ಕ್ರೈಸ್ತ ಮತ ಪ್ರಚಾರಕ್ಕೆ ಪೇಜಾವರ ಶ್ರೀಗಳ ತಮ್ಮ! ವಿಚಿತ್ರ ಪೋಸ್ಟ್ ಗೆ ಮಠದ ಸ್ಪಷ್ಟನೆ
ಉಡುಪಿ, ಆಗಸ್ಟ್ 14: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆಮಂತ್ರಣ ಪತ್ರಿಕೆಯೊಂದರಲ್ಲಿ 'ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಹೋದರ ವಸಂತ ಆರ್. ಪೈ ಎಂಬುವವರು ಆಗಸ್ಟ್ 11 ರಂದು ಬೆಂಗಳೂರಿನ ಜೆಪಿನಗರದ ಏಳನೇ ಹಂತದಲ್ಲಿ ರಾಯಲ್ ಪ್ರೀಸ್ಟ್ ಹುಡ್ ಮಿಶನ್ ಚರ್ಚಿನಲ್ಲಿ ಉಪನ್ಯಾಸ ನೀಡುತ್ತಾರೆ' ಎಂಬ ವಿಚಿತ್ರ ಸುದ್ದಿಯೊಂದು ಹರಿದಾಡುತ್ತಿದೆ. ಆಗಸ್ಟ್ 11 ಮುಗಿದಿದ್ದರೂ, ಈ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಉಡುಪಿಯ ಪೇಜಾವರ ಮಠ ಸ್ಪಷ್ಟನೆ ನೀಡಿದೆ. "ಆಮಂತ್ರಣ ಪತ್ರಿಕೆಯಲ್ಲಿರುವ ವಸಂತ ಪೈ, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಸಹೋದರನಲ್ಲ" ಎಂದಿದೆ.
ದೇವಾಲಯಗಳಿಂದ ಮಾತ್ರ ಉಳಿದಿದೆ ನಮ್ಮ ಧರ್ಮ, ಸಂಸ್ಕೃತಿ
"Jesus Christ is Aalive and He raises Living Testimony" ಎಂಬ ವಿಷಯದ ಬಗ್ಗೆ ವಸಂತ ಮಾತನಾಡುತ್ತಾರೆ ಎಂದು ಈ ಆಮಂತ್ರಣದಲ್ಲಿ ಬರೆಯಲಾಗಿತ್ತು. "ಅವರು ಶ್ರೀ ಕೃಷ್ಣ ದೇವಾಲಯ ಉಡುಪಿಯ ಪರ್ಯಾಯ ಸ್ವಾಮೀಜಿ ಶ್ರೀ ವಿಶ್ವೇಶತೀರ್ಥ ಅವರ ಸ್ವಂತ ಸಹೋದರ" ಎಂದು ಎಂದು ಉಲ್ಲೇಖಿಸಲಾಗಿತ್ತು. ಜೊತೆಗೆ ಎರಡು ದೂರವಾಣಿ ಸಂಖ್ಯೆಯನ್ನೂ ನೀಡಲಾಗಿತ್ತು. ಈ ದೂರವಾಣಿಗಳಲ್ಲಿ ಒಂದಕ್ಕೆ ಫೋನ್ ಮಾಡಿದರೆ ಪ್ರತಿಕ್ರಿಯೆ ಇಲ್ಲ. ಇನ್ನೊಂದಕ್ಕೆ ಮಾಡಿದರೆ, "ಇದು ಯಾರೋ ಬೇಕಂತಲೇ ಮಾಡಿದ ಕೆಲಸ. ಇದಕ್ಕೂ ನನಗೂ ಸಂಬಂಧವಿಲ್ಲ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ" ಎಂಬ ಉತ್ತರವನ್ನು ವ್ಯಕ್ತಿಯೊಬ್ಬರು ನೀಡುತ್ತಿದ್ದಾರೆ.
ಈ ಆಮಂತ್ರಣದಲ್ಲಿ ವಸಂತ ಆರ್.ಪೈ ಎಂದು ಬರೆದು, ವ್ಯಕ್ತಿಯೊಬ್ಬರ ಫೋಟೊವನ್ನೂ ಹಾಕಲಾಗಿದೆ.
ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇಲ್ಲದಿದ್ದರೆ ಹೇಗೆ? ಪೇಜಾವರ ಶ್ರೀಗಳ ಪ್ರಶ್ನೆ
ಈ ಬಗ್ಗೆ ಪೇಜಾವರ ಮಠ ಸ್ಪಷ್ಟನೆ ನೀಡಿದ್ದು, "ಪೇಜಾವರ ಸ್ವಾಮೀಜಿಗಳ ಇಬ್ಬರು ಸಹೋದರರಲ್ಲಿ ಒಬ್ಬರು ಹಲವು ಕಾಲಗಳ ಹಿಂದೆಯೇ ತೀರಿಕೊಂಡರು. ಇನ್ನೊಬ್ಬರು ಶ್ರೀ ರಘುರಾಮಾಚಾರ್ ಎಂಬುವವರು. ಅವರು ಉಡುಪಿಯಲ್ಲಿ ವಾಸವಿದ್ದಾರೆ. ಜೊತೆಗೆ ಚಿತ್ರದಲ್ಲಿ ಪೈ ಎಂಬ ಸರ್ನೇಮ್ ನೀಡಲಾಗಿದೆ. ಅದು ಮಂಗಳೂರಿನಲ್ಲಿ ಕೊಂಕಣಿ ಮಾತನಾಡುವ ಜನರ ಸರ್ನೇಮ್. ಈ ಮಾಹಿತಿ ಆಧಾರ ರಹಿತ. ಶ್ರೀಗಳ ಹೆಸರನ್ನು ಬಳಸಿಕೊಂಡು ಕೆಲವು ಕ್ರೈಸ್ತರು ಮತಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸುಳ್ಳುಸುದ್ದಿಯನ್ನು ಹಂಚಬೇಡಿ. ನಮ್ಮ ಕಾಲದ ಮಹಾನ್ ಗುರುಗಳಾದ ಪೇಜಾವರ ಶ್ರೀಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ಸುಳ್ಳು ಸುದ್ದಿಗಳನ್ನು ಹಂಚಬೇಡಿ" ಎಂದು ಮನವಿ ಮಾಡಿದೆ.