ಅತ್ತೂರು ಲಾರೆನ್ಸ್ ಕ್ಷೇತ್ರದ ಟವರ್ ಸಮಸ್ಯೆಗೆ ಮೋದಿ ಸಲ್ಯೂಷನ್!
ಕಾರ್ಕಳದ ಅತ್ತೂರಿನ ಲಾರೆನ್ಸ್ ಪುಣ್ಯಕ್ಷೇತ್ರದಲ್ಲಿ ಮೊಬೈಲ್ ಟವರ್ ಸಮಸ್ಯೆಯಿದೆ ಎಂದು ಪತ್ರ ಬರೆದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯಕ್ಕೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ
ಕಾರ್ಕಳ, ಡಿಸೆಂಬರ್ 3: ಎಲ್ಲಿಯ ಕಾರ್ಕಳ, ಎಲ್ಲಿಯ ನರೇಂದ್ರ ಮೋದಿ? ಆದರೂ ಇದು ಯಾರೂ ಊಹಿಸಲಾಗದ ವಿಚಾರ. ಇಲ್ಲಿನ ಅತ್ತೂರು ಲಾರೆನ್ಸ್ ಪುಣ್ಯಕ್ಷೇತ್ರದಲ್ಲಿ ಮೊಬೈಲ್ ಟವರ್ ಸಮಸ್ಯೆಯಾಗಿತ್ತು. ಯಾರಿಗೂ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಸ್ಪಂದಿಸಿದ್ದರಿಂದ ತಾತ್ಕಾಲಿಕ ಟವರ್ ಸಿದ್ಧವಾಗಿದೆ.
ಅಷ್ಟೇ ಅಲ್ಲ, ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪುಗೊಳ್ಳುತ್ತಿದೆ. ಇತ್ತೀಚೆಗೆ ಪೋಪ್ ಫ್ರಾನ್ಸಿಸ್ ಅವರಿಂದ ಮೈನರ್ ಬೆಸಿಲಿಕಾ ಎಂಬ ಘೋಷಣೆಯೊಂದಿಗೆ ಮೇಲ್ದರ್ಜೆಗೇರಿದ ಅತ್ತೂರು ಪುಣ್ಯಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮೊಬೈಲ್ ಸಂಪರ್ಕ ಸಮಸ್ಯೆಯಾಗಿತ್ತು. ಈ ಬಗ್ಗೆ ಕ್ಷೇತ್ರದ ಧರ್ಮಗುರು ಜಾರ್ಜ್ ಡಿ'ಸೋಜಾ ಭೇಟಿ ಮಾಡದ ಜನಪ್ರತಿನಿಧಿಗಳಿಲ್ಲ.[ಕಾರ್ಕಳದ ಬೈಲೂರಿನಲ್ಲಿ 71 ಲಕ್ಷ ರೂ ಸಾಗಿಸುತಿದ್ದವರ ಬಂಧನ]
ಕ್ಷೇತ್ರದ ಶಾಸಕರಿಂದ ಹಿಡಿದು ಕೇಂದ್ರ ಸರಕಾರದ ಮಂತ್ರಿಗಳ ವರೆಗೂ ಹಲವಾರು ಬಾರಿ ಮನವಿ ನೀಡುತ್ತಾ ಬಂದಿದ್ದರು. ಆದರೆ ಅವರ ಮನವಿಗೆ ಮಾತ್ರ ಸಿಕ್ಕ ಸ್ಪಂದನೆ ಶೂನ್ಯ. 2016 ಆಗಸ್ಟ್ 21 ರಂದು ಕೇಂದ್ರದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರಿಗೆ ಪತ್ರ ಬರೆದೂ ಸ್ಪಂದನೆ ಲಭಿಸಿರಲಿಲ್ಲ.[ಕಾರ್ಕಳದ ತಾಯಿ-ಮಗ ಕಾರು ಅಪಘಾತದಲ್ಲಿ ಸಾವು]
ಕೊನೆ ಪ್ರಯತ್ನ ಎಂಬಂತೆ ಜಾರ್ಜ್ ಅವರು 2016 ಸೆಪ್ಟೆಂಬರ್ 2ರಂದು ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರು. ಜಾರ್ಜ್ ಅವರ ಪತ್ರಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ, ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಚಿವಾಲಯದ ಅಧಿಕಾರಿಗಳಿಗೆ ಆದೇಶ ನೀಡಿದೆ. ಆ ನಂತರ ಕಾರ್ಯಪ್ರವೃತ್ತವಾದ ಸಚಿವಾಲಯ ಕ್ರಮ ಕೈಗೊಂಡಿರುವ ಕುರಿತು ಏಳು ದಿನಗಳ ಒಳಗಾಗಿ ಧರ್ಮಗುರುಗಳಿಗೆ ಪತ್ರ ಬರೆದಿದೆ.
ಬಿಎಸ್ ಎನ್ ಎಲ್ ಮಂಗಳೂರು ವಿಭಾಗದ ಮುಖ್ಯಸ್ಥ ರವಿ ಅವರು ಧರ್ಮಗುರುಗಳಿಗೆ ಪತ್ರ ಬರೆದಿದ್ದು, ಸಮಸ್ಯೆ ತ್ವರಿತ ಗತಿಯಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ತಾತ್ಕಾಲಿಕ ಮೊಬೈಲ್ ಟವರ್ ನಿರ್ಮಿಸಿದ್ದಾರೆ. ಅಲ್ಲದೆ ಶಾಶ್ವತ ಮೊಬೈಲ್ ಟವರ್ ನಿರ್ಮಾಣಕ್ಕೆ ರೂಪುರೇಷೆ ಸಿದ್ದಪಡಿಸಿದ್ದು, ಕೆಟ್ಟು ಹೋಗಿದ್ದ ಎರಡು ಸ್ಥಿರ ದೂರವಾಣಿಗಳ ದುರಸ್ತಿ ಕೂಡ ಮಾಡಿ, ಒಎಫ್ ಸಿ ಕೇಬಲ್ ಸಂಪರ್ಕ ಕಲ್ಪಿಸಲಾಗಿದೆ.[ಅತ್ತುರು ದೇವಾಲಯದಲ್ಲಿ ರಾಕೇಶ್ ಸಿದ್ದರಾಮಯ್ಯಗೆ ಶ್ರದ್ಧಾಂಜಲಿ]
ಕೊನೆಯ ಪ್ರಯತ್ನ ಎಂಬಂತೆ ಪ್ರಧಾನಿಯವರಿಗೆ ನೇರ ಪತ್ರ ಬರೆದಿದ್ದೆ. ಅದಕ್ಕೆ ಪ್ರಧಾನಿ ಕಚೇರಿಯಿಂದ ತುರ್ತಾಗಿ ಸ್ಪಂದನೆ ಲಭಿಸಿದೆ. ಪ್ರಧಾನಿ ಕಾರ್ಯಾಲಯದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ದೇಶದ ಪ್ರಗತಿ ಸಾಧ್ಯ ಎನ್ನುತ್ತಾರೆ ಜಾರ್ಜ್ ಡಿಸೋಜ.