ಪೇಜಾವರ ಶ್ರೀಯವರ ಆರೋಗ್ಯಕ್ಕಾಗಿ ಮುಸ್ಲಿಮರಿಂದ ಪ್ರಾರ್ಥನೆ
ಉಡುಪಿ, ಆಗಸ್ಟ್ 20: ಉಡುಪಿಯ ಪೇಜಾವರ ಶ್ರೀಗಳು ಕಳೆದೊಂದು ವರ್ಷದಿಂದ ಬಾಧಿಸುತ್ತಿರುವ ಹರ್ನಿಯ ಶಸ್ತ್ರಚಿಕಿತ್ಸೆಗೆ ಇಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪರ್ಯಾಯ ಪೀಠಾಧಿಪತಿ ವಿಶ್ವೇಶ ತೀರ್ಥ ಸ್ವಾಮಿಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ.
ಪೇಜಾವರ ಶ್ರೀಗಳಿಗೆ ಇಂದು (ಆಗಸ್ಟ್ 20) ಹರ್ನಿಯ ಶಸ್ತ್ರಚಿಕಿತ್ಸೆ
ಈ ನಡುವೆ ಪೇಜಾವರ ಶ್ರೀಯವರ ಆರೋಗ್ಯಕ್ಕಾಗಿ ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ನೇತೃತ್ವದಲ್ಲಿ ಆಸ್ಪತ್ರೆಯ ಆವರಣದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು .ಈ ವೇಳೆ ಹಾಜಿ ಅಬೂಬಕರ್ ಪರ್ಕಳ, ಆರಿಫ್ ದೊಡ್ಡಣಗುಡ್ಡೆ ಮತ್ತಿತರರು ಭಾಗಿಯಾಗಿದ್ದರು.
ಹರ್ನಿಯಾ ನೋವನ್ನು ಹೊರತುಪಡಿಸಿದರೆ ಲವಲವಿಕೆಯಿಂದ ಇರುವ ಪೇಜಾವರ ಶ್ರೀ ಇಂದು ಬೆಳಗ್ಗೆ ದೈನಂದಿನ ಪೂಜಾ ಕಾರ್ಯಗಳನ್ನು ನೆರವೇರಿಸಿದ ಬಳಿಕ ಕಾರಿನಲ್ಲಿ ಆಸ್ಪತ್ರೆಗೆ ತೆರಳಿದರು.
ಆರೋಗ್ಯದ ತುರ್ತು ವಿಷಯವಾದ್ದರಿಂದ, ಅಷ್ಟಮಠಗಳ ಉಳಿದ ಸ್ವಾಮೀಜಿಗಳ ಒತ್ತಾಯದಿಂದ ಪೇಜಾವರ ಶ್ರೀ ಮಠದಿಂದ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಶ್ರೀಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವೇರಿದ ಬಳಿಕ ಸ್ವಾಮೀಜಿ, ಎರಡು ವರ್ಷಗಳ ಕಾಲ ಮಠದ ಪರಿಸರ ಬಿಟ್ಟು ಹೊರಗೆ ಕಾಲಿಡುವಂತಿಲ್ಲ.
ಇದೊಂದು ಸಣ್ಣ ಶಸ್ತ್ರಚಿಕಿತ್ಸೆ ಆಗಿದ್ದು ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ .