿಪಾಲದ ಅನಂತನಗರದಲ್ಲಿರುವ ಆದಿತ್ಯ ರಾವ್ ಮನೆಯಲ್ಲಿ ಸದ್ಯ ಯಾರೂ ವಾಸ್ತವ್ಯ ಇಲ್ಲ. ಕೆಲವು ದಿನಗಳಿಂದ ಬಾಗಿಲು ಹಾಕಿದೆ. ಸಾಕ್ಷ್ಯ ಸಂಗ್ರಹಕ್ಕೆ ಮಣಿಪಾಲ ಠಾಣೆಯ ಪೊಲೀಸರು ಉಡುಪಿ ಎಸ್ ಪಿ ಸೂಚನೆಯಂತೆ ಆದಿತ್ಯ ಮನೆಯಲ್ಲಿ ದಾಖಲೆಗಳ ಹುಡುಕಾಟ ನಡೆಸಿದ್ದಾರೆ.
"ಈಚೆಗೆ ಆದಿತ್ಯ ರಾವ್ ಕಾಣಿಸಿರಲಿಲ್ಲ"
ಆದಿತ್ಯ ರಾವ್ ನನ್ನು ಇತ್ತೀಚೆಗೆ ಸ್ಥಳೀಯರು ನೋಡಿಯೇ ಇಲ್ಲ. ಆತನನ್ನು ನಾವು ನೋಡಿಯೇ ಕೆಲವು ವರ್ಷಗಳಾಗಿವೆ ಎನ್ನುತ್ತಾರೆ ನೆರೆ ಮನೆಯ ಪೂರ್ಣಿಮಾ ಭೋಜರಾಜ್. ಆದಿತ್ಯನ ತಾಯಿ ನೆರೆಮನೆಯವರ ಜೊತೆ ಬೆರೆಯುತ್ತಿದ್ದರು. ತಂದೆಗೆ ಮಾತು ಕಡಿಮೆ. ಆದಿತ್ಯನನ್ನು ನೋಡಿ ಬಹಳ ವರ್ಷಗಳಾಗಿದ್ದವು. ಈ ಸುದ್ದಿ ಕೇಳಿ ತುಂಬಾ ಆಶ್ಚರ್ಯ ಆಗಿದೆ ಎಂದು ಹೇಳಿದರು ಅವರು.
"ಬೇರೆಯವರ ಜೊತೆ ಅವರು ಬೆರೆಯುತ್ತಿರಲಿಲ್ಲ"
ಆದಿತ್ಯನ ಕುಟುಂಬ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ. ಅವರ ಪಾಡಿಗೆ ಅವರು ಇರುತ್ತಿದ್ದರು. ಆದಿತ್ಯನ ತಂದೆ ತಾಯಿ ಅಪರೂಪಕ್ಕೆ ನೋಡಲು ಸಿಗುತ್ತಿದ್ದರು. ಆದರೆ ಆದಿತ್ಯ ರಾವ್ ನನ್ನು ನಾವು ನೋಡಿ ಬಹಳ ವರ್ಷಗಳೇ ಆಗಿವೆ ಎಂದು ಮಾಹಿತಿ ನೀಡಿದರು ಸ್ಥಳೀಯ ನವಿಆಸಿ ಗಣೇಶ್ ರಾಜ್ ಸರಳಬೆಟ್ಟು.
ಆರೋಪಿ ಆದಿತ್ಯ ಈ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದ?
ಆತ ಮಾಡಿದ್ದು ಸರಿಯಲ್ಲ; ಸಹೋದರ ಅಕ್ಷತ್ ರಾವ್
ಆದಿತ್ಯ ರಾವ್ ತಂದೆ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಸಹೋದರ ಅಕ್ಷತ್ ಮೂಡುಬಿದರೆಯಲ್ಲಿ ಬ್ಯಾಂಕ್ ನೌಕರರಾಗಿದ್ದಾರೆ. ಈ ಬಗ್ಗೆ ಮಾತಾಡಿದ ಅಕ್ಷತ್ ರಾವ್, "ಆತನಿಗೆ ಈ ಹಿಂದೆಯೂ ಬುದ್ಧಿ ಹೇಳಿದ್ದೆವು. ಎರಡು ವರ್ಷಗಳಿಂದ ಅವನಿಗೂ ನಮಗೂ ಸಂಪರ್ಕ ಇಲ್ಲ. ಅವನನ್ನು ಬಿಟ್ಟಿದ್ದೇವೆ. ನಮ್ಮ ತಾಯಿ ಸತ್ತಾಗ ಆತ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ. ಆಗ ಸುದ್ದಿ ಮುಟ್ಟಿಸಿದ್ದೆವು ಅಷ್ಟೆ" ಎಂದಿದ್ದಾರೆ.
ಇಂದು ಬೆಳಿಗ್ಗೆ ಪೊಲೀಸರಿಗೆ ಶರಣಾಗಿದ್ದ ಆದಿತ್ಯ
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಜನವರಿ 21ರಂದು ಸ್ಫೋಟಕ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಶಕ್ಕೆ ಪೊಲೀಸರು ತೀವ್ರ ಕಾರ್ಯಾಚರಣೆ ಶುರು ಮಾಡಿದ್ದರು. ಇಂದು ಬೆಳಿಗ್ಗೆ ಆರೋಪಿ ಆದಿತ್ಯ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ.