ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಪೇಜಾವರ ಶ್ರೀ ಅಭಿಪ್ರಾಯವೇನು?
ಉಡುಪಿ, ಡಿಸೆಂಬರ್ 12: ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದಕ್ಕೆ ಹಿರಿಯ ಯತಿ ಪೇಜಾವರ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, "ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದೂಗಳು ಎಲ್ಲಿಗೆ ಹೋಗಬೇಕು? ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ, ಅವರನ್ನು ಅನಾಥರಾಗಿ ಬಿಡಲು ಸಾಧ್ಯವೇ?" ಎಂದು ಹೇಳಿದ್ದಾರೆ.
ಪೌರತ್ವ ಮಸೂದೆ ಪಾಸ್: ಅಮಿತ್ ಶಾ ಮಂಡಿಸಿದ ಈ 'ಐದು' ಮಾತಿಗೆ ಭಾರೀ ಕರತಾಡನ
"ಮುಸಲ್ಮಾನರಿಗಾದರೆ ಸಾಕಷ್ಟು ಅವಕಾಶ ಇದೆ. ಮಾನವೀಯ ದೃಷ್ಟಿಯಿಂದ ಈ ವಿಚಾರವನ್ನು ನೋಡಬೇಕಾಗಿದೆ. ಈ ಮಸೂದೆಯಿಂದ ಹಿಂದೂಗಳಿಗೂ ನೋವಿಲ್ಲ, ಮುಸಲ್ಮಾನರಿಗೂ ನೋವಿಲ್ಲ" ಎಂದಿರುವ ಶ್ರೀಗಳು, "ನಮ್ಮ ದೇಶದಲ್ಲಿರುವ ಮುಸಲ್ಮಾನರಿಗೆ ಇದರಿಂದ ಏನೂ ಅನ್ಯಾಯ ಆಗಲ್ಲ. ಬೇರೆ ದೇಶದ ಮುಸಲ್ಮಾನರಿಗೂ ತೊಂದರೆ ಆಗಲ್ಲ" ಎಂದಿದ್ದಾರೆ.
"ಹೊಸ ಮಸೂದೆಯಿಂದ ನಿರಾಶ್ರಿತ ಹಿಂದೂಗಳಿಗೆ ಸ್ಥಳ ದೊರೆತಂತಾಗುತ್ತೆ. ಇಲ್ಲಿನ ನಿರಾಶ್ರಿತರು ಅವರ ರಾಷ್ಡ್ರಗಳಿಗೆ ಹೋಗಲು ಅವಕಾಶಗಳಿವೆ. ನಿರಾಶ್ರಿತ ಮುಸ್ಲಿಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಪಾಕಿಸ್ತಾನ ಇದೆ. ಹಿಂದೂಗಳಿಗೆ ಮತ್ತೆಲ್ಲಿದೆ ಅವಕಾಶ? ಹೀಗಾಗಿ ಮಾನವೀಯವಾಗಿ ಯೋಚಿಸಿ" ಎಂದು ಶ್ರೀಗಳು ಮನವಿ ಮಾಡಿದ್ದಾರೆ.