ಶಿರೂರು ಶ್ರೀ ಚುನಾವಣೆ ಸ್ಪರ್ಧೆ ಬಗ್ಗೆ ಪೇಜಾವರ ಶ್ರೀ ಅನಿಸಿಕೆ ಇದು
ಕುಂದಾಪುರ (ಉಡುಪಿ ಜಿಲ್ಲೆ), ಏಪ್ರಿಲ್ 10: "ಮಠಾಧೀಶರು ರಾಜಕೀಯ ಪ್ರವೇಶಿಸಿದರೆ ಅವರ ಘನತೆಗೆ ಕುಂದುಂಟಾಗುತ್ತದೆ" ಎಂದು ಹೇಳುವ ಮೂಲಕ ಶಿರೂರು ಶ್ರೀಗಳಾದ ಲಕ್ಷ್ಮೀವರ ತೀರ್ಥರ ಚುನಾವಣೆ ಸ್ಪರ್ಧೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಕುಂದಾಪುರದಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರವೇಶಿಸಿದರೆ ಪಕ್ಷವೊಂದರ ನೀತಿ- ನಿಯಮ ಪಾಲಿಸಬೇಕು. ನಾಯಕರ ಮಾತು ಕೇಳಬೇಕು. ಇದರಿಂದ ಮಠಾಧೀಶರ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಶಿರೂರು ಸ್ವಾಮೀಜಿಯ ಅಧಿಕೃತ ರಾಜಕೀಯ 'ಪುರಪ್ರವೇಶ'
"ಹಿಂದುತ್ವ ಪ್ರತಿಪಾದಕ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಈ ಹಿಂದೆ ಹೇಳಿದ್ದೆ. ಆದರೆ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಯಿಂದ ಬದಲಾವಣೆ ಅಸಾಧ್ಯ. ಬದಲಿಗೆ ಹಿಂದುತ್ವ ಪ್ರತಿಪಾದಕ ಪಕ್ಷವನ್ನು ಬೆಂಬಲಿಸುವ ಅಗತ್ಯವಿದೆ. ಗೆದ್ದರೂ ಏಕಾಂಗಿಯಾಗಿ ಓರ್ವನಿಂದ ಹೆಚ್ಚಿನ ಬದಲಾವಣೆ ಅಸಾಧ್ಯ" ಎಂದಿದ್ದಾರೆ ಪೇಜಾವರ ಶ್ರೀಗಳು.
ಶಿರೂರು ಶ್ರೀಗಳಾದ ಲಕ್ಷ್ಮೀವರ ತೀರ್ಥರು ಚುನಾವಣೆ ಕಣಕ್ಕೆ ಇಳಿಯುವ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ, "ಅದು ಅವರ ವೈಯಕ್ತಿಕ ಇಚ್ಛೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು, ಇದೀಗ ತಮ್ಮ ಅನಿಸಿಕೆಯನ್ನು ಬಹಿರಂಗಪಡಿಸಿದ್ದಾರೆ.
ಉಡುಪಿಯ ಅಷ್ಟಮಠದ ಯತಿಗಳಲ್ಲಿ ಒಬ್ಬರಾದ ಶಿರೂರು ಶ್ರೀಗಳು ತಾವು ಉಡುಪಿ ಕೇತ್ರದಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುವುದು ಖಚಿತ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಅಷ್ಟ ಮಠದ ಯತಿಯೊಬ್ಬರ ರಾಜಕೀಯ ಪ್ರವೇಶ ಹಲವಾರು ಮಂದಿಗೆ ಇಷ್ಟವಾದಂತಿಲ್ಲ. ಆದರೆ ಅದನ್ನು ಬಹಿರಂಗವಾಗಿ ಪ್ರಕಟಿಸುತ್ತಿಲ್ಲ ಅಷ್ಟೇ.