ಈಶಪ್ರಿಯ ತೀರ್ಥ ಸ್ವಾಮೀಜಿ ಅದಮಾರು ಮಠಾಧಿಪತಿ
ಉಡುಪಿ, ಜೂ 19: ಶ್ರೀ ಕೃಷ್ಣ ಮಠಗಳಲ್ಲಿ ಒಂದಾದ ಅದಮಾರು ಮಠಕ್ಕೆ ಉತ್ತರಾಧಿಕಾರಿ ಪಟ್ಟಾಭಿಷೇಕ ಧಾರ್ಮಿಕ ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದೆ.
ಜಿಲ್ಲೆಯ ಶಿರೂರಿನ ಇಂಜಿನಿಯರಿಂಗ್ ಪದವೀಧರ ಶ್ರೀಶ ಎಸ್ ಗುರುವಾರ (ಜೂ 19) ಮಠದ ಕಿರಿಯ ಪೀಠಾಧಿಪತಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ನೂತನ ಪೀಠಾಧಿಪತಿಗಳಿಗೆ 'ಈಶಪ್ರಿಯ ತೀರ್ಥ ಸ್ವಾಮೀಜಿ' ಎಂದು ಮರುನಾಮಕರಣ ಮಾಡಲಾಗಿದೆ. (ಇಂಜಿನಿಯರಿಂಗ್ ವಿದ್ಯಾರ್ಥಿ ಉಡುಪಿ ಮಠದ ಉತ್ತರಾಧಿಕಾರಿ)
ಕಾಪು ಸಮೀಪದ ಬಾಣ ತೀರ್ಥ
ಗುರುವಾರ ಬೆಳಗ್ಗೆ ಉಡುಪಿ ಕಾಪು ಸಮೀಪ ಬಾಣ ತೀರ್ಥದಲ್ಲಿ ಸನ್ಯಾಸ ದೀಕ್ಷೆಯ ಪೂರ್ವಭಾವಿ ಪ್ರಕ್ರಿಯೆ ಆರಂಭವಾಗಿತ್ತು.
ಕುಂಜಾರು
ಇದಾದ ನಂತರ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆಯ ಮೂಲಕ ನೂತನ ಉತ್ತರಾಧಿಕಾರಿಗಳು ತೆರಳಿದರು.
ಅದಮಾರು ಪೀಠಾಧಿಪತಿಗಳು
ಹಾಲಿ ಅದಮಾರು ಪೀಠಾಧಿಪತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು ತಮ್ಮ ಉತ್ತರಾಧಿಕಾರಿಗೆ ಸನ್ಯಾಸ ದೀಕ್ಷೆ ಮತ್ತು ಮಂತ್ರೋಪದೇಶ ಕಾರ್ಯಕ್ರಮ ನಡೆಸಿಕೊಟ್ಟರು.
ಗಣಹೋಮ
ಅದಮಾರು ಮೂಲಮಠದಲ್ಲಿ ಗಣಹೋಮ ಮೊದಲಾದ ಧಾರ್ಮಿಕ ಆಚರಣೆಗಳು ಮಠದ ವಿದ್ವಾಂಸ ಶಿಬರೂರು ವಾಸುದೇವ ಆಚಾರ್ಯರ ನೇತೃತ್ವದಲ್ಲಿ ಈಗಾಗಲೇ ನಡೆದಿದೆ.
ವಿದಿವಿಧಾನಗಳು
ಉತ್ತರಾಧಿಕಾರಿಯಾಗಿ ನೇಮಿಸುವ ನಾನಾ ವಿಧಿವಿಧಾನಗಳು ಭಾನುವಾರದಿಂದ (ಜೂ 15) ಆರಂಭಗೊಂಡಿದ್ದವು. ಶ್ರಾದ್ದ, ಧನ್ವಂತರಿ ಹೋಮ, ಗೋದಾನ, ಕೇಶಮುಂಡನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ಸಂಪನ್ನಗೊಂಡಿದೆ.
ಹಿರಿಯ ಶ್ರೀಗಳ ಅಭಿಪ್ರಾಯ
ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿರುವ ಶ್ರೀಶ ಅವರಿಗೆ ಆಧ್ಯಾತ್ಮಕದಲ್ಲಿ ಹೆಚ್ಚಿನ ಒಲವು ಇದೆ. ಪದವೀಧರನಾಗಿರುವುದರಿಂದ ತಿಳುವಳಿಕೆ ಕೂಡಾ ಇದೆ.
ಅದಮಾರು ಶ್ರೀಗಳ ಅಭಿಪ್ರಾಯ
ನಮ್ಮ ಮಠದ ಅಧೀನದಲ್ಲಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುವ ವಿಶ್ವಾಸ ಶ್ರೀಶ ಅವರ ಮೇಲಿದೆ ಎಂದು ಹಾಲಿ ಅದಮಾರು ಶ್ರೀಗಳಾದ ವಿಶ್ವಪ್ರಿಯ ತೀರ್ಥ ಶ್ರೀಗಳು ಹೇಳಿದ್ದಾರೆ.
ನೂತನ ಶ್ರೀಗಳು
ಅದಮಾರು ಸ್ವಾಮೀಜಿಗಳ ಪ್ರವಚನದಿಂದ ಪ್ರಭಾವಿತನಾಗಿ, ಶ್ರೀಕೃಷ್ಣನ ಪೂಜೆಗೆ ಅವಕಾಶ ಕಲ್ಪಿಸುವಂತೆ ಸನ್ಯಾಸದೀಕ್ಷೆ ಪಡೆಯುತ್ತಿರುವ ಶ್ರೀಶ ಅವರು ಶ್ರೀಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಪೂಜಾ ಕೈಂಕರ್ಯ
ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕೆ ಆಚಾರ್ಯ ಮಧ್ವರು ಸ್ಥಾಪಿಸಿದ್ದ ಅಷ್ಠಮಠಗಳ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಇಂಜಿನಿಯರಿಂಗ್ ಪದವೀಧರರೊಬ್ಬರು ಮಠದ ಪೀಠಾಧಿಪತಿಯಾಗಿದ್ದಾರೆ.
ಇಂಜಿನಿಯರಿಂಗ ಪದವೀಧರ
ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಗಿರುವ ನೂತನ ಶ್ರೀಗಳು ಪೂರ್ವಾಶ್ರಮದಲ್ಲಿ ಚಂದ್ರಶೇಖರ ಮತ್ತು ಗೌರಿ ದಂಪತಿಗಳ ಪುತ್ರ. ಅವರ ತಂದೆ ತೀರ್ಥಹಳ್ಳಿಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದವರು.