ಕೊನೆಯ ಆಸೆ ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ ಪೇಜಾವರ ಶ್ರೀ
ಉಡುಪಿ, ಡಿಸೆಂಬರ್ 29: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಡಿಸೆಂಬರ್ 29 ರ ಶನಿವಾರ ಬೆಳಿಗ್ಗೆ ಉಡುಪಿ ಮಠದಲ್ಲಿ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಕಳೆದಿದ್ದ ಶ್ರೀಗಳನ್ನು ನಿನ್ನೆ ರಾತ್ರಿ ಮಠಕ್ಕೆ ಕರೆದುಕೊಂಡು ಬರಲಾಗಿತ್ತು. ಮಠದಲ್ಲಿಯೇ ಕೊನೆಯ ಉಸಿರೆಳೆಯಬೇಕೆಂಬುದು ಶ್ರೀಗಳ ಆಸೆಯಾಗಿತ್ತು. ಅದರಂತೆ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾಗಿದ್ದಾರೆ.
ಆದರೆ ಶ್ರೀಗಳ ಕೊನೆಯ ಆಸೆಯೊಂದು ಪುರ್ಣವಾಗುವ ಮುನ್ನವೇ ಇಹಲೋಕವನ್ನು ಶ್ರೀಗಳು ತೊರೆದಿದ್ದಾರೆ.
ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಭಾಗವಹಿಸಿದ್ದ ಶ್ರೀಗಳಿಗೆ ರಾಮ ಮಂದಿರವನ್ನು ನೋಡುವ ತೀವ್ರ ಆಸೆಯಿತ್ತು. ಆದರೆ ಇನ್ನೇನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ.
ಜೀವಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಶ್ರೀಗಳ ಆಸೆಯಾಗಿತ್ತು. ಈ ಬಗ್ಗೆ ಹಲವು ಬಾರಿ ಶ್ರೀಗಳು ಹೇಳಿಕೊಂಡಿದ್ದರು. ಅಯೋಧ್ಯೆಯ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು ಶ್ರೀಗಳೇ.
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಆದ ಪ್ರಯತ್ನಗಳಲ್ಲಿ ಶ್ರೀಗಳು ಭಾಗವಹಿಸಿದ್ದರು. ಉಡುಪಿಯಲ್ಲಿ ನಡೆದ ಧರ್ಮ ಸಭೆ ಆಯೋಜಿಸಿದ್ದಾಗಲೂ ರಾಮ ಮಂದಿರದ ಬಗ್ಗೆ ಶ್ರೀಗಳು ಮಾತನಾಡಿದ್ದರು.
ಪೇಜಾವರ ಶ್ರೀಗಳ ಅತಿಮ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿದೆ. ಈಗಾಗಲೇ ಸಿಎಂ ಯಡಿಯೂರಪ್ಪ, ಸದಾನಂದ ಗೌಡ, ಶಾಸಕ ರಘುಪತಿ ಭಟ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಇನ್ನೂ ಅನೇಕ ಮುಖಂಡರು, ನಾಯಕರು ಉಡುಪಿಗೆ ಆಗಮಿಸಿದ್ದಾರೆ.
ಇಹಲೋಕ ತ್ಯಜಿಸಿದ ಶ್ರೀಗಳಿಗೆ ಮಠದಲ್ಲಿ ಅಂತಿಮ ಪೂಜೆ ನಡೆಯುತ್ತಿದೆ. ಕಿರಿಯ ಯತಿಗಳು ಪೂಜಾ ಕಾರ್ಯ ಮಾಡುತ್ತಿದ್ದಾರೆ.