ಸುಬ್ರಹ್ಮಣ್ಯ ವಿವಾದ ಶಮನಕ್ಕೆ ಪ್ರಯತ್ನಿಸುತ್ತೇನೆ- ಪೇಜಾವರ ಶ್ರೀ
ಉಡುಪಿ, ಜೂನ್ 6: ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭುಗಿಲೆದ್ದಿರುವ ವಿವಾದ ಶಮನಕ್ಕೆ ಪೇಜಾವರ ಶ್ರೀ ಹೊರಟಿದ್ದಾರೆ. ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠ ಮತ್ತು ಸುಬ್ರಹ್ಮಣ್ಯ ದೇವಾಲಯದ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಇತಿಶ್ರೀ ಹಾಡಲು ಪೇಜಾವರ ಶ್ರೀ ಮುಂದಾಗಿದ್ದು, ನಾಳೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪೇಜಾವರ ಶ್ರೀ ಮಧ್ಯಸ್ಥಿಕೆಗೆ ತೆರಳಲಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ವಿವಾದದ ಬಗ್ಗೆ ಪೇಜಾವರರು ಕೊಟ್ಟ ಪ್ರತಿಕ್ರಿಯೆ ಹೀಗಿದೆ...
ಈ ಕುರಿತು ಸ್ಪಷ್ಟಪಡಿಸಿರುವ ಪೇಜಾವರ ಶ್ರೀ ಅವರು, ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾಳೆ ಮಧ್ಯಾಹ್ನದ ನಂತರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತೇನೆ. ಸಂಪುಟ ನರಸಿಂಹ ಮಠ ಹಾಗು ಸುಬ್ರಹ್ಮಣ್ಯ ದೇವಸ್ಥಾನದ ನಡುವೆ ಸಂಘರ್ಷ ಇರಬಹುದು. ಆದರೆ ಈ ವಿವಾದ ಪರಿಹಾರಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ. ಎಲ್ಲರ ಜೊತೆ ಮಾತುಕತೆ ನಡೆಸುತ್ತೇನೆ. ಅದಷ್ಟು ಸಮನ್ವಯ ಸಾಧಿಸಲು ತಿಳಿಸುತ್ತೇನೆ. ಮಠ, ದೇವಸ್ಥಾನದ ನಡುವೆ ಸೌಹಾರ್ದ ಸಾಮರಸ್ಯಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಈ ನಡುವೆ ವಿವಾದದ ವಿಚಾರವಾಗಿ ವಿಎಚ್ ಪಿ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್ ಹಾಗೂ ದೇವಾಲಯದ ಟ್ರಸ್ಟಿ ಮಹೇಶ್ ಕರಿಕಳ, ಗುರುಪ್ರಸಾದ್ ಪಂಜರ ಜತೆ ಪೇಜಾವರ ಶ್ರೀ ಮಾತುಕತೆ ನಡೆಸಿದ್ದಾರೆ. ಉಡುಪಿ ಮಠಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿದರು. ಚರ್ಚೆ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಾಲಯ ಹಾಗೂ ಮಠದ ಪರ ವಾದ ವಿವಾದವನ್ನು ಪೇಜಾವರ ಶ್ರೀ ಆಲಿಸಿದರು. ಚರ್ಚೆಯ ಬಳಿಕ ಸಮಸ್ಯೆ ಬಗೆಹರಿಸುವ ಬಗ್ಗೆ ಸ್ವಾಮೀಜಿ ಆಶ್ವಾಸನೆ ನೀಡಿರುವುದಾಗಿ ತಿಳಿದುಬಂದಿದೆ.
ಕುಕ್ಕೆ ಸುಬ್ರಮಣ್ಯದಲ್ಲಿ ಅರ್ಚಕರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
ನಾಳೆ ಸಂಪುಟ ನರಸಿಂಹಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಜತೆ ಪೇಜಾವರ ಶ್ರೀ ಮಾತುಕತೆ ನಡೆಸಲಿದ್ದು ಬಳಿಕ ಕ್ಷೇತ್ರದ ಆಡಳಿತ ಸಮಿತಿ, ಅಧಿಕಾರಿಗಳ ಜತೆ ಸಂವಾದ ನಡೆಸಲಿದ್ದಾರೆ.