ಪೇಜಾವರ ಶ್ರೀ ಆರೋಗ್ಯ; ಚೇತರಿಕೆಗೆ ಸಮಯ ಬೇಕೆಂದ ವೈದ್ಯರ ತಂಡ
ಉಡುಪಿ, ಡಿಸೆಂಬರ್ 24: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳಿಗೆ ಆರು ಜನ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಐದನೇ ದಿನವೂ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಇಂದು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹಾಗೂ ವೈದ್ಯರ ತಂಡ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬೆಂಗಳೂರು ತಜ್ಞ ವೈದ್ಯರ ತಂಡವೂ ನಮ್ಮ ಜೊತೆ ಇದೆ. ಏಮ್ಸ್ ನೊಂದಿಗೂ ನಿರಂತರ ಸಂಪರ್ಕ ಇಟ್ಕೊಂಡಿದ್ದೇವೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಸಚಿವೆ ನಿರ್ಮಲಾ ಚಿಕಿತ್ಸೆ ಸಂಬಂಧ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಸ್ವಾಮೀಜಿ ಅವರಿಗೆ ನಡೆಸಬೇಕಾದ ಎಲ್ಲಾ ಪರೀಕ್ಷೆ ನಡೆಸಲಾಗಿದೆ. ದೈನಂದಿನ ಸಣ್ಣ ಪರೀಕ್ಷೆಗಳು ನಡೆಯುತ್ತಿವೆ" ಎಂದು ಮಾಹಿತಿ ನೀಡಿದರು.
ಪೇಜಾವರ ಶ್ರೀಗಳ ಚಿಕಿತ್ಸೆಗೆ ದೆಹಲಿಯ ಏಮ್ಸ್ ವೈದ್ಯರ ನೆರವು
"ಶ್ರೀಗಳ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ. ಅವರು ಪೂರ್ಣ ಗುಣಮುಖರಾಗಲು ಇನ್ನಷ್ಟು ಸಮಯ ಬೇಕಾಗಬಹುದು. ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಶ್ವಾಸಕೋಶದಲ್ಲಿ ಸೋಂಕು ಇದೆ. ಮೊದಲನೇ ದಿನಕ್ಕೆ ಹೋಲಿಸಿದರೆ ಈಗ ಚೇತರಿಕೆ ಕಂಡಿದೆ. ಕಫದ ಪ್ರಮಾಣ ಕಡಿಮೆಯಾಗಿದೆ. ಉಸಿರಾಡಲು ಪ್ರಯತ್ನಿಸುತ್ತಿದ್ದಾರೆ. ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿದೆ. ಆದರೆ ವಯಸ್ಸಾದ ಕಾರಣ ತುಂಬಾ ಚೇತರಿಕೆಗೆ ಹೆಚ್ಚು ಸಮಯ ಹಿಡಿಯುತ್ತದೆ. ವೆಂಟಿಲೇಟರ್ ನಲ್ಲಿ ಇನ್ನೂ ಸಾಕಷ್ಟು ಸಮಯ ಇರಿಸ ಬೇಕಾಗಬಹುದು. ತಿಂಗಳವೆರೆಗೆ ಚಿಕಿತ್ಸೆ ನೀಡಬೇಕಾದರೂ ಆಶ್ಚರ್ಯವಿಲ್ಲ" ಎಂದು ವೈದ್ಯರ ತಂಡ ತಿಳಿಸಿದೆ.
ನಾಲ್ಕನೇ ದಿನವೂ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ
ಗಣ್ಯ ವ್ಯಕ್ತಿಗಳು ಬರುವುದರಿಂದ ಚಿಕಿತ್ಸೆಗೆ ಸಮಸ್ಯೆ ಆಗುತ್ತಿದೆ ಎಂದ ವೈದ್ಯರು, ಶ್ರೀಗಳಿಗೆ ತೊಂದರೆಯಾಗಬಾರದು. ಹಾಗಾಗಿ ಗಣ್ಯರು, ಭಕ್ತರು ಆಸ್ಪತ್ರೆಗೆ ಬಾರದಿದ್ದರೆ ಒಳಿತು. ಇದರಿಂದ ಚಿಕಿತ್ಸೆಗೆ ಅಡ್ಡಿಯಾಗುತ್ತದೆ" ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮನವಿ ಮಾಡಿದರು.