"ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿರ"
ಉಡುಪಿ, ಡಿಸೆಂಬರ್.22: ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲದ ಕೆಎಂಸಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಕಳೆದು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಉಸಿರಾಟದ ಸಮಸ್ಯೆಯಿಂದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶ್ರೀಗಳಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವಯೋಸಹಜವಾಗಿ ಅವರ ದೇಹದ ಸ್ಪಂದನೆ ನಿಧಾನವಾಗಿದೆ. ಈ ಮಧ್ಯೆ ಅವರ ಆರೋಗ್ಯದ ಬಗ್ಗೆ ಆತಂಕಗೊಂಡಿರುವ ಸ್ವಾಮೀಜಿಗಳು ಮತ್ತು ಗಣ್ಯರು ಇಂದೂ ಕೂಡ ಭೇಟಿ ನೀಡುತ್ತಿದ್ದಾರೆ.
ಪೇಜಾವರ ಶ್ರೀ ಆರೋಗ್ಯ: ಸಂಜೆ ಐದು ಗಂಟೆ ವೈದ್ಯಕೀಯ ವರದಿ
ನಾಡಿನಾದ್ಯಂತ ಇರುವ ಮಠಾಧೀಶರು, ಗಣ್ಯರು ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದಾರೆ. ಇವತ್ತು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಪೇಜಾವರ ಕಿರಿಯ ಶ್ರೀಗಳು ತುಸು ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಶ್ರೀಗಳ ಎದೆಯಲ್ಲಿರುವ ಕಫ ಕರಗುತ್ತಿದ್ದು, ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
"ಪೇಜಾವರ ಶ್ರೀಗಳ ಆರೋಗ್ಯದ ಬಗ್ಗೆ ಭಕ್ತರಿಗೆ ಆತಂಕ ಬೇಕಿಲ್ಲ"
ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಯೋ ಸಹಜವಾಗಿ ರಿಕವರಿ ಸ್ಲೋ ಆಗುತ್ತಿದೆ. ಭಕ್ತರು ಯಾರೂ ಕೂಡಾ ಉದ್ವೇಗಕ್ಕೆ ಒಳಗಾಗಬೇಡಿ ಎಂದು ಪೇಜಾವರ ಮಠದ ಕಿರಿಯ ಶ್ರೀಗಳು ಹೇಳಿದ್ದಾರೆ.
ನಾಡಿನ ಹಿರಿಯ ಯತಿ, ಸಂತ ಪೇಜಾವರ ಶ್ರೀಗಳ ಅರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಶುಕ್ರವಾರ ಮುಂಜಾನೆ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಶ್ರೀಗಳಿಗೆ ಕೆಎಂಸಿಯ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಶನಿವಾರವಷ್ಟೇ ಸ್ವಾಮೀಜಿಗಳು ಕಣ್ಣು ಬಿಡುವ ಪ್ರಯತ್ನ ಮಾಡಿದ್ದರು ಎಂಬುದೇ ಪೇಜಾವರ ಶ್ರೀಗಳ ಶಿಷ್ಯರು ಮತ್ತು ಅಭಿಮಾನಿ ಬಳಗಕ್ಕೆ ಸಮಾಧಾನ ತಂದಿದೆ.