ಬಿಕೋ ಎನ್ನುತ್ತಿದೆ ಪೇಜಾವರ ಶ್ರೀಗಳ ನಗೆಯಿಲ್ಲದ ಮಠ
ಉಡುಪಿ, ಜನವರಿ 01: ಪೇಜಾವರ ಶ್ರೀಗಳು ಅಗಲಿ ಎರಡು ದಿನಗಳು ಸರಿದಿವೆ. ಅವರಿಲ್ಲದ ಪೇಜಾವರ ಮಠ ಅಕ್ಷರಶಃ ಬಿಕೋ ಅನ್ನುತ್ತಿದೆ. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಮಠದಲ್ಲಿ ಪೇಜಾವರರ ಇರುವಿಕೆಯಿಲ್ಲದೇ ಮೌನ ಆವರಿಸಿದೆ.
ಎಂಬತ್ತೊಂಬತ್ತರ ಹರೆಯದಲ್ಲೂ ಪಾದರಸದಂತೆ ಚುರುಕಾಗಿದ್ದ ಶ್ರೀಗಳು ಉಡುಪಿಯ ಪೇಜಾವರ ಮಠದಲ್ಲಿ ಮಕ್ಕಳಿಗೆ ನಿತ್ಯ ಪಾಠ ಮಾಡುತ್ತಿದ್ದರು. ದಿನವೂ ಅಲ್ಲಲ್ಲಿ ಪ್ರಯಾಣಿಸುತ್ತಿದ್ದರು. ಮತ್ತೆ ಮಠಕ್ಕೆ ವಾಪಸ್ಸಾಗಿ ಭಕ್ತರ ಜೊತೆ ಬೆರೆಯುತ್ತಿದ್ದರು. ಮಠದೊಳಗೆ ಪೂಜೆ, ತಪ ಎಂದು ನಿರಂತರ ಓಡಾಡುತ್ತಿದ್ದರು. ಆದರೆ ಶ್ರೀಗಳಿಲ್ಲದ ಮಠದಲ್ಲೀಗ ನೀರವ ಮೌನ...
ಪೇಜಾವರ ಶ್ರೀಗಳು ಎಲ್ಲಿಗೇ ಪ್ರಯಾಣಿಸಲಿ, ಏನೇ ಕಾರ್ಯಕ್ರಮ ಇಟ್ಟುಕೊಂಡಿರಲಿ, ಮಕ್ಕಳಿಗೆ ನಿತ್ಯದ ಪಾಠ ಮಾತ್ರ ತಪ್ಪಿಸುತ್ತಿರಲಿಲ್ಲ. ಕೆಲವು ಕಡೆಗಳಿಗೆ ಮಕ್ಕಳನ್ನು ಕಟ್ಟಿಕೊಂಡೇ ಹೋಗುತ್ತಿದ್ದರು. ಮಕ್ಕಳಿಗೆ ನಿತ್ಯ ತಾವೇ ಪಾಠ ಮಾಡಿದರೆ ಮಾತ್ರ ಅವರಿಗೆ ನೆಮ್ಮದಿ. ಈ ಮಕ್ಕಳೀಗ ಪೇಜಾವರ ಮಠದಲ್ಲಿ ಗುರುಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಮಠದ ಒಳಹೊಕ್ಕ ತಕ್ಷಣ ಜಪ, ಪೂಜೆ ನಿರತ ಪೇಜಾವರರು ಕಾಣಸಿಗುತ್ತಿದ್ದರು. ಅವರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಈಗ ಅವರ ಭಾವಚಿತ್ರ ಮಾತ್ರ ಕಾಣುತ್ತಿದೆ. ಯಾರೇ ಬರಲಿ, ಭಕ್ತರಿರಲಿ, ಮಕ್ಕಳಿರಲಿ, ವೃದ್ಧರಿರಲಿ ಎಲ್ಲರಿಗೂ ಭೇಟಿಯ ಅವಕಾಶ ನೀಡುತ್ತಾ ತುಂಬ ಸರಳವಾಗಿ ಬದುಕಿದ್ದವರು. ಶ್ರೀಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವವರು ಬಂದರೂ ಭೇಟಿಗೆ ಯಾವತ್ತೂ ಹಿಂದೇಟು ಹಾಕಿದವರಲ್ಲ.
ಪೇಜಾವರ ಶ್ರೀಗಳಿಗೆ ಒಂದು ವಾರದ ಮುನ್ನವೇ ಸಾವಿನ ಮುನ್ಸೂಚನೆಯಿತ್ತೇ?
ಮಠಾಧೀಶರು ಕೃಷ್ಣೈಕ್ಯರಾದ ಹನ್ನೆರಡು ಅಥವಾ ಹದಿಮೂರನೇ ದಿನಕ್ಕೆ ಆರಾಧನೆ ನಡೆಯುವುದು ಸಂಪ್ರದಾಯ. ಆದರೆ ಶ್ರೀಗಳ ಬೃಂದಾವನ ಬೆಂಗಳೂರಿನ ವಿದ್ಯಾಪೀಠದಲ್ಲಿರುವುದರಿಂದ ಪೇಜಾವರ ಮಠದಲ್ಲಿ ಅದು ನಡೆಯುವುದಿಲ್ಲ. ಹೀಗಾಗಿ ಮಠದಲ್ಲಿ ಯಾರೆಂದರೆ ಯಾರೂ ಇಲ್ಲ. ಅವರ ಆಪ್ತ ಸಹಾಯಕರು ಮತ್ತು ಅಡುಗೆಯವರು ಶ್ರೀಗಳನ್ನು ನೆನೆದು ದುಃಖಿಸುತ್ತಿದ್ದಾರೆ.
ಕೊನೆಯ ಆಸೆ ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ ಪೇಜಾವರ ಶ್ರೀ
ಪೇಜಾವರ ಮಠ ಮಾತ್ರವಲ್ಲ, ಇಡೀ ರಥಬೀದಿಯೇ ಸ್ತಬ್ಧವಾದಂತೆ ಕಾಣುತ್ತಿದೆ. ಕೃಷ್ಣಮಠ ಅಂದರೆ ಪೇಜಾವರ ಶ್ರೀಗಳು, ಪೇಜಾವರ ಶ್ರೀಗಳೆಂದರೆ ಕೃಷ್ಣಮಠ ಎಂಬಷ್ಟು ಛಾಪು ಒತ್ತಿ ಮರೆಯಾದ ಶ್ರೀಗಳು ಇಂದು ನೆನಪಾಗಿ ಉಳಿದಿದ್ದಾರೆ.