ಲಾಕ್ ಡೌನ್ ಆದರೂ ಉಡುಪಿಯಲ್ಲಿ ಮೀನಿಗಾಗಿ ಮುತ್ತಿಕೊಂಡರು ಜನ
ಉಡುಪಿ, ಮಾರ್ಚ್ 24: ಕೃಷ್ಣನಗರಿ ಉಡುಪಿಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿವೆ. ಬಸ್, ಆಟೋ ಕ್ಯಾಬ್ ಸಹಿತ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.
ನಿನ್ನೆ ಸಂಜೆ ದಿನಬಳಕೆ ವಸ್ತುಗಳಿಗಾಗಿ ಮುಗಿಬಿದ್ದ ಜನತೆ ಇವತ್ತು ಮಲ್ಪೆಯಲ್ಲೂ ಅದನ್ನೇ ಪುನರಾವರ್ತನೆ ಮಾಡಿದ್ದಾರೆ. ಉಡುಪಿಗೆ ಆರು ಕಿಮೀ ದೂರದಲ್ಲಿರುವ ಮಲ್ಪೆ ಬಂದರು ಇಂದು ಬೆಳಿಗ್ಗೆ ಜನರಿಂದ ಗಿಜಿಗುಡುತ್ತಿತ್ತು.
ಲಾಕ್ ಡೌನ್ ಮಧ್ಯೆಯೂ ತರಕಾರಿ ಕೊಳ್ಳಲು ಮುಗಿಬಿದ್ದ ಕೋಟೆನಾಡಿನ ಜನ
ಕಳೆದ ಬಹಳಷ್ಟು ದಿನಗಳಿಂದ ಉಡುಪಿಯಲ್ಲಿ ಮೀನುಗಾರಿಕೆ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿತ್ತು. ಮೀನು ಕ್ಷಾಮದ ಜೊತೆಗೆ ಮೀನಿಗೆ ದುಬಾರಿ ಬೆಲೆಯಿಂದಾಗಿ ಜನ ಮೀನು ಖರೀದಿಯನ್ನೇ ನಿಲ್ಲಿಸಿದ್ದರು. ಆದರೆ ಇಂದು ಬೆಳಿಗ್ಗೆ ಮಲ್ಪೆಗೆ ಬಂದ ಬೋಟುಗಳಲ್ಲಿ ಭಾರೀ ಪ್ರಮಾಣದ ಮೀನು ಇರುವುದನ್ನು ಖಚಿತಪಡಿಸಿಕೊಂಡ ಜನ ಮಲ್ಪೆಯತ್ತ ದೌಡಾಯಿಸಿದರು. ಬೆಲೆಯೂ ತಕ್ಕಮಟ್ಟಿಗೆ ಕಡಿಮೆ ಇದ್ದ ಕಾರಣ ಜನ ಮುಗಿಬಿದ್ದು ಮೀನು ಖರೀದಿಸಿದ್ದಾರೆ.
ಒಂದೇ ಕಡೆ ನೂರಾರು ಜನ ಇದ್ದ ಪರಿಣಾಮ ಸಾಕಷ್ಟು ಜನಸಂದಣಿ ಉಂಟಾಗಿದೆ. ಈ ವೇಳೆ ಜನ ನಾಮುಂದು ತಾಮುಂದು ಎಂದು ಮೀನು ಖರೀದಿಸಿ ಮನೆಗಳತ್ತ ಹೊರಟರು. ಕೆಲಹೊತ್ತಿನ ಬಳಿಕ ಮಲ್ಪೆ ಬಂದರಿನಲ್ಲಿ ಜನಸಂದಣಿ ಕಡಿಮೆಯಾಗಿ ಯಥಾಸ್ಥಿತಿಗೆ ಬಂತು.