ಉಡುಪಿಯಲ್ಲಿ ಮದ್ಯ ಸಿಗದೆ ಯುವಕ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಉಡುಪಿ, ಏಪ್ರಿಲ್ 04: ಉಡುಪಿಯಲ್ಲಿ ಮದ್ಯ ಸಿಗುತ್ತಿಲ್ಲ ಎಂದು ಈಗಾಗಲೇ ಎಂಟು ಮಂದಿ ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬನನ್ನು ರಕ್ಷಣೆ ಮಾಡಲಾಗಿತ್ತು. ಇದೀಗ ಮದ್ಯ ಸಿಗದೇ ವ್ಯಕ್ತಿಯೊಬ್ಬ ಅಸ್ವಸ್ಥನಾಗಿ ರಸ್ತೆ ಬದಿ ಬಿದ್ದಿರುವ ಪ್ರಕರಣ ನಡೆದಿದೆ.
ಕೊರೊನಾಕ್ಕಿಂತ ಕುಡಿಯೋದಕ್ಕೆ ಹೋಗ್ತಿದೆ ಪ್ರಾಣ: ಉಡುಪಿ ಯಾಕೆ ಫಸ್ಟ್?
ಅಸ್ವಸ್ಥಗೊಂಡಿದ್ದಾತ ಉಡುಪಿಯ ಕುಕ್ಕಿಕಟ್ಟೆ ನಿವಾಸಿ ಎಂಬುದು ತಿಳಿದುಬಂದಿದೆ. ಮದ್ಯ ಸಿಗದ ಕಾರಣ ಕೈಗೆ ಸಿಕ್ಕಿದ ಮಾತ್ರೆಗಳನ್ನೆಲ್ಲ ನುಂಗಿದ್ದ ಈತ ತೀವ್ರವಾಗಿ ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ. ಈ ಯುವಕ ಬಿದ್ದಿರುವುದನ್ನು ನೋಡಿ ಕೊರೊನಾ ಸೋಂಕಿತ ಎಂದು ಭಾವಿಸಿ ಆತನನ್ನು ಮುಟ್ಟಲು ಸಾರ್ವಜನಿಕರು ಹೆದರಿದ್ದಾರೆ.
ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಯುವಕನನ್ನು ರಕ್ಷಣೆ ಮಾಡಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹೋಟೆಲುಗಳಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಈತನಿಗೆ ವಿಪರೀತ ಕುಡಿತದ ಚಟವಿತ್ತು. ಕಳೆದ 12 ದಿನದಿಂದ ಮದ್ಯ ಸಿಗದೆ ಹುಚ್ಚನಂತೆ ವರ್ತಿಸುತ್ತಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.