ಮಧ್ವಾಚಾರ್ಯ @ 700: ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಹೇಳಿದ್ದು
ಜಗದ್ಗುರು ಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಚಾರ್ಯ ಮಧ್ವರು ನಾಡಿಗೆ ನೀಡಿದ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.
ನವದೆಹಲಿ, ಉಡುಪಿ ಫೆ 5: ಉಡುಪಿಯಲ್ಲಿ ನಡೆಯುತ್ತಿರುವ ಜಗದ್ಗುರು ಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಚಾರ್ಯ ಮಧ್ವರು ನಾಡಿಗೆ ನೀಡಿದ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.
ಕಾರ್ಯನಿಮಿತ್ತ ಖುದ್ದು ಉಡುಪಿಗೆ ಬರಲು ಆಗದೇ ಇದ್ದದ್ದಕ್ಕೆ ಕ್ಷಮೆಯಾಚಿಸುತ್ತಾ ಪ್ರಧಾನಿ ಮೋದಿ, ಮಧ್ವಾಚಾರ್ಯರ ಜೊತೆ ವಿವಿಧ ಸಂತ, ದಾರ್ಶನಿಕರು ದೇಶಕ್ಕೆ ನೀಡಿದ ಕೊಡುಗೆಯನ್ನು ಮನಸಾರೆ ಹೊಗಳಿದ್ದಾರೆ.
ಎಂಟನೇ ವಯಸ್ಸಿನಿಂದ ಎಂಬತ್ತರ ಈ ವಯಸ್ಸಿನಲ್ಲೂ ದೇಶದೆಲ್ಲಡೆ ಸುತ್ತಿ ಧರ್ಮ ಪ್ರಚಾರ, ಜಾತಿ ಅಸ್ಪಸೃತೆ, ಮೂಢನಂಬಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಪೇಜಾವರ ಶ್ರೀಗಳಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. (ಮೋದಿ ಭಾಷಣ ಲಿಂಕ್ ಇಲ್ಲಿ ಕ್ಲಿಕ್ಕಿಸಿ)
ಆಚಾರ್ಯ ಮಧ್ವರು ಭಕ್ತಿ, ಪ್ರೀತಿಯ ಮೂಲಕ ಹೇಗೆ ಮುಕ್ತಿಯನ್ನು ಪಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಪವಿತ್ರ ಭೂಮಿಗೆ ಸಂತರು ನೀಡಿದ ಕೊಡುಗೆ ಅಪಾರ, ಕರ್ನಾಟಕ ಒಂದು ಪುಣ್ಯಭೂಮಿ, ಈ ಭೂಮಿಗೆ ನನ್ನ ಭಕ್ತಿಪೂರ್ವ ನಮನಗಳು ಎಂದು ಮೋದಿ ಹೇಳಿದರು.
ಆಲಿಗಢದಿಂದ ಬಂದು ವಿಡಿಯೋ ಕಾನ್ಪರೆನ್ಸ್ ಮೂಲಕ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಆಚಾರ್ಯ ಮಧ್ವರ ಬಗೆ ಪೇಜಾವರ ಶ್ರೀಗಳು ವಿವರವಾಗಿ ಹೇಳಿದ್ದಾರೆ. ಖುದ್ದು ಹಾಜರು ಆಗಲು ಆಗದೇ ಇದ್ದುದ್ದಕ್ಕೆ ನನಗೂ ನೋವಿದೆ ಎಂದು ಮೋದಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಉಡುಪಿಯ ಕೃಷ್ಣನ ಮೂರ್ತಿ ಮಥುರಾದಿಂದ ಬಂದಿದ್ದು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಉಡುಪಿಗೆ ಈ ಹಿಂದೆ ಕೂಡಾ ನಾನು ಬಂದಿದ್ದೆ. ನನ್ನ ಮತ್ತು ಉಡುಪಿಯ ಸಂಬಂಧ ನಾಲ್ಕು ದಶಕಗಳ ಹಿಂದಿದ್ದು.
ಉಡುಪಿ ಮುನ್ಸಿಪಲ್ ಕಾರ್ಪೋರೇಶನ್ ನಲ್ಲಿ 1968ರಿಂದ ನಲವತ್ತು ವರ್ಷಗಳವರೆಗೆ ಬಿಜೆಪಿ/ಜನಸಂಘ ಅಧಿಕಾರದಲ್ಲಿತ್ತು. ಉಡುಪಿ ಪ್ರಥಮ ನಗರ, ಇಲ್ಲಿ ಒಳಚರಂಡಿ/ಶೌಚಾಲಯ ವ್ಯವಸ್ಥೆಗೆ ಮಹಿಳೆಯರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಲಾಯಿತು ಎಂದು ಪ್ರಧಾನಿ ತನ್ನ ಹಳೇ ನೆನಪನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡಿದ್ದಾರೆ.
ಹೋಮ ಹವನಗಳಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ನಿಲ್ಲಿಸುವ ವಿಚಾರದಲ್ಲಿ ಆಚಾರ್ಯ ಮಧ್ವರ ಕೊಡುಗೆ ಅಪಾರ. ಭಾಷಣದ ವೇಳೆ, ಮಧ್ವಾಚಾರ್ಯ, ಚೈತನ್ಯ ಮಹಾಪ್ರಭು, ತುಳಸೀದಾಸ, ಗುರುನಾನಕ್, ಶಂಕರಾಚಾರ್ಯ ಮುಂತಾದ ದಾರ್ಶನಿಕರನ್ನು ಮೋದಿ ಸ್ಮರಿಸಿಕೊಂಡಿದ್ದಾರೆ.
ಆಚಾರ್ಯ ಮಧ್ವರ ಪಾದಾರವಿಂದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಉಡುಪಿ ಪುಣ್ಯಭೂಮಿಗೆ ಮತ್ತು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಸ್ವಾಮೀಜಿಗಳಿಗೂ ಮತ್ತು ಭಕ್ತರಿಗೂ ನನ್ನ ಪ್ರಣಾಮಗಳು, ಪೇಜಾವರ ಶ್ರೀಗಳಿಗೂ ನನ್ನ ವಿಶೇಷ ನಮಸ್ಕಾರಗಳ, ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಮೋದಿ ಹೇಳಿ, ಭಾಷಣ ಮುಗಿಸಿದ್ದಾರೆ.