ಉಡುಪಿ; ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಪರಾರಿಯಾಗಿದ್ದ ವ್ಯಕ್ತಿ ಬಂಧನ
ಉಡುಪಿ, ಅಕ್ಟೋಬರ್ 27: ಉಡುಪಿಯಲ್ಲಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ತಂದು ಬಿಟ್ಟು, ನಂತರ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಅ.24ರ ಶನಿವಾರ ಸಂಜೆ ಪ್ರಶಾಂತ್ ಕುಂದರ್ ಎಂಬ ಯುವಕ ಆಟೋದಲ್ಲಿ ಖಾಸಗಿ ಆಸ್ಪತ್ರೆಗೆ ರಕ್ಷಿತಾ ನಾಯಕ್ ಎಂಬ ಯುವತಿಯನ್ನು ಕರೆತಂದಿದ್ದ. ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ರಕ್ಷಿತಾ ಮೃತಪಟ್ಟಿದ್ದಳು. ಈ ವಿಷಯವನ್ನು ಪ್ರಶಾಂತ್ ಆಕೆಯ ಮನೆಯವರಿಗೆ ತಿಳಿಸಿ, ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ರಕ್ಷಿತಾ ನಾಯಕ್, ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕೇಹಳ್ಳಿ ಗ್ರಾಮದ ದ್ವಿತೀಯ ವರ್ಷದ ಬಿಕಾಂ ಪದವಿ ವಿದ್ಯಾರ್ಥಿನಿ. ಕೊಲ್ಲೂರು ಬಳಿಯ ಜಡ್ಕಲ್ ಮೂಲದ ಪ್ರಶಾಂತ್ ಕುಂದರ್ ಆಕೆಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತಂದು ಬಳಿಕ ನಾಪತ್ತೆಯಾಗಿದ್ದ.
ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕ ಎಸ್ಕೇಪ್: ಯುವತಿಯ ನಿಗೂಢ ಸಾವು
ನಂತರ ಯುವತಿ ಮನೆಯವರು, ತಮ್ಮ ಮಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ನಿನ್ನೆ, ಅ.27ರಂದು ವಶಕ್ಕೆ ಪಡೆದಿದ್ದಾರೆ. ರಕ್ಷಿತಾ ಮರಣೋತ್ತರ ಪರೀಕ್ಷೆಯನ್ನು ಭಾನುವಾರ ರಾತ್ರಿ ನಡೆಸಲಾಗಿದ್ದು, ರಕ್ಷಿತಾಳ ದೇಹದಲ್ಲಿ ಆಲ್ಕೋಹಾಲ್ ಅಂಶ ಹಾಗೂ ಆಕೆಯ ಕುತ್ತಿಗೆ ರಕ್ತ ಹೆಪ್ಪುಗೆಟ್ಟಿದ ಗುರುತುಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
Recommended Video
ಪ್ರಶಾಂತ್ ಕುಂದರ್ ಗೆ ಈಗಾಗಲೇ ಮದುವೆಯಾಗಿತ್ತು. ರಕ್ಷಿತಾ, ಪ್ರಶಾಂತ್ ನಡುವಿನ ಸಂಬಂಧ ಏನು? ಯುವತಿಯ ಸಾವಿಗೆ ಕಾರಣವೇನು ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.