ಪೇಜಾವರ ಶ್ರೀಗಳ ಧರ್ಮ ಸಹಿಷ್ಣುತೆಗೆ ಕಾರು ಚಾಲಕನ ಹೆಸರೇ ಸಾಕ್ಷಿ
ಉಡುಪಿ, ಡಿಸೆಂಬರ್ 29: ಪೇಜಾವರ ಶ್ರೀಗಳನ್ನು ಜಾತ್ಯಾತೀತ ನಿಲುವಿನ ಜನ ಸ್ವಲ್ಪ ಅನುಮಾನದಿಂದಲೇ ನೋಡುತ್ತಾರೆ. ಕಾವಿ ಧರಿಸಿರುವ ಅವರು ನಿಜವಾಗಿಯೂ ಜಾತ್ಯಾತೀತರೆ, ಧರ್ಮ ಸಹಿಷ್ಣುಗಳೇ ಎಂಬುದು ಅವರ ಅನುಮಾನ.
ಅಷ್ಟಮಠದ ಶ್ರೀಗಳಾಗಿದ್ದ ವಿಶ್ವೇಶ ತೀರ್ಥರು ಕೃಷ್ಣ ಪೂಜೆಯನ್ನು ತಪ್ಪಿಸಿದವರಲ್ಲ. ಕೃಷ್ಣ ಪೂಜೆ ವಿಚಾರದಲ್ಲಿ, ಮಠ ಸಂಪ್ರದಾಯದ ವಿಚಾರದಲ್ಲಿ ನಿಷ್ಠುರರು ಆದರೆ ಅವರು ಧರ್ಮ ಸಹಿಷ್ಣುಗಳಾಗಿದ್ದರು ಎಂಬುದಕ್ಕೆ ಅವರ ಕಾರಿನ ಚಾಲಕನೇ ಸಾಕ್ಷಿ.
ಹಿಂದೂ ಧರ್ಮ ಸಂಕೇತದಂತಿದ್ದ ಪೇಜಾವರ ಶ್ರೀಗಳ ಕಾರಿಗೆ ಚಾಲಕ ಒಬ್ಬ ಮುಸಲ್ಮಾನ. ಮುಸ್ಲೀಂ ವ್ಯಕ್ತಿಯನ್ನು ಬೇಕೆಂದೇ ಪೇಜಾವರ ಶ್ರೀಗಳು ಕಾರಿನ ಚಾಲಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಮುಸ್ಲಿಂ ವ್ಯಕ್ತಿಯನ್ನು ಕಾರಿನ ಚಾಲಕನನ್ನಾಗಿ ನೇಮಿಸಿಕೊಂಡಾಗ ಹಲವರು ವಿರೋಧಿಸಿದವು. ಕೆಲವು ಸಂಘಟನೆಗಳೂ ವಿರೋಧಿಸಿದವು ಆದರೆ ಶ್ರೀಗಳು ಯಾರ ಮಾತನ್ನೂ ಕೇಳಲಿಲ್ಲ.
ಕಳೆದ ಹದಿನಾಲ್ಕು ವರ್ಷದಿಂದ ಶ್ರೀಗಳ ಕಾರಿನ ಚಾಲಕನಾಗಿ ಕಾರ್ಯ ನಿರ್ವಹಿಸಿರುವುದು ಮುಸ್ಲಿಂ. ಮೊಹಮ್ಮದ್ ಆರಿಫ್ ಶ್ರೀಗಳ ಕೊನೆಯ ಗಾಲದಲ್ಲಿ ಅವರ ಕಾರಿನ ಚಾಲಕರಾಗಿದ್ದರು.
ಕಳೆದ 14 ವರ್ಷದಿಂದ ಮೊಹಮ್ಮದ್ ಆರಿಫ್ ಕುಟುಂಬದವರೇ ಶ್ರೀಗಳ ಕಾರಿನ ಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಮುಂದೆ ಅವರ ಅಣ್ಣ, ಅಪ್ಪ ಸಹ ಶ್ರೀಗಳಿಗೆ ಕಾರು ಚಾಲಕರಾಗಿ ಕೆಲಸ ಮಾಡಿದ್ದಾರೆ.
ಹೊರಗೆ ಕೆಲವರು ಶ್ರೀಗಳನ್ನು ಕೋಮುವಾದಿಗಳೆಂದು ಜರಿದವರಿದ್ದಾರೆ ಆದರೆ ಅವರು ನನಗೆ ಗುರುಗಳಾಗಗಿಯೇ ಇದ್ದರು ಎಂದು ಆರಿಫ್ ಹೇಳುತ್ತಾರೆ.
ವಿಶೇಷವೆಂದರೆ ಶ್ರೀಗಳು ಆರಿಫ್ಗೆ ನಮಾಜು ತಪ್ಪಿಸದಂತೆ ಸದಾ ಎಚ್ಚರ ಹೇಳುತ್ತಿದ್ದರಂತೆ. 'ಎಂದಿಗೂ ನಮಾಜು ತಪ್ಪಿಸಬೇಡ' ಎಂದು ಸದಾ ಶ್ರೀಗಳು ಹೆಳುತ್ತಿದ್ದರು ಎಂದು ಆರಿಫ್ ನೆನಪಿಸಿಕೊಂಡಿದ್ದಾರೆ.