ಮೊಬೈಲ್ ಚಾಟಿಂಗ್ ಪ್ರಶ್ನಿಸಿದ ಪತ್ನಿಗೆ ಬ್ಯಾಟ್ ನಿಂದ ಬಡಿದ ಎಎಸ್ ಐ
ಉಡುಪಿ, ಡಿಸೆಂಬರ್ 9: ಪೊಲೀಸ್ ಅಧಿಕಾರಿ ಪತ್ನಿಯ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಉಡುಪಿ ಎಸ್ಪಿ ಕಚೇರಿಯಲ್ಲಿರುವ ನಿಸ್ತಂತು ವಿಭಾಗದ ಪೊಲೀಸ್ ಸಹಾಯಕ ಉಪನಿರೀಕ್ಷಕ ಕೆ.ಎಸ್.ಹರಿಶ್ಚಂದ್ರ ಎಂಬುವರು ತನ್ನ ಪತ್ನಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು, ಗಾಯಗೊಳಿಸಿದ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವರನ್ನು ಮಣಿಪಾಲ ಅನಂತ ನಗರದಲ್ಲಿರುವ ಪೊಲೀಸ್ ವಸತಿಗೃಹದ ನಿವಾಸಿ ಎ.ಬಿ.ಸುಧಾ (40) ಎಂದು ಗುರುತಿಸಲಾಗಿದೆ. ಎ.ಬಿ.ಸುಧಾ ಅವರು ಕೆ.ಎಸ್.ಹರಿಶ್ಚಂದ್ರರನ್ನು 2001ರಲ್ಲಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ದಿನದಿಂದ ಹರಿಶ್ಚಂದ್ರ ಸಣ್ಣಪುಟ್ಟ ವಿಚಾರಗಳಿಗೆ ಪತ್ನಿ ಜೊತೆ ಜಗಳ ಮಾಡಿ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.
ಬೆಂಗಳೂರಲ್ಲಿ ಪೊಲೀಸರ ಪತ್ನಿಗೆ ಹಾಡುಹಗಲೇ ಗನ್ ತೋರಿಸಿದ ಭೂಪ!
ಸುಧಾ ಡಿಸೆಂಬರ್ 7ರಂದು ಬೆಳಗ್ಗೆ ಪತಿಯ ಮೊಬೈಲ್ ನೋಡಿ, ನೀವು ಯಾಕೆ ಬೇರೆ ಹೆಂಗಸರೊಂದಿಗೆ ಚಾಟಿಂಗ್ ಮಾಡಿದ್ದು ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಹರಿಶ್ಚಂದ್ರ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟ್ ನಿಂದ ಸುಧಾ ತಲೆಗೆ ಹೊಡೆದು ಗಾಯಗೊಳಿಸಿ, ಕೈಗೆ- ಕಾಲಿಗೆ ಬ್ಯಾಟ್ ನಿಂದ ಹೊಡೆದು ಅವಾಚ್ಯವಾಗಿ ನಿಂದಿಸಿ, ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಹಿಂದೆ ಕೂಡ ಗಂಡ- ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು. ಮೊದಲು ಹರಿಶ್ಚಂದ್ರ ಮಲ್ಪೆಯ ಕರಾವಳಿ ಕಾವಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹರಿಶ್ಚಂದ್ರ ಅವರ ಮೇಲೆ ಯಾವಾಗಲೂ ಪತ್ನಿಗೆ ಅನುಮಾನ ಇತ್ತು ಎಂದು ದೂರಲಾಗಿದೆ. ಅದೇ ವಿಚಾರದಲ್ಲಿ ಜಗಳ ನಡೆದು, ಈ ಹಿಂದೆ ದೂರು ದಾಖಲಾಗಿತ್ತು. ಆ ನಂತರ ಕರವಾಳಿ ಕಾವಲು ಪಡೆಯ ಹಿರಿಯ ಅಧಿಕಾರಿಗಳು ಗಂಡ- ಹೆಂಡತಿಯನ್ನು ಕರೆಸಿ, ರಾಜಿ- ಸಂಧಾನ ಮಾಡಿಸಿದ್ದರು.