ಚಿತ್ರಗಳು; ಕೃಷ್ಣನಗರಿಯ ಪರ್ಯಾಯೋತ್ಸವ ತಯಾರಿ ನೋಡಲೆಷ್ಟು ಚೆಂದ
ಉಡುಪಿ, ಜನವರಿ 13: ನಾಡಹಬ್ಬ ಉಡುಪಿ ಪರ್ಯಾಯಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಹದಿನೇಳನೇ ತಾರೀಕಿನ ರಾತ್ರಿಯಿಂದ ಮರುದಿನ ಸಂಜೆವರೆಗೂ ಪರ್ಯಾಯೋತ್ಸವ ನಡೆಯಲಿದ್ದು, ಇದಕ್ಕಾಗಿ ಕೃಷ್ಣನಗರಿ ಉಡುಪಿ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ.
ಕೃಷ್ಣಮಠ ಮತ್ತು ಅಷ್ಟಮಠಗಳು ಅಪೂರ್ವ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ. ರಥಬೀದಿಯಲ್ಲಿ ಪರ್ಯಾಯದ ಸಡಗರ ಮೊದಲುಗೊಂಡಿದೆ.
ಈಶಪ್ರಿಯ ಶ್ರೀಗಳ ಅಧಿಕಾರ ಸ್ವೀಕಾರ
ಎರಡು ವರ್ಷದ ಹಿಂದೆ ಸರ್ವಜ್ಞ ಪೀಠಾರೋಹಣ ಮಾಡಿದ್ದ ಪಲಿಮಾರು ಮಠದ ಸ್ವಾಮೀಜಿಗಳ ಪರ್ಯಾಯ ಅವಧಿ ಇನ್ನು ಮೂರು ದಿನದಲ್ಲಿ ಅಂತ್ಯಗೊಳ್ಳಲಿದ್ದು, ಅದಮಾರು ಈಶಪ್ರಿಯ ಶ್ರೀಗಳು ಪರ್ಯಾಯ ಪೀಠಾಧೀಶರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹದಿನೆಂಟರಂದು ಮುಂಜಾನೆ ದಂಡತೀರ್ಥದಲ್ಲಿ ಮಿಂದು ಬರಲಿರುವ ಸ್ವಾಮೀಜಿಗಳು ಬಳಿಕ ಪರ್ಯಾಯದ ಐತಿಹಾಸಿಕ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಈ ಐತಿಹಾಸಿಕ ಮೆರವಣಿಗೆ ಮುಂಜಾನೆ ಮೂರೂವರೆ ಸುಮಾರಿಗೆ ನಡೆಯಲಿದೆ. ನಗರದ ಜೋಡುಕಟ್ಟೆಯಿಂದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಸಾಗಿ ಕೃಷ್ಣಮಠದಲ್ಲಿ ಸಮಾವೇಶಗೊಳ್ಳಲಿದೆ. ಬೆಳಗಿನವರೆಗೆ ನಡೆಯಲಿರುವ ಈ ಮೆರವಣಿಗೆ ನೋಡಲು ಉಡುಪಿ ಜನತೆ ಕಾತರರಾಗಿದ್ದಾರೆ.
ಉಡುಪಿ ಕೃಷ್ಣಮಠದ ರಥಬೀದಿಯಲ್ಲೀಗ ಸಪ್ತೋತ್ಸವ ಸಂಭ್ರಮ
ಸಂಜೆ ಹೊತ್ತಿಗೆ ಪರ್ಯಾಯ ದರ್ಬಾರ್
ಬಳಿಕ ಅದಮಾರು ಸ್ವಾಮೀಜಿಗಳ ಪೀಠಾರೋಹಣದ ವಿವಿಧ ವಿಧಿ-ವಿಧಾನಗಳು ಸಂಪನ್ನಗೊಂಡ ಬಳಿಕ ಸರ್ವಜ್ಞಪೀಠಾರೋಹಣ ನಡೆಯಲಿದೆ.
ಪ್ರತಿ ಪರ್ಯಾಯ ಸಂದರ್ಭ ಮುಂಜಾನೆ ಹೊತ್ತಿಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ನಡೆಯುವುದು ವಾಡಿಕೆ. ಆದರೆ ಈ ಬಾರಿ ಸಂಜೆ ಹೊತ್ತಿಗೆ ಪರ್ಯಾಯ ದರ್ಬಾರ್ ನಡೆಸಲು ಅದಮಾರು ಪರ್ಯಾಯ ಸ್ವಾಗತ ಸಮಿತಿ ತೀರ್ಮಾನಿಸಿದೆ. ಪರ್ಯಾಯ ದರ್ಬಾರ್ ನಲ್ಲಿ ಅಷ್ಟಮಠಾಧೀಶರಲ್ಲದೆ ನಾಡಿನ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಪರ್ಯಾಯಕ್ಕೆ ಸಕಲ ಸಿದ್ಧತೆಗಳೂ ಭರದಿಂದ ನಡೆದಿವೆ.
ಭಕ್ತರನ್ನು ಸ್ವಾಗತಿಸುತ್ತಿರುವ ಉಡುಪಿ ದಾರಿ
ಉಡುಪಿ ಪರ್ಯಾಯವೆಂದರೆ ಅದು ಬರೀ ಕೃಷ್ಣಮಠಕ್ಕೆ ಸೀಮಿತವಲ್ಲ; ಕೃಷ್ಣಮಠ, ರಥಬೀದಿ, ಅಷ್ಟಮಠಗಳು, ನಗರದ ಪ್ರಮುಖ ರಸ್ತೆಗಳು, ಕಟ್ಟಡಗಳು ಹೀಗೆ-ಇಡೀ ಉಡುಪಿಯೇ ಸಿಂಗಾರಗೊಂಡು ಭಕ್ತರನ್ನು ಸ್ವಾಗತಿಸುತ್ತಿದೆ. ಶುಕ್ರವಾರ ಸಂಜೆಯಿಂದ ಮೊದಲುಗೊಂಡು ಶನಿವಾರ ಸಂಜೆ ತನಕ ನಾಡಿನ ಜನತೆ ಪರ್ಯಾಯದ ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ. ಅಂದರೆ ಒಂದಿಡೀ ದಿನ ಉಡುಪಿ ನಿದ್ರಿಸುವುದಿಲ್ಲ ಎಂದರೂ ತಪ್ಪಲ್ಲ. ಅಬಾಲವೃದ್ಧರಾದಿಯಾಗಿ ಎಲ್ಲರೂ ಉತ್ಸವವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಕೃಷ್ಣಮಠದಲ್ಲಿ ಈ ಬಾರಿ ಮಡೆಸ್ನಾನ, ಎಡೆಸ್ನಾನ ಇಲ್ಲ
ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮ
ಪರ್ಯಾಯ ಸಂದರ್ಭ ನಗರದ ವಿವಿಧೆಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಈಗಾಗಲೇ ವೇದಿಕೆಗಳು ಸಿದ್ಧಗೊಂಡಿದ್ದು, ರಾತ್ರಿ ರಸಮಂಜರಿ -ನೃತ್ಯ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.