ಫಾದರ್ ಆತ್ಮಹತ್ಯೆಗೆ ಕಾರಣವಾಯಿತೇ ಆ ಮಹಿಳೆಯ ಮೊಬೈಲ್ ಸಂದೇಶಗಳು?
ಉಡುಪಿ, ಫೆಬ್ರವರಿ 27: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುತೂಹಲ ಕೇಂದ್ರವಾಗಿದ್ದ ಶಿರ್ವ ಚರ್ಚ್ ಸಹಾಯಕ ಫಾದರ್ ಮಹೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೂವರೆ ತಿಂಗಳ ನಂತರ ಪೊಲೀಸರು ಒಬ್ಬರನ್ನು ಬಂಧಿಸಿದ್ದಾರೆ. ಧರ್ಮಗುರು ಫಾ.ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
Recommended Video
ಫಾ.ಮಹೇಶ್, ಡೇವಿಡ್ ಡಿಸೋಜಾನ ಪತ್ನಿ ಜೊತೆ ನಿರಂತರ ಫೋನ್ ಸಂಭಾಷಣೆ, ಮೊಬೈಲ್ ಚಾಟಿಂಗ್ ನಡೆಸುತ್ತಿದ್ದನ್ನು ಪತ್ನಿಯ ಮೊಬೈಲ್ ನೋಡಿ ತಿಳಿದ ಡೇವಿಡ್ ನೇರವಾಗಿ ಶಿರ್ವ ಚರ್ಚ್ ಗೆ ಹೋಗಿ ಧರ್ಮಗುರುಗಳನ್ನು ಬೆದರಿಸಿದ್ದ ಎನ್ನಲಾಗಿದೆ. ತನಿಖಾ ತಂಡಕ್ಕೆ ಫಾದರ್ ಮೊಬೈಲ್ ಫೋನಿನ ಫೋರೆನ್ಸಿಕ್ ವರದಿಯು ಬಂದಿದ್ದು, ಪ್ರಕರಣಕ್ಕೆ ಹೆಚ್ಚಿನ ಸಾಕ್ಷ್ಯ ಲಭಿಸಿದೆ. ಫೋರೆನ್ಸಿಕ್ ವರದಿಯ ಪ್ರಕಾರ ಫಾದರ್ ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ನಿಮಿಷಗಳ ಮೊದಲು ಪ್ರಿಯಾ ಎಂಬ ಮಹಿಳೆಗೆ ನಿರಂತರ ಮೊಬೈಲ್ ಸಂದೇಶಗಳನ್ನು ಕಳುಹಿಸಿದ್ದರು ಹಾಗೂ ಆಕೆಯಿಂದ ಸಂದೇಶಗಳನ್ನು ಸ್ವೀಕರಿಸಿದ್ದರೆಂದು ಧೃಡಪಟ್ಟಿದೆ.
ಶಿರ್ವ ಫಾದರ್ ಮಹೇಶ್ ಡಿಸೋಜಾದ್ದು ಆತ್ಮಹತ್ಯೆಯೇ? ಸಂಚಿನ ಕೊಲೆಯೇ?
ಈ ಸಂಬಂಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ತನಿಖಾಧಿಕಾರಿ ಕಾಪು ಸಿಪಿಐ ಮಹೇಶ ಪ್ರಸಾದ್, ಡೇವಿಡ್ ಡಿಸೋಜಾನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯ ಆರೋಪಿ ಡೇವಿಡ್ ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿಂದೆ ಅನೇಕ ಜನರಿಗೆ ಡೇವಿಡ್ ಮೇಲೆ ಅನುಮಾನವಿತ್ತು. ಆದರೆ ಫಾದರ್ ಮೃತಪಟ್ಟ ಕೆಲವು ಸಮಯಗಳ ನಂತರ ಪೊಲೀಸ್ ಇಲಾಖೆ ಧರ್ಮ ಗುರುಗಳ ಸಾವಿಗೆ ನೇರ ಕಾರಣವಾದ ಆರೋಪಿ ಡೇವಿಡ್ ನನ್ನು ಬಂಧಿಸಿದೆ. ಧರ್ಮ ಗುರುಗಳ ನಿಗೂಢ ಸಾವಿನ ವಿಚಾರದಲ್ಲಿ ಆರೋಪಿಗಳನ್ನು ಪತ್ತೆ ಮಾಡಬೇಕೆಂದು ಪ್ರತಿಭಟನೆಗಳು ಕೂಡ ನಡೆದಿದ್ದವು. ಇದೀಗ ಫಾದರ್ ಮಹೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೊದಲ ಬಂಧನವಾಗಿದೆ.